ದೀಪಕ್ ಹತ್ಯೆ: ಟಾರ್ಗೆಟ್ ಗ್ರೂಪ್ ಸದಸ್ಯನ ಫೋಟೋ, ಖಾದರ್ ಹೇಳಿದ್ದೇನು?
ಮಂಗಳೂರು, ಜನವರಿ 5: ಕಾಟಿಪಳ್ಳ ದೀಪಕ್ ರಾವ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ 'ಟಾರ್ಗೆಟ್' ಗ್ರೂಪಿನ ಇಲ್ಯಾಸ್ ತಮ್ಮ ಜೊತೆ ಇದ್ದ ಫೋಟೋ ವಿಚಾರಕ್ಕೆ ರಾಜ್ಯ ಆಹಾರ ಪೂರೈಕೆ ಸಚಿವ ಯು.ಟಿ ಖಾದರ್ ಸ್ಪಷ್ಟೀಕರಣ ನೀಡಿದ್ದಾರೆ.
ದೀಪಕ್ ರಾವ್ ಯಾರು? ಕೊಲೆ ಆಗಲು ಕಾರಣವೇನು?
ದೀಪಕ್ ರಾವ್ ಹತ್ಯೆಯಲ್ಲಿ ಇಲ್ಯಾಸ್ ಎನ್ನುವಾತನ ಭಾಗಿಯಾಗಿದ್ದಾನೆ ಎಂದು ಶಂಕಿಸಲಾಗಿದ್ದು, ಇದೀಗ ಸಚಿವ ಯುಟಿ ಖಾದರ್ ಜೊತೆ ಇಲ್ಯಾಸ್ ಇರುವ ಫೋಟೋಗಳು ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್ ಆಗಿವೆ. ಈ ಹಿನ್ನೆಲೆಯಲ್ಲಿ ಸ್ವತಃ ಯುಟಿ ಖಾದರ್ ಅವರೇ ಮಂಗಳೂರಿನಲ್ಲಿ ಶುಕ್ರರವಾರ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ್ದು, ಅವರು ಏನೆಲ್ಲ ಹೇಳಿದ್ದಾರೆ ಎನ್ನುವುದನ್ನು ಮುಂದೆ ಓದಿ.
"ನನಗೂ ಇಲ್ಯಾಸಿಗೂ ಯಾವ ಸಂಬಂಧವೂ ಇಲ್ಲ. ದೀಪಕ್ ಹತ್ಯೆಯಲ್ಲೂ ಇಲ್ಯಾಸ್ ಪಾತ್ರ ಇಲ್ಲ. ಹತ್ಯೆ ಸಂದರ್ಭದಲ್ಲಿ ಅಪಪ್ರಚಾರ ಮಾಡುತ್ತಿದ್ದು ಹೆಸರು ಕೆಡಿಸುವ ಯತ್ನ ನಡೆಯುತ್ತಿದೆ" ಎಂದು ಸ್ಪಷ್ಟಪಡಿಸಿದರು.
ಅಪಪ್ರಚಾರದ ಮೂಲಕ ಜನರಲ್ಲಿ ಅಪನಂಬಿಕೆ ಸೃಷ್ಟಿಸಲು ಸಾಧ್ಯವಿಲ್ಲ. ಯಾವುದೋ ಫೋಟೊ ಹಿಡಿದು ತೇಜೋವಧೆ ಮಾಡುತ್ತಿದ್ದಾರೆ. ಹಿಂದೆ ಝುಬೈರ್ ಕೊಲೆ ಪ್ರಕರಣದಲ್ಲಿಯೂ ಇಂಥದ್ದೇ ಅಪಪ್ರಚಾರ ನಡೆದಿತ್ತು.
ಉಳ್ಳಾಲದಲ್ಲಿ ಟಾರ್ಗೆಟ್ ಗ್ರೂಪ್ ಚಟುವಟಿಕೆ ಇಲ್ಲ. ಹತ್ತು ವರ್ಷಗಳ ಹಿಂದೆ ಟಾರ್ಗೆಟ್ ಹೆಸರಿನಲ್ಲಿ ಗ್ರೂಪ್ ಇತ್ತು. ಬಳಿಕ ಪೊಲೀಸರು ಅಲ್ಲಿದ್ದವರನ್ನು ಓಡಿಸಿದ್ದು, ಅಲ್ಲಿಂದ ಮನೆ ಸಹಿತ ಓಡಿದವರು ಕಾಟಿಪಳ್ಳ, ಸುರತ್ಕಲ್ ನಲ್ಲಿ ನೆಲೆಸಿದ್ದರು ಎಂದು ತಿಳಿಸಿದರು.
ದೀಪಕ್ ರಾವ್ ಕೊಲೆ ತನಿಖೆ ನಡೆಸಲು ಪೊಲೀಸರಿಗೆ ಎಲ್ಲಾ ಫ್ರೀಡಂ ಕೊಡುತ್ತೇವೆ. ಈ ವಿಚಾರದಲ್ಲಿ ಎಲ್ಲಾ ಪಕ್ಷಗಳು ಒಗ್ಗಟ್ಟಾಗಿ ಪರಿಹರಿಸಬೇಕು ಎಂದು ಹೇಳಿದರು.