ಮಂಗಳೂರು ಉದ್ಯಮಿಗೆ 50 ಲಕ್ಷ ಹಫ್ತಾಕ್ಕಾಗಿ ಕಲಿ ಯೋಗೀಶನಿಂದ ಬೆದರಿಕೆ ಕರೆ
ಮಂಗಳೂರು, ಮಾರ್ಚ್ 27: ಮಂಗಳೂರಿನಲ್ಲಿ ಮತ್ತೆ ಭೂಗತ ಲೋಕ ಸದ್ದು ಮಾಡಿದೆ. ನಗರದಲ್ಲಿ ಇತ್ತೀಚೆಗೆ ನಡೆದ ಸರಣಿ ಶೂಟೌಟ್ ಪ್ರಕರಣಗಳ ತನಿಖೆಯನ್ನು ಪೊಲೀಸರು ತೀವ್ರ ಗೊಳಿಸಿದ್ದ ಹಿನ್ನೆಲೆಯಲ್ಲಿ ಭೂಗತ ಪಾತಕಿಗಳು ತಮ್ಮ ಚಟುವಟಿಕೆ ಸ್ಥಗಿತಗೊಳಿಸಿದ್ದರು. ಆದರೆ ಈಗ ಮತ್ತೆ ತಮ್ಮ ಚಟುವಟಿಕೆ ಆರಂಭಿಸಿದ್ದಾರೆ.
ಮಂಗಳೂರಿನ ಉದ್ಯಮಿಯೊಬ್ಬರಿಗೆ ಭೂಗತ ಪಾತಕಿಯಿಂದ ಹಫ್ತಾಕ್ಕಾಗಿ ಬೆದರಿಕೆ ಕರೆ ಬಂದಿದೆ. ನಗರದ ಖ್ಯಾತ ಉದ್ಯಮಿ ಡಾ. ಅರುಣ್ ಕುಮಾರ್ ರೈ ಅವರಿಗೆ ಭೂಗತ ಪಾತಕಿ ಕಲಿ ಯೋಗಿಶ್ ನಿಂದ ಬೆದರಿಕೆ ಕರೆ ಬಂದಿದೆ ಎಂದು ಹೇಳಲಾಗಿದೆ.
ಡಾ. ಅರುಣ್ ಕುಮಾರ್ ರೈ, ನಗರದ ಪಂಪ್ವೆಲ್ನಲ್ಲಿರುವ ಭಾರತ್ ಆಗ್ರೋವೆಟ್ ಇಂಡಸ್ಟ್ರೀಸ್ನ ಮಾಲಕರಾಗಿದ್ದು ಭೂಗತ ಪಾತಕಿ ಕಲಿ ಯೋಗೀಶ್ ಎಂದು ಪರಿಚಯಿಸಿಕೊಂಡ ವ್ಯಕ್ತಿ ಕಳೆದ ಮಾರ್ಚ್ 17 ರಿಂದ ಮರ್ಚ್ 23ರವರೆಗೆ ನಾನಾ ಇಂಟರ್ನೆಟ್ ನಂಬರ್ ಗಳಿಂದ ಬೆದರಿಕೆ ಕರೆ ಮಾಡಿದ್ದಾನೆ ಎಂದು ಹೇಳಲಾಗಿದೆ.
ಡಾ. ಅರುಣ್ ಕುಮಾರ್ ರೈ ಅವರಿಗೆ ಜೀವ ಬೆದರಿಕೆ ಹಾಕಿರುವ ಕಲಿ ಯೋಗಿಶ್, 50ಲಕ್ಷ ರೂಪಾಯಿ ಹಫ್ತಾ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದಾನೆ ಎಂದು ಹೇಳಲಾಗಿದೆ. ಹಣ ನೀಡದಿದ್ದಲ್ಲಿ ತನ್ನ ಪಂಟರ್ ಹುಡುಗರನ್ನು ಕಚೇರಿಗೆ ಕಳುಹಿಸುವುದಾಗಿ ಕಲಿ ಯೋಗಿಶ್ ಬೆದರಿಕೆ ಹಾಕಿದ್ದಾನೆ .
ಈ ಘಟನೆ ಕುರಿತು ನಗರದ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದ್ದು ದೂರವಾಣಿ ಕರೆಗಳ ದಾಖಲೆ ಆಧಾರದ ಮೇಲೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.