ಮಂಗಳೂರಿನ ಆಳಿಕೆಯಲ್ಲಿ ಗಾಂಜಾ ಮಾರುತ್ತಿದ್ದ ಇಬ್ಬರ ಬಂಧನ
ಮಂಗಳೂರು, ಡಿಸೆಂಬರ್ 31 : ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ವಿಟ್ಲ ಪೊಲೀಸರು ಶುಕ್ರವಾರ ಸಂಜೆ ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಬಂಟ್ವಾಳದ ಕನ್ಯಾನ ನಿವಾಸಿ ಖಲಂದರ್ (22), ಉತ್ತರಪ್ರದೇಶ ರಾಜ್ಯದ ಅರ್ಮಾನ್ (25) ಎಂದು ಗುರುತಿಸಲಾಗಿದೆ.
ಬಂಧಿತರಿಂದ ಸುಮಾರು 1,50,000 ಲಕ್ಷ ಮೌಲ್ಯದ 13 ಕೆಜಿ ಗಾಂಜಾ ಹಾಗೂ ಸಾಗಾಟಕ್ಕೆ ಬಳಸಿದ ಒಂದು ಸ್ಕೂಟರ್ ಸೇರಿದಂತೆ ಒಟ್ಟು 2 ಲಕ್ಷ ರೂ ಮೌಲ್ಯದ ಸ್ವತ್ತನ್ನು ವಶಪಡಿಸಿಕೊಂಡಿದ್ದಾರೆ.
30 ರಂದು ಬಂಟ್ವಾಳ ಉಪ ವಿಭಾಗದ ಡಿ ವೈ ಎಸ್ಪಿ ರವೀಶ್ ಸಿ ಆರ್ ಮತ್ತು ತಂಡದವರಿಗೆ ಬಂದ ಮಾಹಿತಿಯನ್ನಾಧರಿಸಿ ತನಿಖೆ ಮಾಡಿದಾಗ ಅಳಿಕೆ ಗ್ರಾಮದ ಕಾಂತಡ್ಕ ಎಂಬಲ್ಲಿ ಇಬ್ಬರು ವ್ಯಕ್ತಿಗಳು ತಮ್ಮ ಬಳಿ ಗಾಂಜಾವನ್ನು ಇಟ್ಟು ಕೊಂಡು ಮಾರಾಟ ಮಾಡುತ್ತಿರುವುದು ಗೊತ್ತಾಗಿದೆ.
ಬಂಟ್ವಾಳ ತಾಲ್ಲೂಕಿನಲ್ಲಿ ವ್ಯಾಪಕವಾಗಿ ಗಾಂಜಾ ಮಾರಾಟವಾಗುತ್ತಿದೆ ಎಂಬ ದೂರಿನಂತೆ ಬಂಟ್ವಾಳ ಉಪ ವಿಭಾಗದ ವತಿಯಿಂದ ಈ ಗಾಂಜಾ ಮಾರಾಟವನ್ನು ತಡೆಗಟ್ಟಲು ಎಸ್ಪಿ ಆದೇಶ ನೀಡಿದ್ದರು. ಇದಕ್ಕಾಗಿ ಬಂಟ್ವಾಳ ಡಿ ವೈ ಎಸ್ಪಿ ರವೀಶ್ ಸಿ ಆರ್ ರವರ ನೇತೃತ್ವದಲ್ಲಿ ಒಂದು ತಂಡ ರಚಿಸಲಾಗಿತ್ತು.
ಈ ಪತ್ತೆ ಕಾರ್ಯದಲ್ಲಿ ಡಿ ವೈ ಎಸ್ ಪಿ ರವೀಶ್, ಸಿ ಆರ್, ಸಿ ಪಿ ಐ ಮಂಜಯ್ಯ, ವಿಟ್ಲ ಪಿ ಎಸ್ ಐ ನಾಗರಾಜು, ಎಎಸ್ಐ ರುಕ್ಮಯ್ಯ, ಎಚ್ ಸಿ ಬಾಲಕೃಷ್ಣ, ಹರಿಶ್ಚಂದ್ರ, ರಾಮಚಂದ್ರ, ಸೀತರಾಮ ಗೌಡ, ಪಿಸಿ ಗಳಾದ ಪ್ರವೀಣ್ ರೈ, ಭವಿತ್ ರೈ, ಸತ್ಯ ಪ್ರಕಾಶ್ ರೈ, ಉದಯ್, ವಿಜಯೇಶ್ವರ್ ಮುಂತಾದ ಸಿಬ್ಬಂದಿ ಭಾಗವಹಿಸಿದ್ದರು. ಅಲ್ಲದೇ ದ.ಕ. ಜಿಲ್ಲೆ ಎಸ್ಪಿ ಭೂಷಣ್ ಭೋರಸೆ ಈ ತಂಡಕ್ಕೆ ಬಹುಮಾನವನ್ನು ಘೋಷಿಸಿದ್ದಾರೆ.