ಮೂಡಬಿದಿರೆಯಲ್ಲಿ ವಿಜಯೋತ್ಸವ ಕಂಬಳಕ್ಕೆ ಹರಿದು ಬಂದ ಜನಸಾಗರ
ಮಂಗಳೂರು, ನವೆಂಬರ್ 12: ಜಾನಪದ ಕ್ರೀಡೆ ಕಂಬಳ ಕರಾವಳಿಯ ಅವಿಭಾಜ್ಯ ಅಂಗ. ಹಲವು ಅಡ್ಡಿ, ಆತಂಕ, ಹೋರಾಟಗಳ ನಡುವೆ ಹೊಯ್ದಾಡಿದ ಕರಾವಳಿಯ ಜಾನಪದ ಕ್ರೀಡೆ ಕಂಬಳ ಈಗ ಮತ್ತೆ ಆರಂಭಗೊಂಡಿದೆ . ಸರಿ ಸುಮಾರು 1 ವರ್ಷ 8 ತಿಂಗಳ ಬಳಿಕ ಕರಾವಳಿಯಲ್ಲಿ ಕಂಬಳದ ಸಂಭ್ರಮ ಕಳೆಕಟ್ಟಿದೆ .
ಕಂಬಳ ಆಚರಣೆಗೆ ತಡೆಯಾಜ್ಞೆ ನೀಡಲು ಸುಪ್ರೀಂ ನಕಾರ
ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯ ಕಡಲಕೆರೆ ನಿಸರ್ಗಧಾಮದಲ್ಲಿ ಹೊನಲು ಬೆಳಕಿನ ಕೋಟಿ ಚೆನ್ನಯ ಜೋಡುಕರೆ ಕಂಬಳಕ್ಕೆ ನಿನ್ನೆ ಸಂಜೆ ಚಾಲನೆ ನೀಡಲಾಯಿತು. ನಿಷೇಧದ ಕಾರ್ಮೋಡ ಕವಿದು ಕವುಚಿ ಮಲಗಿದ್ದ ಕರಾವಳಿಯ ಕಂಬಳ ಈ ಮೂಲಕ ಮತ್ತೆ ತನ್ನ ಗತವೈಭವಕ್ಕೆ ಮರಳಿತು. ಕಂಬಳದ ಹೊಸ ಅಧ್ಯಾಯ ಮತ್ತೆ ತೆರೆದುಕೊಂಡಿತು.
ವಿಜಯೋತ್ಸವ ಕಂಬಳ
ರಾಜ್ಯ ಸರಕಾರದ ಅಧ್ಯಾದೇಶಕ್ಕೆ ಸುಪ್ರಿಂ ಕೋರ್ಟ್ ತಡೆ ನೀಡಲು ನಿರಾಕರಿಸಿ ಕಂಬಳಕ್ಕೆ ಅನುವು ಮಾಡಿಕೊಟ್ಟಿದೆ. ಈ ಹಿನ್ನೆಲೆಯಲ್ಲಿ ಕಂಬಳ ಅಭಿಮಾನಿಗಳು ಮೂಡಬಿದಿರೆಯಲ್ಲಿ ಆರಂಭಗೊಂಡ ಈ ಜೋಡುಕೆರೆ ಕಂಬಳವನ್ನು ವಿಜಯೋತ್ಸವದ ಕಂಬಳವಾಗಿ ಆಚರಿಸುತ್ತಿದ್ದಾರೆ.
140 ಜತೆ ಕೋಣಗಳು ಭಾಗಿ
ಮೂಡಬಿದಿರೆ ಕ್ಷೇತ್ರದ ಶಾಸಕ ಅಭಯಚಂದ್ರ ಜೈನ್ ಅವರ ನೇತೃತ್ವದಲ್ಲಿ ನಡೆದ ಈ ಕೋಟಿ ಚೆನ್ನಯ ಜೋಡುಕೆರೆ ಕಂಬಳದಲ್ಲಿ ಸರಿ ಸುಮಾರು 140 ಕ್ಕೂ ಹೆಚ್ಚು ಜತೆ ಕೋಣಗಳು ಭಾಗವಹಿಸಿದವು. ಉಡುಪಿ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಕಂಬಳ ತಂಡಗಳು ಈ ಜೋಡುಕೆರೆ ಕಂಬಳದಲ್ಲಿ ಭಾಗವಹಿಸಿದ್ದವು .
ಎಲ್ಲಾ ವಿಭಾಗಗಳಲ್ಲಿ ಸ್ಪರ್ಧೆ
ಕೊಂಬು, ಕಹಳೆ, ಚಂಡೆಯ ಝೇಂಕಾರದೊಂದಿಗೆ ಕನೆ ಹಲಿಗೆಯ ಕೋಣಗಳು ನಿಶಾನೆಯತ್ತ ನೀರು ಹಾಯಿಸುತ್ತಿದ್ದಂತೆ ಕಂಬಳಾಭಿಮಾನಿಗಳ ಘೋಷಣೆ ಮುಗಿಲುಮುಟ್ಟಿತ್ತು. ಹಗ್ಗ ಹಿರಿಯ, ಹಗ್ಗ ಕಿರಿಯ, ಕನೆ ಹಲಿಗೆ, ನೇಗಿಲು ಹಿರಿಯ , ನೇಗಿಲು ಕಿರಿಯ ಹೀಗೆ ಎಲ್ಲಾ ವಿಭಾಗಗಳಲ್ಲೂ ಸ್ಪರ್ಧೆಗಳನ್ನು ಇಡಲಾಗಿತ್ತು.
ಸಾವಿರಾರು ಅಭಿಮಾನಿಗಳು ಭಾಗಿ
ನಿನ್ನೆ ರಾತ್ರಿ ಹೊನಲು ಬೆಳಕಿನಲ್ಲಿ ಕಂಬಳ ಸ್ಪರ್ಧೆಗಳು ನಡೆದಿದ್ದು ಇಂದು ಕೂಡ ಮುಂದುವರೆದಿದೆ. ನಿನ್ನೆ ಸಂಜೆಯಿಂದ ಸಹಸ್ರಾರು ಕಂಬಳಾಭಿಮಾನಿಗಳು, ಗಣ್ಯರು ಆಗಮಿಸಿ ಕಂಬಳದ ಸಂಭ್ರಮವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ .
ತುಂಬಿ ತುಳುಕಿದ ಗ್ಯಾಲರಿ
ಮಹಿಳೆಯರ ಗ್ಯಾಲರಿ ಸೇರಿದಂತೆ ಕಂಬಳ ಗದ್ದೆಯ ಇಕ್ಕಲೆಗಳಲ್ಲಿ ಇರುವ ಗ್ಯಾಲರಿ ತುಂಬಿ ತುಳುಕುತ್ತಿದ್ದು ಒಟ್ಟಿನಲ್ಲಿ ಒಂದೂವರೆ ವರ್ಷದ ಬಳಿಕ ನಡೆಯುತ್ತಿರುವ ಕಂಬಳವನ್ನು ತುಳುವರಿಗೆ ತುಳುವರೇ ಸಂಭ್ರಮಿಸುತ್ತಿದ್ದಾರೆ .