ಢೋಂಗಿ, ಲೋಫರ್ ಹೇಳಿಕೆ ವಿವಾದ: ಡ್ಯಾಮೇಜ್ ಕಂಟ್ರೋಲ್ ಗೆ ಮುಂದಾದ ಖಾದರ್
ಮಂಗಳೂರು, ಮಾರ್ಚ್ 2: ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಅವರ 'ಢೋಂಗಿ, ಲೋಫರ್' ಹೇಳಿಕೆಗೆ ಮುಸ್ಲಿಂ ಸಮುದಾಯದಿಂದಲೇ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಈ ಹಿನ್ನಲೆಯಲ್ಲಿ ಸಚಿವ ಖಾದರ್ ಡ್ಯಾಮೇಜ್ ಕಂಟ್ರೋಲ್ ಗೆ ಮುಂದಾಗಿದ್ದಾರೆ.
ಕೊಲ್ಲಿ ರಾಷ್ಟ್ರದಲ್ಲಿ ಉದ್ಯೋಗದಲ್ಲಿರುವ ಕರಾವಳಿಗರನ್ನು ನಾನು ಢೋಂಗಿಗಳು, ಲೋಫರ್ ಗಳು ಎಂದು ಹೇಳಿದ್ದಲ್ಲ ಎಂದು ಖಾದರ್ ಸ್ಪಷ್ಟನೆ ನೀಡಿದ್ದಾರೆ.
ಮಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, "ನಾನು ಲೋಫರ್ ಎಂದು ಹೇಳಿದ್ದು ಕೊಲ್ಲಿ ರಾಷ್ಟ್ರದಲ್ಲಿ ಕುಳಿತು ನಾನು ಏನು ಮಾಡಬೇಕು? ಏನು ಮಾಡಬಾರದು? ಎಲ್ಲಿಗೆ ಹೋಗಬೇಕು? ಎಲ್ಲಿಗೆಲ್ಲ ಹೋಗಬಾರದು? ಯಾರೊಂದಿಗೆ ಮಾತನಾಡಬೇಕು ಎಂದು ವಾಟ್ಸಪ್, ಫೇಸ್ ಬುಕ್ ನಲ್ಲಿ ನಿರ್ದೇಶನ ನೀಡುವರಿಗೆ," ಎಂದು ಅವರು ತಿಳಿಸಿದ್ದಾರೆ.
"ನಾನು ಪವಿತ್ರ ಭಾರತದಲ್ಲಿ ಹುಟ್ಟಿರಬಹುದು. ಪವಿತ್ರ ಮೆಕ್ಕಾದಲ್ಲಿ ಸಾಯಬೇಕೆಂದು ಆಸೆ ಇದೆ. ಸೌದಿಯಲ್ಲಿ ಕುಳಿತು ಸಾಮಾಜಿಕ ಜಾಲತಾಣದಲ್ಲಿ ನನಗೆ ನಿರ್ದೇಶನ ನೀಡುತ್ತಿದ್ದ ಮೂವರಿಗೆ ಮಾತ್ರ ಲೋಫರ್ ಎಂದು ಹೇಳಿದ್ದೇನೆ. ಸೌದಿಯಲ್ಲಿರುವ ಆ ಮೂವರಿಗೆ ಅದು ರಾಯಲ್ ಹೆಸರು," ಎಂದು ಅವರು ವ್ಯಂಗ್ಯವಾಡಿದ್ದಾರೆ.
ಈ ಹಿಂದೆ ಖಾದರ್ ಮಾತಿನ ವಿಡಿಯೋ ವೈರಲ್ ಆಗುತ್ತಿದ್ದಂತೆ ಮುಸ್ಲಿಂ ಸಮುದಾಯದ ಮಂದಿಯೇ ವಿರೋಧ ಸೂಚಿಸಿದ್ದರು. ಸಾಮಾಜಿಕ ಜಾಲತಾಣದಲ್ಲಿ ಖಾದರ್ ಮಾತಿಗೆ ಟೀಕೆ ವ್ಯಕ್ತವಾಗುತ್ತಿರುವಾಗಲೇ ಕೆಲವು ಕಿಡಿಗೇಡಿಗಳು ಸಚಿವರ ಕ್ಷೇತ್ರ ಉಳ್ಳಾಲದಲ್ಲಿ ಫ್ಲೆಕ್ಸ್ , ಬ್ಯಾನರ್ ಗಳನ್ನು ಹರಿದು ಹಾಕಿದ್ದರು. ಈ ಹಿನ್ನಲೆಯಲ್ಲಿ ಚುನಾವಣಾ ಸಂದರ್ಭದಲ್ಲಿ ವಿವಾದಕ್ಕೆ ತೆರೆ ಎಳೆಯುವ ಪ್ರಯತ್ನವನ್ನು ಖಾದರ್ ನಡೆಸಿದ್ದಾರೆ.
ಸಿಎಂ ವಿರುದ್ಧ ಆರ್.ಟಿ.ಐ ಕಾರ್ಯಕರ್ತರೊಬ್ಬರು ರಾಜ್ಯಪಾಲರಿಗೆ ದೂರು ನೀಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಖಾದರ್, "ಬಂಟ್ವಾಳದಲ್ಲಿ ಸರಕಾರಿ ಕಾರ್ಯಕ್ರಮದಲ್ಲಿ ಸರಕಾರಿ ಯೋಜನೆ ಬಗ್ಗೆ ಮಾತನಾಡಿದ್ದೇವೆ. ನಮ್ಮ ಯೋಜನೆ ಮತ್ತು ಹಿಂದಿನ ಯೋಜನೆ ಬಗ್ಗೆ ತಿಳಿ ಹೇಳಿದ್ದೇವೆ. ನಾವು ವೇದಿಕೆಯನ್ನು ದುರ್ಬಳಕೆ ಮಾಡಿಲ್ಲ," ಎಂದು ಸಮಜಾಯಿಷಿ ನೀಡಿದ್ದಾರೆ.