ಮಂಗಳೂರು ವಿಮಾನ ನಿಲ್ದಾಣ ಸ್ಮಾರ್ಟ್ ಆಗೋದು ಯಾವಾಗ?
ಹೇಳಿ ಕೇಳಿ ಮಂಗಳೂರು ಈಗ ಶರವೇಗದಲ್ಲಿ ವಾಣಿಜ್ಯ ನಗರಿಯಾಗಿ ಬೆಳೆಯುತ್ತಿದೆ. ಆದರೆ ಇಲ್ಲಿಂದ ಕೇವಲ ಕೊಲ್ಲಿ ರಾಷ್ಟ್ರಗಳಿಗೆ ಮಾತ್ರ ನೇರ ವಿಮಾನಯಾನ ಸಂಪರ್ಕ ಇದೆ. ಉಳಿದ ದೇಶಗಳಿಗೂ ನೇರ ವಿಮಾನಯಾನವನ್ನು ತುರ್ತಾಗಿ ಕಲ್ಪಿಸಬೇಕಾಗಿದೆ.
ಮಂಗಳೂರು, ಏಪ್ರಿಲ್ 11: ಮಂಗಳೂರು ಸ್ಮಾರ್ಟ್ ಸಿಟಿಯಾದರೆ ಸಾಕೇ...? ಏರ್ಪೋರ್ಟ್ ಸ್ಮಾರ್ಟ್ ಆಗೋದು ಬೇಡವೇ..? ವಿದೇಶಕ್ಕೆ ಸಂಚರಿಸುವ ಪ್ರಯಾಣಿಕರ ಪ್ರಯಾಸದ ವಿಮಾನ ಪ್ರಯಾಣಕ್ಕೆ ಮುಕ್ತಿ ಎಂದು..? ಹೀಗೊಂದು ಪ್ರಶ್ನೆಯನ್ನು ಮಂಗಳೂರು ವಿಮಾನ ನಿಲ್ದಾಣಕ್ಕೆ ಬರುವವರು ಕೇಳುತ್ತಿದ್ದಾರೆ.
ಹೇಳಿ ಕೇಳಿ ಮಂಗಳೂರು ಈಗ ಶರವೇಗದಲ್ಲಿ ವಾಣಿಜ್ಯ ನಗರಿಯಾಗಿ ಬೆಳೆಯುತ್ತಿದೆ. ಇದಕ್ಕೆ ಕೇಂದ್ರ ಸರಕಾರದ ಸ್ಮಾರ್ಟ್ ಸಿಟಿ ಯೋಜನೆಯೂ ಒಳಗೊಂಡಿರುವುದು ಸಂತಸದ ವಿಚಾರವೇ ಸರಿ.
ಮಂಗಳೂರು ನಗರಿ ಸ್ಮಾರ್ಟ್ ಆಗುತಿದೇನೋ ನಿಜ, ಆದರೆ ಹಲವು ಅನಾನುಕೂಲದ ಆಗರವಾಗಿರುವ ಮಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಸ್ಮಾರ್ಟ್ ಆಗದೇ ಇರುವುದು ಮಾತ್ರ ಸ್ಮಾರ್ಟ್ ಸಿಟಿ ಯೋಜನೆಗೆ ಕಪ್ಪು ಚುಕ್ಕೆಯಾಗಿದೆ.
ಮಂಗಳೂರು ಇಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಪಡೆದಿರುವ ನಗರಿ. ಹೀಗಿರುವಾಗ ದೇಶ, ವಿದೇಶಗಳ ಪ್ರಯಾಣಿಕರು ಇಂದು ಮಂಗಳೂರಿಗೆ ಬರುವುದಾಗಲಿ ಅಥವಾ ಮಂಗಳೂರಿನವರೇ ದೇಶ, ವಿದೇಶಗಳಿಗೆ ತೆರಳಲು ವಿಮಾನಯಾನ ನಡೆಸುವುದು ಅತೀ ಪ್ರಯಾಸಕರವಾಗಿರುವುದು ಜಿಲ್ಲೆಯ ಜನರ ಬೇಸರಕ್ಕೆ ಕಾರಣವಾಗಿದೆ.[ಬಿಪಿಎಲ್ ಕಾರ್ಡ್ ಪಡೆಯಲು ಸ್ವಯಂ ಘೋಷಿತ ಪತ್ರ ಸಾಕು..!]
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಕೇಂದ್ರ ಬಿಂದುವೆನಿಸಿರುವ ಬಜಪೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೊಲ್ಲಿ ರಾಷ್ಟ್ರಗಳಾದ ದುಬೈ, ಸೌದಿ ಅರೇಬಿಯಾ, ಕತಾರ್ ಗೆ0 ಮಾತ್ರ ನೇರ ಸಂಚರಿಸಲು ವಿಮಾನಗಳ ವ್ಯವಸ್ಥೆ ಕಲ್ಪಿಸಲಾಗಿದೆಯೇ ಹೊರತು ಇತರ ಯಾವುದೇ ದೇಶಗಳಿಗೂ ತೆರಳಬೇಕಾದಲ್ಲಿ ಪ್ರಯಾಣಿಕರು ಬೆಂಗಳೂರು, ಮುಂಬೈ ಅಥವಾ ಹೊರ ದೇಶಗಳಿಗೆ ತೆರಳಿ ಪ್ರಯಾಸದ ವಿಮಾನ ಯಾನವನ್ನು ಮಾಡಬೇಕಾಗಿದೆ.
ಇದು ಅನಿವಾರ್ಯ ಕರ್ಮ
ಮಂಗಳೂರಿನವರೇ ಆದ ಅನೇಕ ಉದ್ಯಮಿಗಳು ಅಮೆರಿಕಾ,ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾಗಳಂತಹ ರಾಷ್ಟ್ರಗಳಲ್ಲಿ ವ್ಯವಹಾರ ನಡೆಸುತ್ತಿದ್ದಾರೆ. ವಿದ್ಯಾರ್ಥಿಗಳು ವಿದೇಶಗಳಲ್ಲಿ ಉನ್ನತ ವ್ಯಾಸಂಗ ನಡೆಸುತ್ತಿದ್ದಾರೆ. ಇವರುಗಳೆಲ್ಲಾ ಬಹಳ ದುಸ್ತರ, ದುಬಾರಿ ಹಾಗೂ ಪ್ರಯಾಸದ ಅಂತರಾಷ್ಟ್ರೀಯ
ಪ್ರಯಾಣ ನಡೆಸುವ ಅನಿವಾರ್ಯತೆ ಒದಗಿದೆ.
ಮಂಗಳೂರಲ್ಲಿ ಸರಿಯಾದ ವಿಮಾನಗಳಿಲ್ಲ
ಪ್ರಪಂಚದ ಮೂಲೆ, ಮೂಲೆಯ ಜನರು ಪ್ರವಾಸಿ ತಾಣವಾದ ಮಂಗಳೂರು ಮತ್ತು ಉಡುಪಿ ಜಿಲ್ಲೆಗಳಿಗೆ ಭೇಟಿ ನೀಡಲು ವಿಮಾನದಲ್ಲಿ ಸುತ್ತು ಬಳಸಿ ಪ್ರಯಾಣ ನಡೆಸಬೇಕಾಗಿದೆ. ಶಿಕ್ಷಣ ಕಾಶಿ ಮಣಿಪಾಲವನ್ನು ರಾಜ್ಯ, ದೇಶ ಅಲ್ಲದೆ ಹೊರ ದೇಶದ ವಿದ್ಯಾರ್ಥಿಗಳು ನೆಚ್ಚಿಕೊಂಡಿದ್ದು ಅವರಿಗೂ ಸಂಚರಿಸಲು ಮಂಗಳೂರು ವಿಮಾನ ನಿಲ್ದಾಣದಲ್ಲಿ ಸರಿಯಾದ ವಿಮಾನಗಳು ಲಭ್ಯವಿಲ್ಲದಂತಾಗಿದೆ.[ರಾಜ್ಯಸಭೆಯಲ್ಲಿ ಆಸ್ಕರ್ ಫೆರ್ನಾಂಡಿಸ್ ತುಳು ಹಾಡು ಹಾಡಿದ ಗಮ್ಮತ್ತು]
ಅಂತರಾಷ್ಟ್ರೀಯ ವಿಮಾನ ಹಾರಾಟ ಯಾವಾಗ?
ಉಡುಪಿ ಮತ್ತು ದಕ್ಷಿಣ ಕನ್ನಡ ಉಭಯ ಜಿಲ್ಲೆಗಳಿಗೆ ಮುಕುಟವಾಗಿರುವ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಹೆಸರಿಗೆ ತಕ್ಕಂತೆ ಅಂತರಾಷ್ಟ್ರೀಯ ನೇರ ಸಂಪರ್ಕ ಬೆಸೆಯುವ ವಿಮಾನ ನಿಲ್ದಾಣವಾಗಬೇಕಿದೆ.
ಹೀಗೆ ವಿಮಾನ ಹಾರಟ ನಡೆಸುವ ವ್ಯವಸ್ಥೆ ಕಲ್ಪಿಸದಿದ್ದಲ್ಲಿ, ಅಂಗೈ ಹುಣ್ಣಿಗೆ ಮದ್ದು ಮಾಡದೆ ಮಂಗಳೂರನ್ನು ಸ್ಮಾರ್ಟ್ ಸಿಟಿಯನ್ನಾಗಿಸಲು ಹೊರಟ ಯೋಜನೆಯು ಸಫಲತೆ ಕಾಣಲು ಕಷ್ಟಸಾಧ್ಯವೆನಿಸಲಿದೆ.
ದ.ಕ, ಉಡುಪಿ ಉಭಯ ಜಿಲ್ಲೆಗಳ ಸ್ವಾಗತ ಗೋಪುರದಂತಿರುವ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿದೇಶಕ್ಕೆ ಪ್ರಯಾಣಿಸುವ ವಿಮಾನಗಳು ಯಾವಾಗ ಹಾರಾಡುತ್ತವೋ ಎಂದು ಮಂಗಳೂರಿನ ಬುದ್ಧಿವಂತ ಪ್ರಯಾಣಿಕರು ಕಾದುನೋಡುವಂತಾಗಿದೆ.
ಲಗೇಜ್ ಇದ್ದರೆ ದೇವರಿಗೇ ಪ್ರೀತಿ
ಎಲ್ಲಾ ವಿಮಾನ ನಿಲ್ದಾಣಗಳಲ್ಲೂ ಪ್ರಯಾಣಿಕರು ವಿಮಾನದಿಂದ ಇಳಿದಾಕ್ಷಣವೇ ಅವರ ಲಗೇಜ್ಗಳನ್ನು ಒಪ್ಪಿಸುವ ವ್ಯವಸ್ಥೆಯನ್ನು ಮಾಡಲಾಗಿದ್ದರೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾತ್ರ ಇದಕ್ಕೆ ತದ್ವಿರುದ್ಧ ನೀತಿ ಅನುಸರಿಸಲಾಗುತ್ತಿದೆ.
ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿಯುವ ಪ್ರಯಾಣಿಕರು ತಮ್ಮ ಲಗೇಜ್ಗಳಿಗಾಗಿ ಕನಿಷ್ಟ ಅರ್ಧ ಗಂಟೆಗಳ ಕಾಲವಾದರೂ ಕಾಯುವ ಅನಿವಾರ್ಯತೆ ಇದೆ. ಇದರ ಬಗ್ಗೆ ಪ್ರಯಣಿಕರು ಅಧಿಕಾರಿಗಳಲ್ಲಿ ಪ್ರಶ್ನಿಸಿದರೂ ಉಡಾಫೆಯ ಪ್ರತ್ಯುತ್ತರವಷ್ಟೇ ದೊರೆಯುತ್ತದೆ.[ಸಸಿಹಿತ್ಲು ಬೀಚ್ ನಲ್ಲಿ ಮೇ 26ರಿಂದ ಇಂಡಿಯನ್ ಓಪನ್ ಸರ್ಫಿಂಗ್]
ಅಂತರಾಷ್ಟ್ರೀಯ ಗುಣಮಟ್ಟ ಬೇಕು
"ನಾನು ಅಮೇರಿಕಾದ ಚಿಕಾಗೋದಲ್ಲಿ ವ್ಯವಹಾರ ನಡೆಸುತ್ತಿದ್ದೇನೆ. ಪ್ರತೀ ಮೂರು ತಿಂಗಳಿಗೊಮ್ಮೆ ಅಲ್ಲಿಗೆ ಪ್ರಯಾಣಿಸುತ್ತೇನೆ.ಮಂಗಳೂರಿನಿಂದ ಬೆಂಗಳೂರಿಗೆ ವಿಮಾನ ಯಾನ ಮಾಡಿ ಅಲ್ಲಿಂದ ಮತ್ತೊಂದು ವಿಮಾನ ಹತ್ತಿ ವಿದೇಶಕ್ಕೆ ತೆರಳಿ ಅಲ್ಲಿಂದ ಮತ್ತೆ ವಿಮಾನ ಬದಲಿಸುವ ದುಬಾರಿ ಮತ್ತು ಪ್ರಯಾಸದ ಪ್ರಯಾಣವನ್ನು ನಡೆಸುವ ಅನಿವಾರ್ಯತೆಯನ್ನು ನೆಚ್ಚಿಕೊಂಡಿದ್ದೇನೆ," ಎನ್ನುತ್ತಾರೆ ಅಂತರಾಷ್ಟ್ರೀಯ ಉದ್ಯಮಿ ಕಾರ್ಮೆಲಿಟ್.
"ಮಂಗಳೂರು ಸ್ಮಾರ್ಟ್ಸಿಟಿ ಆಗುವುದು ಸಂತಸವೇ ಆದರೆ ಮೊದಲಿಗೆ ನಮ್ಮ ಜಿಲ್ಲೆಯ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅಂತರಾಷ್ಟ್ರೀಯ ಮಟ್ಟದ ಕಾಯಕಲ್ಪ,ಗುಣಮಟ್ಟತೆಯನ್ನು ಒದಗಿಸುವ ಕಾರ್ಯ ಸರಕಾರದಿಂದ ನಡೆಯಬೇಕಿದೆ," ಎನ್ನುತ್ತಾರೆ ಕಾರ್ಮೆಲಿಟ್.