ಟಿಪ್ಪು ಜಯಂತಿ ಬಗ್ಗೆ ಸಿಎಂ ವಿವೇಚನೆಯಿಂದ ವರ್ತಿಸಲಿ: ನಳಿನ್
ಕಳೆದ ವರ್ಷ ನವೆಂಬರ್ 10ರಂದು ಟಿಪ್ಪು ಜಯಂತಿ ಆಚರಿಸಿ, ವಿವಿಧೆಡೆ ಅಹಿತಕರ ಘಟನೆಗಳು ನಡೆದಿದ್ದವು. ಅಲ್ಲದೆ ಪ್ರಾಣಹಾನಿ ಸಹಿತ ರಾಜ್ಯದ ವಿವಿಧೆಡೆ ಹಿಂಸಾಚಾರ ನಡೆದಿದೆ:ಸಂಸದ ನಳಿನ್ ಕುಮಾರ್ ಕಟೀಲ್
ಮಂಗಳೂರು, ನವೆಂಬರ್ 5: ರಾಜ್ಯ ಸರಕಾರ ನವೆಂಬರ್ 10ರಂದು ನಡೆಸಲು ಉದ್ದೇಶಿಸಿರುವ ಟಿಪ್ಪು ಜಯಂತಿಯನ್ನು ಕೂಡಲೇ ಕೈಬಿಡಬೇಕು ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಆಗ್ರಹಿಸಿದ್ದಾರೆ. ರಾಜ್ಯದ ಜನತೆಯ ಪ್ರಬಲ ವಿರೋಧವಿದ್ದರೂ ಸರಕಾರ ಟಿಪ್ಪು ಜಯಂತಿ ಆಚರಣೆಗೆ ಸಿದ್ಧತೆ ನಡೆಸುವ ಮೂಲಕ ಸಮಾಜದ ಶಾಂತಿ ಕದಡಲು ಪ್ರಯತ್ನಿಸುತ್ತಿದೆ.
ಕಳೆದ ವರ್ಷ ನವೆಂಬರ್ 10ರಂದು ಟಿಪ್ಪು ಜಯಂತಿ ಆಚರಿಸಿ, ವಿವಿಧೆಡೆ ಅಹಿತಕರ ಘಟನೆಗಳು ನಡೆದಿದ್ದವು. ಅಲ್ಲದೆ ಪ್ರಾಣಹಾನಿ ಸಹಿತ ರಾಜ್ಯದ ವಿವಿಧೆಡೆ ಹಿಂಸಾಚಾರ ನಡೆದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇನ್ನಾದರೂ ವಿವೇಚನೆಯಿಂದ ವರ್ತಿಸಿ, ಟಿಪ್ಪು ಜಯಂತಿ ಆಚರಣೆ ಕೈಬಿಡಬೇಕು ಎಂದು ನಳಿನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.[ಟಿಪ್ಪು ಜಯಂತಿ: ಸರಕಾರದ ಮುಖ್ಯ ಕಾರ್ಯದರ್ಶಿ ನಿರ್ಧರಿಸಲಿ, ಹೈಕೋರ್ಟ್]
ಸೂಕ್ಷ್ಮ ಪ್ರದೇಶವಾಗಿರುವ ಕರಾವಳಿಯಲ್ಲಿ ಕಾನೂನು ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ಅಮಾಯಕರ ಕೊಲೆ, ಜೈಲಿನಲ್ಲಿ ಹಿಂಸಾಚಾರ, ನಿರಂತರ ಹಲ್ಲೆ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದೆ. ಆದ್ದರಿಂದ ಆಚರಣೆ ಕೈಗೊಂಡರೆ ಕಳೆದ ವರ್ಷದಂತೆ ಈ ಬಾರಿಯೂ ಅಹಿತಕರ ಘಟನೆ ನಡೆಯುವ ಸಂಭವ ಇದೆ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.[ಟಿಪ್ಪು ಹುಟ್ಟಿದ್ದು ನವೆಂಬರ್ ಹತ್ತೋ? ಇಪ್ಪತ್ತೋ?]
ಈ ಸಲದಿಂದ ಪ್ರತಿ ವರ್ಷವೂ ಟಿಪ್ಪು ಜಯಂತಿ ನಡೆಸಲು ರಾಜ್ಯ ಸರಕಾರ ತೀರ್ಮಾನಿಸಿದೆ. ನವೆಂಬರ್ 10ಕ್ಕೆ ದಿನ ಕೂಡ ನಿಗದಿಯಾಗಿದೆ. ಟಿಪ್ಪು ಜಯಂತಿಯಿಂದ ಕಳೆದ ಬಾರಿ ನಡೆದ ಅಹಿತಕರ ಘಟನೆ ಈ ಬಾರಿ ಮರುಕಳಿಸಬಾರದು ಎನ್ನುವ ಕಾರಣದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಲ್ಲೆಯ ಜನರ ಹಿತದೃಷ್ಟಿಯಿಂದ ಟಿಪ್ಪು ಜಯಂತಿ ಆಚರಣೆ ಕೈ ಬಿಡುವುದೇ ಲೇಸು ಎಂದು ತಿಳಿಸಿದ್ದಾರೆ.