ಮಂಗಳೂರಿನ ಟ್ರಾಫಿಕ್ ಪೊಲೀಸ್ ದೇರಣ್ಣ ನಿಮಗೆ ನಮ್ಮ ಸಲಾಂ
ಮಂಗಳೂರಿನ ಲಾಲ್ ಬಾಗ್ ಸಿಗ್ನಲ್ ಮಧ್ಯೆ ಮಹಿಳೆಯೊಬ್ಬರ ಕಾರು ಕೆಟ್ಟು ನಿಂತು ಹೋಗಿತ್ತು. ಚಲಾಯಿಸುತ್ತಿದ್ದ ಮಹಿಳೆಗೆ ದಿಕ್ಕೇ ತೋಚದಂತಾದಾಗ ಟ್ರಾಫಿಕ್ ಪೊಲೀಸ್ ದೇರಣ್ಣ ಕಾರನ್ನು ಬದಿಗೆ ಸರಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಮಂಗಳೂರು, ಮೇ 15: ಸಿಗ್ನಲ್ ಮಧ್ಯೆ ಕಾರು ಕೆಟ್ಟು ನಿಂತು ಹೋಗಿತ್ತು. ಹಿಂಬದಿಯಿಂದ ಬರುತ್ತಿದ್ದ ವಾಹನ ಚಾಲಕರೆಲ್ಲ ಇನ್ನೇನ್ನೋ ಹಾರ್ನ್ ಹೊಡೆದು ಶಬ್ದ ಶುರುವಿಟ್ಟುಕೊಂಡಿದ್ದರು. ಪಾಪ ಕಾರು ಚಲಾಯಿಸುತ್ತಿದ್ದ ಮಹಿಳೆಗೆ ದಿಕ್ಕೇ ತೋಚದಂತಾಗಿತ್ತು.
ಅಷ್ಟೊತ್ತಿಗಾಗಲೇ ಸಿಗ್ನಲ್ ಬಳಿ ಸುಡು ಬಿಸಿಲ ಲೆಕ್ಕಿಸದೇ ಟ್ರಾಫಿಕ್ ನಿಯಂತ್ರಿಸುತ್ತಿದ್ದ ಟ್ರಾಫಿಕ್ ಸಿಬ್ಬಂದಿಯೋರ್ವರು ನೇರಾ ಕಾರು ಬಳಿ ಬಂದು ಕಾರಿನ ಬೋನೆಟ್ ತೆಗೆದು ಪರಿಶೀಲಿಸಿದ್ರು. ಮಾತ್ರವಲ್ಲದೇ ಟ್ರಾಫಿಕ್ ನಿಯಂತ್ರಿಸೋ ಜೊತೆಗೆ ಕಾರನ್ನು ಸರಿಪಡಿಸಲು ಪ್ರಯತ್ನಿಸಿದ್ರು.
ಆದ್ರೆ ಕಾರು ಸರಿ ಹೋಗಲ್ಲ ಎಂದು ತಿಳಿದಾಗ ಮಾತ್ರ ಸಿಗ್ನಲ್ ನಲ್ಲಿದ್ದ ಆ ಕಾರನ್ನು ತಾನೊಬ್ಬನೇ ತಳ್ಳಿ ಟ್ರಾಫಿಕ್ ನಿಂದ ಹೊರಗೆ ತರುವಲ್ಲಿ ಸಹಕರಿಸಿ ಮಾನವೀಯತೆ ಮೆರೆದರು. ಅಂದಹಾಗೆ ಈ ಘಟನೆ ನಡೆದಿದ್ದು ಸದಾ ಟ್ರಾಫಿಕ್ ನಿಂದ ತುಂಬಿತುಳುಕುವ ಮಂಗಳೂರು ನಗರದ ಹೃದಯಭಾಗವೆನಿಸಿಕೊಂಡಿರುವ ಲಾಲ್ ಬಾಗ್ ಜಂಕ್ಷನ್ ನಲ್ಲಿ.
ಅಸಹಾಯಕ ಮಹಿಳೆಗೆ ಸಹರಿಸಿದ ಆ ಟ್ರಾಫಿಕ್ ಪೊಲೀಸ್ ಮತ್ಯಾರೂ ಅಲ್ಲ ಮಂಗಳೂರು ಪಶ್ಚಿಮ ಸಂಚಾರಿ ಪೊಲೀಸ್ ಠಾಣೆ ಪಾಂಡೇಶ್ವರದ ಸಿಬ್ಬಂದಿ ದೇರಣ್ಣ. ಇವರು ಮಾಡುತ್ತಿದ್ದ ಈ ಒಂದೊಳ್ಳೆ ಕೆಲಸವನ್ನು ದೂರದಿಂದಲೇ ವೀಕ್ಷಿಸುತ್ತಿದ್ದ ಹವ್ಯಾಸಿ ಛಾಯಾಗ್ರಾಹಕ ಮೋಹನ್ ಕೋಟ್ಯಾನ್ ಸುರತ್ಕಲ್ ತನ್ನ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದು ಮಾಧ್ಯಮಗಳ ಗಮನಕ್ಕೆ ತಂದಿದ್ದಾರೆ.
ಸದಾ ಒಂದಿಲ್ಲೊಂದು ಮಾನವೀಯ ಕೆಲಸಗಳಿಂದ ಹೆಸರು ಪಡೆಯುತ್ತಿರುವ ಮಂಗಳೂರು ನಗರ ಟ್ರಾಫಿಕ್ ಪೊಲೀಸರ ಸಾಲಿಗೆ ಇದೀಗ ದೇರಣ್ಣ ಸೇರ್ಪಡೆಯಾಗಿದ್ದಾರೆ. ಇವರ ಈ ಮಾನವೀಯತೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ.