ಮಂಗಳೂರು ಹೊರವಲಯದ ಕಿನ್ನಿಗೋಳಿಯಲ್ಲಿ ಹುಲಿ ಪ್ರತ್ಯಕ್ಷ ?
ಮಂಗಳೂರು, ಜುಲೈ 02: ಮಂಗಳೂರು ಹೊರವಲಯದಲ್ಲಿ ಹುಲಿ ಕಾಣಿಸಿಕೊಂಡಿದೆ ಎನ್ನುವ ವಿಚಾರ ಇಲ್ಲಿನ ಜನರಲ್ಲಿ ಆತಂಕ ಮೂಡಿಸಿದೆ. ನಗರ್ ಹೊರವಲಯದ ಕನ್ನಿಗೋಳಿ ಎಂಬಲ್ಲಿ ಈ ಘಟನೆ ನಡೆದಿದ್ದು ಪರಿಸರದ ಜನರಲ್ಲಿ ಭಾರೀ ಆತಂಕ ಮೂಡಿಸಿದೆ.
ಯರಿಯೂರು ಗ್ರಾಮದಲ್ಲಿ ಹುಲಿಹೆಜ್ಜೆ: ಭಯದಲ್ಲಿ ಗ್ರಾಮಸ್ಥರು
ಕಿನ್ನಿಗೋಳಿ ಸಮೀಪದ ಐಕಳ ನೆಲ್ಲಿಗುಡ್ಡೆಯಲ್ಲಿ ಹುಲಿ ಕಂಡು ಬಂದಿದೆ ಎಂದು ಹೇಳಲಾಗುತ್ತಿದೆ. ನೆಲ್ಲಿಗುಡ್ಡೆ ನಿವಾಸಿ ಐವನ್ ಸಾಲ್ದಾನ ಇಂದು ಮುಂಜಾನೆ ತಮ್ಮ ಮನೆಯ ಪಕ್ಕ ಇರುವ ಅಡಿಕೆ ತೋಟಕ್ಕೆ ಹೋಗುವಾಗ ಎದುರಿನಲ್ಲಿ ಹುಲಿ ಕಂಡು ಬಂದಿದೆಯಂತೆ. ಕೂಡಲೇ ಐವನ್ ಅವರು ಬೊಬ್ಬೆ ಹಾಕಿದ್ದು ಹುಲಿ ಒಡಿ ಹೋಗಿ ಪಕ್ಕದ ಪ್ರಾನ್ಸಿಸ್ ರೆಬೆಲ್ಲೋ ಎಂಬುವವರ ತೋಟದ ಕಂಪೌಂಡ್ ಒಳಗೆ ಹಾರಿ ಪಕ್ಕದ ಗುಡ್ಡಕ್ಕೆ ಒಡಿಹೋಗಿದೆ ಎಂದು ಹೇಳಲಾಗಿದೆ.
ಐವನ್ ರವರು ಕೂಡಲೇ ಅರಣ್ಯ ಇಲಾಖೆ ಮತ್ತು ಮೂಲ್ಕಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಅರಣ್ಯಾಧಿಕಾರಿ ಕೆ.ಸಿ ಮ್ಯಾಥ್ಯೂ ಮತ್ತು ಮೂಲ್ಕಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಅಧಿಕಾರಿಗಳು ಹುಲಿ ಓಡಿ ಹೋದ ಜಾಗದಲ್ಲಿ ಹೆಜ್ಜೆ ಗುರುತನ್ನು ಹುಡುಕಾಡಿದ್ದು, ತೋಟದಲ್ಲಿ ಪೈರು ಇದ್ದ ಕಾರಣ ಸರಿಯಾಗಿ ಕಂಡು ಬಂದಿಲ್ಲ.
ಈ ಹಿಂದೆ ಮೂಡಬಿದ್ರೆ ವಲಯದಲ್ಲಿ ಅನೇಕ ಕಡೆ ಚಿರತೆ ಕಂಡು ಬಂದಿತ್ತು. ಆದರೆ, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹುಲಿ ಕಂಡು ಬಂದ ಪ್ರಕರಣ ಇಲ್ಲ. ಕಿನ್ನಿಗೋಳಿಯ ಐಕಳದಲ್ಲಿ ಕಂಡು ಬಂದಿದ್ದು ಚಿರತೆ ಆಗಿರುವ ಸಾಧ್ಯತೆ ಹೆಚ್ಚು ಎಂದು ಅರಣ್ಯಾಧಿಕಾರಿ ಕೆ.ಸಿ ಮ್ಯಾಥ್ಯೂ ಅಭಿಪ್ರಾಯವಾಗಿದೆ.