ಖಾದರ್ ಗೆ ನಡುಕ ಹುಟ್ಟಿಸಿದ ಫಾರೂಕ್-ಎಚ್ಡಿಕೆ ಮಾಸ್ಟರ್ ಪ್ಲ್ಯಾನ್
ಮಂಗಳೂರು, ಏಪ್ರಿಲ್ 9: ಮಂಗಳೂರು ವಿಧಾನ ಸಭಾ ಕ್ಷೇತ್ರದಲ್ಲಿ ಸಚಿವ ಯು.ಟಿ.ಖಾದರ್ ಅವರಿಗೆ ಚುನಾವಣೆಯಲ್ಲಿ ಭಾರೀ ಪೈಪೋಟಿ ನೀಡಲು ಜೆಡಿಎಸ್ ರಣತಂತ್ರ ರೂಪಿಸುತ್ತಿದೆ. ಮಂಗಳೂರು ವಿಧಾನ ಸಭಾ ಕ್ಷೇತ್ರದಲ್ಲಿ ಮುಸ್ಲಿಂ ಮತಗಳನ್ನು ವಿಭಜಿಸುವ ನಿಟ್ಟಿನಲ್ಲಿ ಯು.ಟಿ. ಖಾದರ್ ವಿರುದ್ದ ಜೆಡಿಎಸ್ ಮುಸ್ಲಿಂ ಮುಖಂಡರನ್ನು ಸಜ್ಜುಗೊಳಿಸುತ್ತಿದೆ.
ಜೆಡಿಎಸ್ ನಲ್ಲಿ ಗುರುತಿಸಿಕೊಂಡಿರುವ ಖ್ಯಾತ ಮುಸ್ಲಿಂ ಉದ್ಯಮಿಯೊಬ್ಬರು ಈ ರಣತಂತ್ರದ ರೂವಾರಿ ಎಂದು ಹೇಳಲಾಗುತ್ತಿದೆ.
ಯುಟಿ ಖಾದರ್ ವಿರುದ್ಧ ಜೆಡಿಎಸ್ ನಿಂದ ಮುಸ್ಲಿಂ ಮುಖಂಡ ಅಶ್ರಫ್ ಕಣಕ್ಕೆ?
ಮಂಗಳೂರು ವಿಧಾನ ಸಭಾ ಕ್ಷೇತ್ರದಲ್ಲಿ ಸಚಿವ ಯು.ಟಿ.ಖಾದರ್ ಗೆ ಸೆಡ್ಡುಹೊಡೆಯಲು ಕಾಂಗ್ರೆಸ್ ನಿಂದ ಇತ್ತೀಚೆಗೆ ಜೆಡಿಎಸ್ ಗೆ ಹಾರಿರುವ ಮಾಜಿ ಮೇಯರ್ ಹಾಗು ಮುಸ್ಲಿಂ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕೆ. ಅಶ್ರಫ್ ಇಲ್ಲಿ ಕಣಕ್ಕಿಳಿಯಲಿದ್ದಾರೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಬಿಜೆಪಿ ಅಭ್ಯರ್ಥಿಗಳ ಮೊದಲ ಅಧಿಕೃತ ಪಟ್ಟಿ ಪ್ರಕಟ
ಈ ಹಿಂದೆ ಕೆ. ಅಶ್ರಫ್ ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದಿಂದ ಕಣಕ್ಕಿಳಿಯುವ ಇಂಗಿತ ವ್ಯಕ್ತ ಪಡಿಸಿದ್ದರು. ಅದರೆ ಖಾದರ್ ಅವರನ್ನು ಹಣಿಯುವ ರಣತಂತ್ರದ ಭಾಗವಾಗಿ ಮಂಗಳೂರು ಕ್ಷೇತ್ರದಿಂದ ಅಶ್ರಫ್ ಅವರನ್ನು ಅಖಾಡಕ್ಕೆ ಇಳಿಸಲು ತೀರ್ಮಾನಿಸಲಾಗಿದೆ.
ಕುಮಾರಸ್ವಾಮಿ ಹಾಗು ಬಿ. ಎಂ. ಫಾರೂಕ್ ಮಾಸ್ಟರ್ ಪ್ಲ್ಯಾನ್
ಖಾದರ್ ರನ್ನು ಮಣಿಸಲು ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಹಾಗು ಬಿ. ಎಂ. ಫಾರೂಕ್ ಮಾಸ್ಟರ್ ಪ್ಲ್ಯಾನ್ ರೂಪಿಸಿದ್ದು, ಈ ತಂತ್ರಗಾರಿಕೆ ಫಲಿಸಿತೆಂದರೆ ಮಂಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಖಾದರ್ ಸೋಲು ನಿಶ್ಚಿತ ಎಂದು ವಿಶ್ಲೇಷಿಸಲಾಗಿದೆ.
ಮಂಗಳೂರು ವಿಧಾನ ಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು ಮುಸ್ಲಿಂ ಮತಗಳಿವೆ. ಈವರೆಗೆ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲಲು ಈ ಮುಸ್ಲಿಂ ಮತಗಳೇ ಕಾರಣ. ಈ ಹಿಂದಿನ ಚುನಾವಣೆಗಳಲ್ಲಿ ಈ ಕ್ಷೇತ್ರವನ್ನು ಗೆಲ್ಲಲು ಬಿಜೆಪಿ ರೂಪಿಸಿದ್ದ ರಣತಂತ್ರಗಳು ಮಕಾಡೆ ಮಲಗಿವೆ.
2013 ರ ಚನಾವಣೆಯಲ್ಲಿ ಈ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯ ಎದುರು ಯು. ಟಿ ಖಾದರ್ ಸುಮಾರು 30 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಿದ್ದರು.
ಮುಸ್ಲಿಂ ಮತ ವಿಭಜನೆ ಪ್ಲ್ಯಾನ್
ಈ ಹಿನ್ನೆಲೆಯಲ್ಲಿ ಮಂಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಖಾದರ್ ಮಣಿಸಬೇಕಾದರೆ ಕ್ಷೇತ್ರದ ಮುಸ್ಲಿಂ ಮತಗಳನ್ನು ವಿಭಜಿಸುವುದು ಅನಿವಾರ್ಯ ಎಂಬುದು ಬಿಜೆಪಿ ಹಾಗೂ ಜೆಡಿಎಸ್ ಗೆ ಮನದಟ್ಟಾಗಿದೆ. ಈ ಹಿನ್ನಲೆಯಲ್ಲಿ ಮಂಗಳೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಗೆ ಭಾರೀ ಆಘಾತ ನೀಡಲು ಕಾಂಗ್ರೆಸ್ ಬಿಟ್ಟು ಜೆಡಿಎಸ್ ಸೇರಿದ್ದ ಕೆ. ಅಶ್ರಫ್ ಅವರನ್ನು ಸಚಿವ ಖಾದರ್ ಎದುರು ಕಣಕ್ಕಿಳಿಸಲು ಜೆಡಿಎಸ್ ತೀರ್ಮಾನಿಸಿದೆ.
ಮಂಗಳೂರು ವಿಧಾನ ಸಭಾ ಕ್ಷೇತ್ರದಲ್ಲಿ ಖಾದರ್ ವಿರೋಧಿ ಸಂಘಟನೆಗಳು ಈಗಾಗಲೇ ಅಶ್ರಫ್ ಗೆ ಬೆಂಬಲ ಸೂಚಿಸಿವೆ. ಅಲ್ಲದೇ ಎಸ್.ಡಿ.ಪಿ.ಐ ಹಾಗೂ ಪಿ.ಎಫ್.ಐ ಸೇರಿದಂತೆ ಇನ್ನಿತರ ಪ್ರಬಲ ಮುಸ್ಲಿಂ ಸಂಘಟನೆಗಳು ಈಗಾಗಲೇ ಖಾದರ್ ವಿರುದ್ದ ಒಂದಾಗಿವೆ ಎಂದು ಹೇಳಲಾಗಿದೆ.
ಕಂಗಾಲಾದ ಯುಟಿ ಖಾದರ್
ಈ ಕ್ಷೇತ್ರದಲ್ಲಿ ಯುವಕರನ್ನು ಸೆಳೆಯಲು ಕ್ರಿಕೆಟ್ ಟೂರ್ನಮೆಂಟ್ ನಡೆಸಲು ಜೆಡಿಎಸ್ ಹಣಕಾಸು ನೆರವನ್ನು ನೀಡುತ್ತಿದೆ. ಖಾದರ್ ವಿರೋಧಿ ಮುಸ್ಲಿಂ ಸಂಘಟನೆ ಗಳಿಗೆ ಜೆಡಿಎಸ್ ಪರ ಪ್ರಚಾರ ನಡೆಸಲು ಜೆಡಿಎಸ್ ನ ಪ್ರಭಾವಿ ಮುಸ್ಲಿಂ ಮುಖಂಡ ಹಾಗು ಉದ್ಯಮಿ ಫಂಡಿಂಗ್ ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ. ಕ್ಷೇತ್ರದಲ್ಲಿ ನಡೆಯುತ್ತಿರುವ ಈ ಎಲ್ಲಾ ಬೆಳವಣಿಗೆಯಿಂದಾಗಿ ಸಚಿವ ಯು.ಟಿ .ಖಾದರ್ ಕಂಗಾಲಾಗಿದ್ದಾರೆ.
ಸಚಿವ ಯು.ಟಿ.ಖಾದರ್ ಅವರಿಗೆ ಸ್ವಕ್ಷೇತ್ರದಲ್ಲೇ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಘೇರಾವ್ ಹಾಕಿದ ಘಟನೆ ನಡೆದಿದೆ. ಇತ್ತೀಚೆಗೆ ಉಳ್ಳಾಲ ವ್ಯಾಪ್ತಿಯಲ್ಲಿ ಎಸ್.ಕೆ.ಎಸ್.ಎಸ್.ಎಫ್ ಸಂಘಟನೆ ಬೃಹತ್ ಸಮಸ್ತ ಸಮ್ಮೇಳನ ಆಯೋಜಿಸಿತ್ತು . ಸಮ್ಮೇಳನದಲ್ಲಿ ಭಾಗವಹಿಸಿ ಹಿಂತಿರುಗುತ್ತಿದ್ದ ವೇಳೆ ಯು.ಟಿ. ಖಾದರ್ ಅವರನ್ನು ಸುತ್ತುವರಿದ ಸಂಘಟನೆ ಕಾರ್ಯಕರ್ತರು ಕಾರ್ಯಕ್ರಮ ದಲ್ಲಿ ಭಾಗವಹಿಸಿದ ಕುರಿತು ಆಕ್ಷೇಪಿಸಿದ್ದರು.
ಎಸ್.ಕೆ.ಎಸ್.ಎಸ್.ಎಫ್ ಕಾರ್ಯಕರ್ತರು ಸಚಿವರನ್ನು ತರಾಟೆಗೆ ತೆಗೆದುಕೊಂಡಿದ್ದ ವಿಡಿಯೋ ವೈರಲ್ ಆಗಿತ್ತು.
ಬಿಜೆಪಿಗೆ ಗೆಲುವಿನ ಕನಸು
ಯು.ಟಿ. ಖಾದರ್ ಇತ್ತೀಚೆಗೆ ಕೊಲ್ಲಿ ರಾಷ್ಟ್ರಗಳಿಗೆ ಪ್ರವಾಸ ಕೈಗೊಂಡು ಅಲ್ಲಿ ಚುನಾವಣಾ ಪ್ರಚಾರ ನಡೆಸಿದ್ದಾರೆ ಎಂದು ಹೇಳಲಾಗಿದೆ. ಕೊಲ್ಲಿ ರಾಷ್ಟ್ರಗಳಲ್ಲಿ ಉದ್ಯೋಗದಲ್ಲಿರುವ ಕ್ಷೇತ್ರದ ಮತದಾರರಲ್ಲಿ ತನ್ನ ಪರವಾಗಿ ಮತ ಚಲಾಯಿಸುವಂತೆ ಮನ ಒಲಿಸುವ ಪ್ರಯತ್ನ ನಡೆಸಿದ್ದಾರೆ.
ಕಾಂಗ್ರೆಸ್ ಹಾಗು ಜೆಡಿಎಸ್ ನಲ್ಲಿ ನಡೆಯುತ್ತಿರುವ ಈ ಬೆಳವಣಿಗೆಗಳನ್ನು ಬಿಜೆಪಿ ದೂರದಿಂದಲೇ ಗಮನಿಸುತ್ತಿದ್ದು ತನ್ನ ತಂತ್ರಗಾರಿಕೆ ಹೆಣೆಯುತ್ತಿದೆ. ಜೆಡಿಎಸ್ ಮಂಗಳೂರು ವಿಧಾನ ಸಭಾ ಕ್ಷೇತ್ರದಲ್ಲಿ ಖಾದರ್ ವಿರೋಧಿ ಅಲೆ ಸೃಷ್ಠಿಸುವಲ್ಲಿ ಸಫಲವಾದರೆ ಬಿಜೆಪಿ ತನ್ನ ಸಂಪ್ರದಾಯಿಕ ಮತಗಳ ಮೂಲಕ ಗೆಲುವಿನ ಬಾಗಿಲಿಗೆ ತಲುಪಲಿದೆ ಎಂದು ವಿಶ್ಲೇಷಿಸಲಾಗಿದೆ.
ಮುಂಬರುವ ದಿನಗಳಲ್ಲಿ ತಮಗೆ ಎದುರಾಗಿರುವ ಕೆ. ಅಶ್ರಫ್ ಎಂಬ ಕಂಟಕವನ್ನು ಹೇಗೆ ಖಾದರ್ ಎದುರಿಸುತ್ತಾರೆ ಎಂಬುದೇ ಕುತೂಹಲಕಾರಿಯಾಗಿದೆ.