ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರಕಟ
ಮಂಗಳೂರು, ಜನವರಿ 31: 2016ನೇ ಸಾಲಿನ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ ಪುರಸ್ಕೃತರು ಮತ್ತು ಪುಸ್ತಕ ಬಹುಮಾನ ವಿಜೇತರ ಹೆಸರನ್ನು ಪ್ರಕಟಿಸಲಾಗಿದೆ.
ತುಳು ಸಾಹಿತ್ಯ ಕ್ಷೇತ್ರ, ತುಳು ನಾಟಕ ಕ್ಷೇತ್ರ ಹಾಗೂ ತುಳು ಸಿನಿಮಾ ಕ್ಷೇತ್ರಗಳಲ್ಲಿ ಅನನ್ಯ ಸೇವೆ ಸಲ್ಲಿಸಿದ ಮೂರು ಜನ ಗಣ್ಯರನ್ನು ಅಕಾಡೆಮಿಯ 2016ರ ಗೌರವ ಪ್ರಶಸ್ತಿಗಾಗಿ ಆಯ್ಕೆ ಮಾಡಲಾಗಿದೆ. ಈ ಗೌರವ ಪ್ರಶಸ್ತಿಯು ರೂ.50,000 ರೂಪಾಯಿ ನಗದು, ಶಾಲು, ಹಾರ, ಫಲತಾಂಬೂಲ, ಸ್ಮರಣಿಕೆ ಮತ್ತು ಪ್ರಶಸ್ತಿ ಪತ್ರಗಳನ್ನು ಒಳಗೊಂಡಿದೆ.[ಮಂಗಳೂರಲ್ಲಿ ಲೋಕಾರ್ಪಣೆಗೊಂಡ ತುಳು ಅಕಾಡೆಮಿ ಕಚೇರಿ]
ತುಳು ಸಾಹಿತ್ಯದ ಗೌರವ ಪ್ರಶಸ್ತಿಗೆ ಮುದ್ದು ಮೂಡುಬೆಳ್ಳೆ , ನಾಟಕ ರಂಗದ ಗೌರವ ಪ್ರಶಸ್ತಿಗೆ ಕೆ.ಆನಂದ ಶೆಟ್ಟಿ ಹಾಗೂ ಸಿನೆಮಾ ಕ್ಷೇತ್ರದಲ್ಲಿನ ಸಾಧನೆಗಾಗಿ ತಮ್ಮ ಲಕ್ಷ್ಮಣ ಅವರನ್ನು ಗೌರವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ 2016ರ ಸಾಲಿನ ಪುಸ್ತಕ ಬಹುಮಾನಕ್ಕೆ ಡಾ. ಪಾಲ್ತಾಡಿ ರಾಮಕೃಷ್ಣ ಆಚಾರ್ ಅವರ 'ಪಾಡ್ಡಾನಗಳಲ್ಲಿ ಮೂಡಿ ಬಂದ ವೀರ ವನಿತೆಯರು', ಯೋಗಿಶ್ ರಾವ್ ಚಿಗುರುಪಾದೆ ಅವರ ತುಳು ಕವನ ಸಂಕಲನ 'ಒಯಿಲ್' ಹಾಗೂ ಶಶಿರಾಜ್ ಕಾವೂರು ಅವರ ತುಳು ನಾಟಕ 'ಬರ್ಬರಿಕ' ಕೃತಿ ಆಯ್ಕೆಯಾಗಿದೆ. ಈ ಪುಸ್ತಕ ಬಹುಮಾನವು ರೂ.25,000 ರೂಪಾಯಿ ನಗದು, ಶಾಲು, ಹಾರ, ಫಲತಾಂಬೂಲ, ಸ್ಮರಣಿಕೆ ಮತ್ತು ಪ್ರಶಸ್ತಿಪತ್ರಗಳನ್ನು ಒಳಗೊಂಡಿದೆ.