ನಳಿನ್ ಕುಮಾರ್ ಕಟೀಲ್ ಹೇಳಿಕೆಗೆ ಯು.ಟಿ.ಖಾದರ್ ಖಂಡನೆ
ಮಂಗಳೂರು, ಜನವರಿ. 02 : 'ಕಾರ್ತಿಕ್ ರಾಜ್ ಹಂತಕರನ್ನು 10 ದಿನಗಳೊಳಗೆ ಬಂಧಿಸದಿದ್ದರೆ ಜಿಲ್ಲೆಗೆ ಬೆಂಕಿ ಇಡಲೂ ಸಿದ್ಧರಿದ್ದೇವೆ'' ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಅವರ ಬಹಿರಂಗ ಹೇಳಿಕೆಗೆ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಖಂಡಿಸಿದ್ದಾರೆ.
ಜವಾಬ್ದಾರಿ ಸ್ಥಾನದಲ್ಲಿರುವ ವ್ಯಕ್ತಿಗೆ ಇಂತಹ ಹೇಳಿಕೆಗಳು ಶೋಭೆ ತರುವಂತಹದಲ್ಲ. ಜನಪ್ರತಿನಿಧಿಯಾದವರು ಜನರನ್ನು ಒಗ್ಗೂಡಿಸುವ ಕೆಲಸ ಮಾಡಬೇಕೇ ಹೊರತು ಬಿಕ್ಕಟ್ಟನ್ನು ಸೃಷ್ಟಿಸುವ ಕೆಲಸ ಮಾಡಬಾರದು. ಕಾರ್ತಿಕ್ ರಾಜ್ನ ಕೊಲೆಯಾಗಿ ಕೆಲವು ದಿನಗಳು ಕಳೆದರೂ ಪೊಲೀಸರೊಂದಿಗೆ ಸಭೆ ನಡೆಸಿ ಚರ್ಚಿಸುವ ಕೆಲಸ ಸಂಸದರು ಮಾಡಿಲ್ಲ.[ದಕ್ಷಿಣ ಕನ್ನಡಕ್ಕೆ ಬೆಂಕಿ ಹಚ್ಚುತ್ತೇವೆ: ಸಂಸದ ಕಟೀಲ್]
ಈಗ ಏಕಾಏಕಿ ಇಂತಹ ಹೇಳಿಕೆಯನ್ನು ನೀಡಿ ಜನರನ್ನು ಉದ್ರೇಕಿಸುವ ಕೆಲಸ ಮಾಡಿದ್ದಾರೆ. ಜವಾಬ್ದಾರಿ ಸ್ಥಾನದಲ್ಲಿರುವ ಸಂಸದರ ಬೇಜವಾಬ್ದಾರಿ ಹೇಳಿಕೆಯನ್ನು ಖಂಡಿಸುವುದಾಗಿ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಖಾದರ್ ತಿಳಿಸಿದ್ದಾರೆ.
ಕೊಲೆಯಾದ ಕಾರ್ತಿಕ್ ರಾಜ್ನ ಬಗ್ಗೆ ಸ್ಥಳೀಯವಾಗಿ ಎಲ್ಲರಿಗೂ ಗೌರವ ಭಾವನೆ ಇದೆ. ಹಂತಕನ್ನು ಪತ್ತೆ ಹಚ್ಚುವ ಬೇಡಿಕೆ ಗೌರವಿಸುವಂತದ್ದು. ಈ ಬಗ್ಗೆ ನಾನು ಕೂಡ ಕಾರ್ತಿಕ್ ರಾಜ್ ಮನೆಗೆ ಭೇಟಿ ನೀಡಿ ಪ್ರಕರಣವನ್ನು ಸಿಓಡಿಗೆ ವಹಿಸುವ ಬಗ್ಗೆ ಅವರ ತಂದೆಯವರಿಗೆ ಭರವಸೆ ನೀಡಿದ್ದೇನೆ ಎಂದು ಹೇಳಿದರು.
'ಕಾರ್ತಿಕ್ ರಾಜ್ ಹಂತಕರನ್ನು 10 ದಿನಗಳೊಳಗೆ ಬಂಧಿಸದಿದ್ದರೆ ಜಿಲ್ಲೆಗೆ ಬೆಂಕಿ ಇಡಲೂ ಸಿದ್ಧರಿದ್ದೇವೆ'' ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಅವರ ಬಹಿರಂಗ ಹೇಳಿಕೆಗೆ ತಿರುಗೇಟು ನೀಡಿರುವ ಸಚಿವ ಯು.ಟಿ.ಖಾದರ್ ಅವರು ಜನಪ್ರತಿನಿಧಿಯಾಗಿ ಬೆಂಕಿ ಇಡುವ ಬದಲು ಅದನ್ನು ನಂದಿಸುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.