ಮತ್ತೆ ಹಳಿಯ ಮೇಲೆ ಬರಲಿದೆ ಕದ್ರಿ ಪಾರ್ಕ್ ಪುಟಾಣಿ ರೈಲು
ಮಂಗಳೂರು, ಆಗಸ್ಟ್ 17 : ಮಂಗಳೂರಿನ ಕದ್ರಿ ಉದ್ಯಾನದಲ್ಲಿ ಮೂರು ವರ್ಷಗಳ ಹಿಂದೆ ಸ್ಥಗಿತಗೊಂಡಿದ್ದ ಮಕ್ಕಳ ಪುಟಾಣಿ ರೈಲು ಸಂಚಾರ ಪುನಃ ಆರಂಭವಾಗಲಿದೆ. ಈ ವರ್ಷದ ಮಕ್ಕಳ ದಿನಾಚರಣೆಯೊಳಗೆ ಕಾಮಗಾರಿ ಪೂರ್ಣಗೊಳಿಸಲು ಜಿಲ್ಲಾ ಪಂಚಾಯತಿ ಗಡವು ಹಾಕಿಕೊಂಡಿದೆ.
ಪುಟಾಣಿ ರೈಲು ಪುನರಾರಂಭಕ್ಕಾಗಿ ಹೊಸ ರೈಲು ನಿರ್ಮಾಣ, ಹಳಿಗಳ ಸುಧಾರಣೆ ಮತ್ತಿತರ ಕಾಮಗಾರಿಗಳಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ರೂ. 70 ಲಕ್ಷ ಅನುದಾನ ನೀಡಿದೆ. ರೈಲು ನಿರ್ಮಾಣ ಮತ್ತು ಹಳಿಗಳ ಸುಧಾರಣೆಗೆ ಟೆಂಡರ್ ಪೂರ್ಣಗೊಂಡಿದ್ದು, ಅಕ್ಟೋಬರ್ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳಿಸಲು ಸೂಚಿಸಲಾಗಿದೆ.
'ನವೆಂಬರ್ 14ರ ಮಕ್ಕಳ ದಿನಾಚರಣೆಯಂದು ಪುಟಾಣಿ ರೈಲಿನ ಸಂಚಾರಕ್ಕೆ ಚಾಲನೆ ನೀಡುವ ಚಿಂತನೆ ಇದೆ ಎಂದು' ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಐ.ಶ್ರೀವಿದ್ಯಾ ಹೇಳಿದ್ದಾರೆ.
ಶಿವಮೊಗ್ಗದ ಗಾಂಧಿ ಪಾರ್ಕ್ನಲ್ಲಿರುವ ಬಾಲವನದ ಮಾದರಿಯಲ್ಲಿ ಪುಟಾಣಿ ರೈಲು ಸೌಲಭ್ಯ ಒದಗಿಸಲು ಯೋಜನೆ ರೂಪಿಸಲಾಗಿದೆ. ಈಗಾಗಲೇ ಟೆಂಡರ್ ಪ್ರಕ್ರಿಯೆ ಮುಗಿದಿದ್ದು, ರೈಲು ನಿರ್ಮಾಣದ ಗುತ್ತಿಗೆಯನ್ನು ರೈಲ್ವೆ ಇಲಾಖೆಗೆ ನೀಡಲಾಗಿದೆ. ಮೈಸೂರಿನಲ್ಲಿ ಪುಟಾಣಿ ರೈಲು ನಿರ್ಮಾಣ ಕಾರ್ಯ ನಡೆಯುತ್ತಿದೆ.