ಸ್ವಾಮೀಜಿಗೆ ಅವಮಾನ, ಶಾಸಕ ಜೈನ್ ವಿರುದ್ಧ ಸೋಮವಾರ ಬೃಹತ್ ಪ್ರತಿಭಟನೆ
ಮಂಗಳೂರು, ಮಾರ್ಚ್ 19: ಮೂಡಬಿದಿರೆ ಶ್ರೀ ಕ್ಷೇತ್ರ ಕರಿಂಜೆಯ ಶ್ರೀ ಮುಕ್ತಾನಂದ ಸ್ವಾಮೀಜಿಗೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ ಶಾಸಕ ಅಭಯಚಂದ್ರ ಜೈನ್ ವಿರುದ್ಧ ಪ್ರತಿಭಟನೆ ನಡೆಸಲು ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ಸಿದ್ಧತೆ ನಡೆಸಿದೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಸ್ವಾಮೀಜಿಯವರನ್ನು ಅವಮಾನಿಸಿದ ಶಾಸಕ ಅಭಯಚಂದ್ರ ಜೈನ್ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು ಹಾಗು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ವಿಹಿಂಪ ಮತ್ತು ಬಜರಂಗದಳ ಒತ್ತಾಯಿಸಿವೆ. ಈ ಸಂಬಂಧ ಇಂದು ಮೂಡಬಿದ್ರೆಯಲ್ಲಿ ಹಿಂದೂ ಸಂಘಟನೆಗಳು ಬೃಹತ್ ಪ್ರತಿಭಟನೆ ನಡೆಸಲಿವೆ.
ಕರಿಂಜೆ ಸ್ವಾಮೀಜಿ ಅವರನ್ನು ಏಕ ವಚನದಲ್ಲಿ ನಿಂದಿಸಿದ್ದಾರೆ ಹಾಗೂ ಸವಾಲು ಎಸೆದಿದ್ದಾರೆ ಎಂದು ಶಾಸಕ ಜೈನ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಹಿಂದು ಸಂಘಟನೆಗಳು ಇದೀಗ ಅವರ ವಿರುದ್ಧ ಪ್ರತಿಭಟನೆ ನಡೆಸಲಿವೆ.
ಸ್ವಾಮೀಜಿಗೆ ಏಕವಚನ ಪ್ರಯೋಗ, ಶಾಸಕ ಜೈನ್ ವಿರುದ್ಧಆಕ್ರೋಶ
ಕರಿಂಜೆ ಶ್ರೀಗಳು ಸಾರ್ವಜನಿಕ ಶನಿಪೂಜೆಯಲ್ಲಿ ಮುಖ್ಯಮಂತ್ರಿ ಹಾಗೂ ಶಾಸಕ ಅಭಯಚಂದ್ರ ಜೈನ್ ರನ್ನು ರಾಕ್ಷಸರಿಗೆ ಹೋಲಿಸಿದ್ದಾರೆ ಎನ್ನಲಾಗಿದ್ದು, ಈ ಸಂಬಂಧ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ್ದ ಜೈನ್, ಕರಿಂಜೆ ಶ್ರೀ ಸರಕಾರಿ ಜಾಗ ಕಬಳಿಸಿದ್ದಾರೆ ಎಂದು ದೂರಿದ್ದರು. ಮಾತ್ರವಲ್ಲ ಚುನಾವಣೆಗೆ ನಿಲ್ಲುವಂತೆ ಅವರಿಗೆ ಸವಾಲು ಕೂಡಾ ಎಸೆದಿದ್ದರು.
ಈ ನಡುವೆ ಕರಿಂಜೆ ಕ್ಷೇತ್ರದ ಮುಕ್ತಾನಂದ ಸ್ವಾಮೀಜಿ ಮಾತನಾಡಿ ಶಾಸಕ ಜೈನ್ ತಮ್ಮ ವಿರುದ್ಧ ಸುಳ್ಳು ಹೇಳಿಕೆ ನೀಡಿದ್ದು, ಅವರಿಗೆ ಶ್ರೀರಾಮ ಉತ್ತಮ ಬುದ್ಧಿ ಹಾಗೂ ಮುಖ್ಯಪ್ರಾಣ ದೇವರು ಸರಿಯಾದ ಉತ್ತರ ನೀಡಲಿ ಎಂದು ಪ್ರಾರ್ಥಿಸಿಕೊಂಡಿದ್ದಾರೆ.
ಈ ಎಲ್ಲಾ ಹಿನ್ನೆಲೆಯಲ್ಲಿ ಹಿಂದೂ ಸಂಘಟನೆಗಳು ಇಂದು ಅಂದರೆ ಮಾರ್ಚ್ 19ರಂದು ಮೂಡುಬಿದಿರೆಯಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ಹಾಗೂ ಸಭೆ ಆಯೋಜಿಸಿವೆ. ಸಂಜೆ 3 ಗಂಟೆಗೆ ಮೂಡುಬಿದಿರೆ ಶ್ರೀ ವೆಂಕಟರಮಣ ದೇವಸ್ಥಾನದಿಂದ ಹೊರಡಲಿರುವ ಪ್ರತಿಭಟನಾ ಮೆರವಣಿಗೆ ಸ್ವರಾಜ್ ಮೈದಾನದಲ್ಲಿ ಕೊನೆಗೊಂಡು ಅಲ್ಲಿ ಬೃಹತ್ ಪ್ರತಿಭಟನೆ ನಡೆಯಲಿದೆ.
ಚುನಾವಣೆ ಹೊಸ್ತಿಲಲ್ಲಿ ಕರಿಂಜೆ ಸ್ವಾಮೀಜಿ ವಿರುದ್ದ ಹೇಳಿಕೆ ನೀಡಿ ಶಾಸಕ ಜೈನ್ ಹಿಂದೂ ಸಂಘಟನೆಗಳ ವಿರೋಧ ಕಟ್ಟಿಕೊಂಡಿದ್ದಾರೆ. ಒಟ್ಟಿನಲ್ಲಿ ಸೋಲರಿಯದ ಸರದಾರ ಎಂದು ಗುರುತಿಸಿಕೊಂಡಿದ್ದ ಶಾಸಕ ಅಭಯಚಂದ್ರ ಜೈನ್ ಅವರನ್ನು ಮುಂದಿನ ಚುನಾವಣೆಯಲ್ಲಿ ಸೋಲಿಸಲು ಬಿಜೆಪಿ ಹಾಗೂ ಸಂಘ ಪರಿವಾರ ಸ್ವಾಮೀಜಿ ವಿಷಯವನ್ನು ದಾಳವಾಗಿ ಬಳಸಿಕೊಳ್ಳುತ್ತಿವೆ.