ಆಗ್ನೆಸ್ ಕಾಲೇಜಿನಲ್ಲಿ ‘ವಿಜ್ಞಾನ ಕನ್ನಡ’ ಕಾರ್ಯಾಗಾರ
ಮಂಗಳೂರು, ಆಗಸ್ಟ್ 18: ಸಂತ ಆಗ್ನೆಸ್ ಕಾಲೇಜಿನ ಕನ್ನಡ ಸಂಘ ಮತ್ತು ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿಯ ಸಹಯೋಗದೊಂದಿಗೆ ವಿಜ್ಞಾನ ಕನ್ನಡ - ಕನ್ನಡದಲ್ಲಿ ವೈಜ್ಞಾನಿಕ ಬರವಣಿಗೆಯ ಪ್ರಾಮುಖ್ಯತೆ ಮತ್ತು ವೈಜ್ಞಾನಿಕ ಅಭಿವೃದ್ಧಿ ಎಂಬ ಎರಡು ದಿನಗಳ ಕಾರ್ಯಾಗಾರವನ್ನು ಕಾಲೇಜಿನ ಹಾಲ್ನಲ್ಲಿ ಹಮ್ಮಿಕೊಳ್ಳಲಾಯಿತು.
ಹಿರಿಯ ಪತ್ರಕರ್ತ ಶ್ರೀ ಗೋವಿಂದ ಡಿ. ಬೆಳಗಾಂವ್ಕರ್ ಅವರು ಕಾರ್ಯಾಗಾರವನ್ನು ಉದ್ಘಾಟಿಸಿದರು. ಪ್ರಮುಖ ಬರಹಗಾರರಾದ ಶ್ರೀ ಎಂ. ಅಬ್ದುಲ್ ರೆಹೆಮಾನ್ ಪಾಷಾರವರು ಕಾರ್ಯಾಗಾರದ ನಿರ್ದೇಶಕರಾಗಿದ್ದರು. ಕಾಲೇಜಿನ ಪ್ರಾಂಶುಪಾಲೆ ಸಿ. ಡಾ. ಎಂ. ಜೆಸ್ವೀನಾ ಎ.ಸಿ. ಅಧ್ಯಕ್ಷತೆ ವಹಿಸಿದ್ದರು.
ಶ್ರೀ ಗೋವಿಂದ ಡಿ. ಬೆಳಗಾಂವ್ಕರ್ ಅವರು ತಮ್ಮ ಉದ್ಘಾಟನಾ ಭಾಷಣದಲ್ಲಿ "ಜನರಲ್ಲಿ ವೈಜ್ಞಾನಿಕ ಮನೋಧರ್ಮವನ್ನು ಅಭಿವೃದ್ಧಿ ಪಡಿಸುವ ಅವಶ್ಯಕತೆಯಿದೆ. ಇತ್ತೀಚಿನ ದಿನಗಳಲ್ಲಿ ವಾಟ್ಸ್ ಅಪ್ ವೀಡಿಯೋಗಳನ್ನು ಅಥವಾ ಸಂದೇಶಗಳನ್ನು ಇತರರಿಗೆ ರವಾನಿಸುವಾಗ ವೀಡಿಯೋ ಅಥವಾ ಸಂದೇಶದ ವಿಷಯವು ನೈಜತೆಯನ್ನು ಹೊಂದಿದೆಯೇ ಎಂದು ಪರಿಶೀಲಿಸುವ ಅಗತ್ಯವಿದೆ" ಎಂದರು.
ನಾವು ಪತ್ರಿಕೆಗಳಲ್ಲಿ ಅನೇಕ ಬಾರಿ ವಿರೋಧಾತ್ಮಕ ವರದಿಗಳನ್ನು ಕಾಣಬಹುದು. ಒಂದು ವೈಜ್ಞಾನಿಕ ಲೇಖನವನ್ನು ಬರೆಯುವಾಗ ಬಲವಾದ ಸಂಶೋಧನಾ ತಳ ಇರಬೇಕು ಅಲ್ಲದೆ ಇತರರು ಪರಿಶೀಲಿಸಿದ "ಸಂಶೋಧನಾ ವರದಿಗಳನ್ನು ಉಲ್ಲೇಖಿಸಬೇಕು. ಹೆಚ್ಚಿನ ವೈಜ್ಞಾನಿಕ ಲೇಖನಗಳನ್ನು ತಜ್ಞ ತಂಡದವರ ಪರಿಶೀಲನೆಗೆ ಒಳಪಡಿಸಿದ ನಂತರವೇ ಅದನ್ನು ವೈಜ್ಞಾನಿಕ ಮಾಸಿಕಗಳಲ್ಲಿ ಪ್ರಕಟಿಸಲಾಗುತ್ತದೆ. ವೈಜ್ಞಾನಿಕ ಬರವಣಿಗೆಯನ್ನು ಜನರು ವಿಜ್ಞಾನದ ಪ್ರಗತಿ ಎಂದು ಪರಿಗಣಿಸುತ್ತಾರೆ. ಆದ್ದರಿಂದ ಬರವಣಿಗೆ ಕೌಶಲ್ಯಗಳನ್ನು ಸುಧಾರಿಸಲು ಮತ್ತು ಸಂಶೋಧನಾಭಿರುಚಿಯನ್ನು ಅಭಿವೃದ್ಧಿಪಡಿಸುವ ಅಗತ್ಯವಿದೆ. ಆಗ ಮಾತ್ರ ಪರಿಣಾಮಕಾರಿ ಲೇಖನಗಳು ಪ್ರಕಟಗೊಳ್ಳಲು ಸಾಧ್ಯ," ಎಂದರು.
ಇನ್ನು ಕಾರ್ಯಾಗಾರದ ನಿರ್ದೇಶಕರಾದ ಎಂ. ಅಬ್ದುಲ್ ರೆಹೆಮಾನ್ ಮಾತನಾಡಿ "ಶೇಕಡಾ 80ರಷ್ಟು ಸಾಕ್ಷರತೆಯ ಪ್ರಮಾಣವನ್ನು ಹೊಂದಿದ್ದರೂ ಜನರಲ್ಲಿ ಮೂಲಭೂತ ವಿಜ್ಞಾನದ ಬಗ್ಗೆ ಪ್ರಶ್ನೆಗಳನ್ನು ಕೇಳಿದಾಗ ಅವರ ಜ್ಞಾನ ಕಳಪೆಯಾಗಿದೆ. ಆದ್ದರಿಂದ ಜನರಲ್ಲಿ ವೈಜ್ಞಾನಿಕ ಆಸಕ್ತಿಯನ್ನು ಅಭಿವೃದ್ಧಿಪಡಿಸುವುದು ಆದ್ಯ ಕರ್ತವ್ಯವಾಗಿದೆ," ಎಂದರು.
ವೈಜ್ಞಾನಿಕ ಬರವಣಿಗೆಗಳಲ್ಲಿ ಸತ್ಯ, ಸಂಶೋಧನೆ, ಅಭಿಪ್ರಾಯಗಳು ಇರಬೇಕು ಮತ್ತು ಸರಳವಾದ ಭಾಷೆಯಲ್ಲಿ ಬರೆಯಬೇಕು. ಆಗ ಮಾತ್ರ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಸಹ ಆ ಲೇಖನಗಳನ್ನು ಅರ್ಥಮಾಡಿಕೊಳ್ಳಬಹುದು ಎಂದರು.
ಪ್ರಾಂಶುಪಾಲೆ ಸಿ. ಡಾ. ಎಂ. ಜೆಸ್ವೀನಾ ಅವರು ಮಾತನಾಡಿ "ಭಾಷೆ ವಿಜ್ಞಾನವನ್ನು ಆಧರಿಸುತ್ತದೆ ಮತ್ತು ವಿಜ್ಞಾನ ಭಾಷೆಗೆ ಪೂರಕವಾಗಿದೆ. ಭಾಷೆಯು ವೈಜ್ಞಾನಿಕ ದೃಷ್ಟಿಕೋನಗಳನ್ನು ವ್ಯಕ್ತಪಡಿಸುವಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತದೆ. ಜ್ಞಾನವನ್ನು ವರ್ಧಿಸಲು ವಿಭಿನ್ನ ಸ್ಥಳೀಯ ಭಾಷೆಗಳಲ್ಲಿ ವೈಜ್ಞಾನಿಕ ಬರವಣಿಗೆಗಳು ಪ್ರಕಟಗೊಳ್ಳುವುದು ಇಂದಿನ ಅಗತ್ಯಗಳಲ್ಲೊಂದಾಗಿದೆ ಎಂದರು.