ಮಂಗಳೂರಿನ ಸರ್ಕಾರಿ ಲೇಡಿಗೋಶನ್ ಹೆರಿಗೆ ಆಸ್ಪತ್ರೆಯ ಪಾಡು ಹರೋಹರ
Recommended Video
ಮಂಗಳೂರು, ಜುಲೈ. 13: ಸೋರುತ್ತಿರುವ ಮಾಳಿಗೆ, ಬಾಗಿಲುಗಳಿಲ್ಲದ ಕಿಟಕಿ, ಮಳೆ ನೀರ ಹೊಡೆತದ ಮಧ್ಯೆ ನೆಲದ ಮೇಲೆ ಮಲಗಿರುವ ಬಾಣಂತಿ ಮಹಿಳೆಯರು ಮತ್ತು ಹಸುಗೂಸುಗಳು ಇದು ಮಂಗಳೂರಿನ ಸರ್ಕಾರಿ ಲೇಡಿಗೋಶನ್ ಹೆರಿಗೆ ಆಸ್ಪತ್ರೆಯಲ್ಲಿ ಮಳೆಗಾಲದಲ್ಲಿ ರೋಗಿಗಳ ಪರಿಸ್ಥಿತಿ.
ಇವರು ಅನುಭವಿಸುವ ಪಾಡು ಯಾರಿಗೂ ಬೇಡ. ಹಳೆ ಆಸ್ಪತ್ರೆ ಕಟ್ಟಡದ ಎದುರಲ್ಲೇ ಹೊಸ ಸುಸುಜ್ಜಿತ ಆಸ್ಪತ್ರೆ ಕಟ್ಟಡ ನಿರ್ಮಾಣವಾಗಿದ್ದರೂ ಬಾಣಂತಿಯರು ಮಾತ್ರ ಹಳೆ ಆಸ್ಪತ್ರೆ ಕಟ್ಟಡ ದಲ್ಲೇ ಸಂಕಷ್ಟ ಅನುಭವಿಸುವಂತಾಗಿದೆ.
ಇದೆಂಥ ಆಸ್ಪತ್ರೆ ನೋಡಿ, ರೋಗಿಯನ್ನು ಬೆಡ್ ಶೀಟ್ ನಲ್ಲೇ ಎಳೆದೊಯ್ದರು!
ಎಂಆರ್ ಪಿಎಲ್ ಸಹಯೋಗದಿಂದ 21 ಕೋಟಿ ವೆಚ್ಚದಲ್ಲಿ 290 ಹಾಸಿಗೆ ಸಾಮರ್ಥ್ಯದ ಐದು ಅಂತಸ್ತಿನ ಬೃಹತ್ ಆಸ್ಪತ್ರೆ ತಲೆಯೆತ್ತಿ ನಿಂತಿದೆ. ಆದರೆ ಕಟ್ಟಡದ ಕಾಮಗಾರಿ ಪೂರ್ಣಗೊಂಡು ಆರು ತಿಂಗಳು ಕಳೆದಿದ್ದು, ಉದ್ಘಾಟನೆ ಭಾಗ್ಯ ಮಾತ್ರ ಈ ವರೆಗೆ ಕಂಡಿಲ್ಲ.
ಅಲ್ಲದೆ, ಆಸ್ಪತ್ರೆಗೆ ಅಗತ್ಯವುಳ್ಳ ಸಿಬ್ಬಂದಿ, ಸಾಮಗ್ರಿಗಳೂ ಪೂರೈಕೆಯಾಗಿಲ್ಲ. ಹೀಗಾಗಿ ಬಾಣಂತಿಯರು ಸೇರಿದಂತೆ ಆಗ ತಾನೇ ಹುಟ್ಟಿದ ನವಜಾತ ಶಿಶುಗಳನ್ನು ಹಳೆ ಕಟ್ಟಡದ ಸೋರುತ್ತಿರುವ ವರಾಂಡಾದಲ್ಲೇ ಹಾಸಿಗೆ ಹಾಸಿಕೊಂಡು ಮಲಗಿಸಲಾಗಿದೆ.
ಒಂದೆಡೆ ಸೋರುವ ಕಟ್ಟಡ, ಮತ್ತೊಂದು ಕಡೆ ಧೋ ಎಂದು ಸುರಿಯುತ್ತಿರುವ ಮಳೆ ನೀರಿನ ಹೊಡೆತ, ಇಲ್ಲಿ ಸೊಳ್ಳೆ ಕಾಟ ಬೇರೆ ಇವೆಲ್ಲವನ್ನೂ ಸಹಿಸಿಕೊಂಡು ಬಡ ಬಾಣಂತಿಯರು ಕಾಲ ಕಳೆಯಬೇಕು. ಬಾಣಂತಿಯರಿಗೆ ಯಾವುದೇ ಕಾರಣಕ್ಕೂ ಮಳೆಯ ನೀರು ತಾಗದಂತೆ ಜಾಗ್ರತೆ ವಹಿಸಬೇಕು ಎನ್ನಲಾಗುತ್ತದೆ.
ಆದರೆ, ಈ ಆಸ್ಪತ್ರೆಯಲ್ಲಿ ರಾಜ್ಯ ಸರ್ಕಾರ ಹಾಗು ಅಧಿಕಾರಿಗಳ ಬೇಜವಾಬ್ದಾರಿಯಿಂದ ಹೊಸ ಆಸ್ಪತ್ರೆ ಕಟ್ಟಡ ರೆಡಿಯಾಗಿದ್ದರೂ, ಇನ್ನೂ ಸ್ಥಳಾಂತರ ಭಾಗ್ಯ ಮಾತ್ರ ಪಡೆದಿಲ್ಲ.
ಹಳೆಯ ಹಂಚಿನ ಕಟ್ಟಡದಲ್ಲಿ ಮಳೆ-ಗಾಳಿಯ ಹೊಡೆತದ ಮಧ್ಯೆಯೇ ಬಡ ಬಾಣಂತಿಯುರು ಸಂಕಷ್ಟ ಅನುಭವಿಸುತ್ತಿದ್ದಾರೆ. ಹಳೆ ಕಟ್ಟಡದ ಒಂದು ಭಾಗದಲ್ಲಂತೂ ಮಳೆಗೆ ಅಡ್ಡಲಾಗಿ ಟರ್ಪಲ್ ಹೊದಿಕೆ ಹಾಕಿದ್ದು, ಒಳಭಾಗದಲ್ಲಿ ಬಾಣಂತಿಯರ ಶುಶ್ರೂಷೆ ನಡೆಸಲಾಗುತ್ತಿದೆ.
ಇದಲ್ಲದೆ, ಸಿಸೇರಿಯನ್ ಶಸ್ತ್ರ ಚಿಕಿತ್ಸೆಗೆ ಒಳಗಾದವರೂ ಇದೇ ಶೀತ ಕಾರುವ ನೆಲದಲ್ಲಿ ದಿನ ದೂಡಬೇಕಾದ ಅನಿವಾರ್ಯತೆ ಇದೆ.
ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರ ಮಂಗಳೂರಿನಲ್ಲಿ ಸರ್ಕಾರಿ ಆಸ್ಪತ್ರೆಯ ಪಾಡು ಮಾತ್ರ ಹರೋಹರ. ಹೊಸ ಸುಸಜ್ಜಿತ ಆಸ್ಪತ್ರೆ ಕಟ್ಟಡ ನಿರ್ಮಾಣವಾಗಿದ್ದರೂ ಉದ್ಘಾಟನಾ ಭಾಗ್ಯ ಕಾಣದೇ ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗಿರುವುದು ಮಾತ್ರ ವಿಪರ್ಯಾಸ.