ಮಿಥುನ್ ರೈಗಿಲ್ಲ ಮೂಡಬಿದಿರೆ ಟಿಕೆಟ್, ಅಭಯಚಂದ್ರ ಜೈನ್ ಹೇಳಿದ್ದೇನು?
ಮಂಗಳೂರು, ಏಪ್ರಿಲ್ 17: ಮುಲ್ಕಿ-ಮೂಡಬಿದಿರೆ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಶಾಸಕ ಅಭಯಚಂದ್ರ ಜೈನ್ ಪಾಲಾಗಿದೆ. ಸತತ ನಾಲ್ಕು ಅವಧಿಗೆ ಕ್ಷೇತ್ರವನ್ನು ಪ್ರತಿನಿಧಿಸಿ ಅವರು ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರೂ ಆಗಿದ್ದರು. ಇದೇ ಕ್ಷೇತ್ರದ ಮೇಲೆ ದಕ್ಷಿಣ ಕನ್ನಡ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಮತ್ತು ವಿಧಾನ ಪರಿಷತ್ ಸದಸ್ಯ ಐವನ್ ಡಿ ಸೋಜಾ ಕಣ್ಣಿಟ್ಟಿದ್ದರು.
ಅಭ್ಯರ್ಥಿಗಳ ಪಟ್ಟಿ : ಕಾಂಗ್ರೆಸ್ | ಬಿಜೆಪಿ | ಜೆಡಿಎಸ್
ಟಿಕೆಟ್ ಸಿಗದಿದ್ದರೂ ಇಬ್ಬರೂ ನಾಯಕರು ಅಸಮಧಾನ ಹೊರ ಹಾಕದೆ ಕಾಂಗ್ರೆಸ್ ಪರವಾಗಿ ಕೆಲಸ ಮಾಡುವುದಾಗಿ ಹೇಳಿದ್ದಾರೆ. ಆದರೆ ಮಿಥುನ್ ರೈ ಬೆಂಬಲಿಗರು ಮಾತ್ರ, 'ತಮಗೆ ಅನ್ಯಾಯವಾಗಿದೆ. ಅಭಯಚಂದ್ರ ಜೈನ್ ಕೊಟ್ಟ ಮಾತು ತಪ್ಪಿದ್ದಾರೆ' ಎಂದು ಬಂಡಾಯವೆದ್ದಿದ್ದಾರೆ. ಯುವ ಕಾಂಗ್ರೆಸ್ ಘಟಕದ ಪದಾಧಿಕಾರಿಗಳು ರಾಜೀನಾಮೆ ಬೆದರಿಕೆಯನ್ನೂ ಹಾಕಿದ್ದಾರೆ.
ಮಿಥುನ್ ರೈಗೆ ಟಿಕೆಟ್ ನಿರಾಕರಣೆ, ಯುವ ಕಾಂಗ್ರೆಸ್ ಮುಖಂಡರಿಂದ ಬಂಡಾಯ
ಈ ಸಂದರ್ಭದಲ್ಲಿ ಸ್ವತಃ ಮೂಡಬಿದಿರೆ ಶಾಸಕರು ಹಾಗೂ ಕಾಂಗ್ರೆಸ್ ಟಿಕೆಟ್ ಪಡೆದಿರುವ ಅಭಯಚಂದ್ರ ಜೈನ್ 'ಒನ್ಇಂಡಿಯಾ ಕನ್ನಡ'ಕ್ಕೆ ಟಿಕೆಟ್ ಹಂಚಿಕೆ ಸಂಬಂಧ ಪ್ರತಿಕ್ರಿಯೆ ನೀಡಿದ್ದಾರೆ.
ಪ್ರಶ್ನೆ: ಆರಂಭದಲ್ಲಿ ನೀವು ಸ್ಪರ್ಧೆಯಿಂದ ಹಿಂಜರಿದಿದ್ರಿ?
ಉತ್ತರ: ಇಲ್ಲ ನಾನು ಸ್ಪರ್ಧೆಯಿಂದ ಯಾವತ್ತೂ ಹಿಂದೆ ಸರಿದಿಲ್ಲ. ಮಾಧ್ಯಮದವರ ತಪ್ಪಿನಿಂದಾಗಿ ಹೀಗೆ ಆಗುತ್ತದೆ. ನಾನು ಯುವ ಕಾಂಗ್ರೆಸ್ ನವರಿಕೆ ಟಿಕೆಟ್ ಕೊಡಲಿಕ್ಕೆ ಪಕ್ಷಕ್ಕೆ ಇರಾದೆ ಇದ್ದರೆ ನನ್ನ ಸೀಟು ಕೊಡಬಹುದು ಎಂದು ಹೇಳಿದ್ದೆ. ನಾನು ಯಾರದ್ದಾದರೂ ಭಯ ಇದ್ದು ಚುನಾವಣೆಗೆ ನಿಲ್ಲುವುದಿಲ್ಲ ಎಂದು ಹೇಳಿದ್ದಲ್ಲ.
ನಾವೆಲ್ಲಾ ಯುವ ಕಾಂಗ್ರೆಸ್ ನಲ್ಲಿದ್ದು ನಮಗೆ ಅವಕಾಶ ಸಿಕ್ಕಿದ್ದು. ಹಾಗಾಗಿ ಮಿಥುನ್ ರೈ ಯುವ ಕಾಂಗ್ರೆಸ್ ಅಧ್ಯಕ್ಷರು. ಅವರಿಗೆ ಜಿಲ್ಲೆಯಲ್ಲಿ ಏನಾದರೂ ಅವಕಾಶ ನೀಡಬೇಕು ಎಂದು ಕೇಳಿದಾಗ, 'ಎಲ್ಲಿ ಕೊಡವುದು ಖಾಲಿ ಇಲ್ಲವಲ್ಲ?' ಎಂದು ಮುಖ್ಯಮಂತ್ರಿಗಳು ಹೇಳಿದ್ದರು. ಆಗ ನಾನು, 'ಎಲ್ಲಿಯೂ ಖಾಲಿ ಇಲ್ಲದಿದ್ದರೆ ನಮ್ಮಲ್ಲಿ ಕೊಡಬಹುದು ಸಾರ್..' ಎಂದು ಹೇಳಿದ್ದೇನೆ. ಆ ರೀತಿ ಶಿಫಾರಸ್ಸು ಮಾಡಿಯೂ ಕಳುಹಿಸಿದ್ದೇನೆ.
ನೀವೇ ಯಾಕೆ ಸ್ಪರ್ಧೆ ಮಾಡುತ್ತಿದ್ದೀರಿ?
ಪಕ್ಷ ನೀನೇ ನಿಲ್ಲಬೇಕು ಎಂದು ಹೇಳಿದಾಗ ಪಕ್ಷದ ನಿರ್ಧಾರವನ್ನು ಒಪ್ಪಿ ನಾನೇ ಸ್ಪರ್ಧಿಸುತ್ತಿದ್ದೇನೆ. ನಾನು ಶಾಸಕ ಆಗಿದ್ದು ಕೂಡ ಪಕ್ಷದಿಂದ. ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತ. ಆದ್ದರಿಂದ ಈಗ ನಾನು ಸ್ಪರ್ಧೆ ಮಾಡಬೇಕು ಎಂದು ಪಕ್ಷ ನಿರ್ಧಾರ ಮಾಡಿದೆ ಮತ್ತು ಮುಖ್ಯಮಂತ್ರಿಗಳು ಹೇಳಿದ್ದಾರೆ. ಆದರೆ ನಾನು ಸಾಕಷ್ಟು ಪ್ರಯತ್ನಪಟ್ಟಿದ್ದೇನೆ. ಯುವ ಕಾಂಗ್ರಸ್ ಗೆ ಕೊಡಬೇಕು ಎಂದು ರಾಹುಲ್ ಗಾಂಧಿಯವರು ಬಂದಾಗಲು ನಾವು ವಿನಂತಿ ಮಾಡಿದ್ದೇವೆ. ಎಲ್ಲವೂ ನಾವು ಹೇಳಿದ ಹಾಗೆ ಆಗುವುದಿಲ್ಲವಲ್ಲ. ಪಕ್ಷ ಹೇಳಿದ ಹಾಗೆಯೂ ನಾವು ಕೇಳಬೇಕಾಗುತ್ತದೆ.
ಮಿಥುನ್ ರೈ ಯವರಿಗೆ ಟಿಕೆಟ್ ನೀಡದೇ ನಿಮಗೇ ಯಾಕೆ ಟಿಕೆಟ್ ನೀಡಿದ್ದಾರೆ?
ಅವರಿಗೆ ಕೊಡದೇ ಇದ್ದದ್ದು ಅಲ್ಲ; ನನ್ನ ಸೀಟನ್ನು ನನಗೇ ನೀಡಿರುವುದು. ಅಲ್ಲಿ ಜನರ ಸೇವೆ ಮಾಡಿದವ ನಾನು. ಅಭಿವೃದ್ಧಿ ಮಾಡಿದವ ನಾನು. ನಾನು ಹುಟ್ಟಿದ್ದು ಮೂಡಬಿದಿರೆ. ನಾನು ಬೆಳೆದಿದ್ದು ಮೂಡಬಿದಿರೆ. ನಾನು ಇರುವುದ ಮೂಡಬಿದಿರೆ. ನನ್ನ ಕಾರ್ಯಕರ್ತರಿರುವುದು ಮುಡಬಿದಿರೆ. ಬೇರೆ ಏನೂ ನನಗೆ ಕೇಳಬೇಡಿ.
ಮಿಥುನ್ ರೈ ಪೋಸ್ಟ್
ಇನ್ನು ಟಿಕೆಟ್ ಕೈತಪ್ಪಿದ ಬೆನ್ನಲ್ಲೇ ಮಿಥುನ್ ರೈ ಫೇಸ್ಬುಕ್ ಪೋಸ್ಟ್ ಒಂದನ್ನು ಹಾಕಿದ್ದಾರೆ. "ನಿಮ್ಮ ಬೆಂಬಲ ಮತ್ತು ಪ್ರೀತಿಗೆ ನಾನು ಆಭಾರಿ. ನಿಮ್ಮ ಆಶಯಗಳನ್ನು ಇಡೇರಿಸಲು ನಾನು ಇನ್ನಷ್ಟು ಹೆಚ್ಚು ಕೆಲಸ ಮಾಡುತ್ತೇನೆ ಮತ್ತು ಸಮಾಜಕ್ಕೆ ನನ್ನಿಂದ ಆದಷ್ಟು ಒಳ್ಳೆಯದನ್ನು ಮಾಡಲು ಪ್ರಯತ್ನಿಸುತ್ತೇನೆ," ಎಂದಿದ್ದಾರೆ.
"ಬರಲಿರುವ ವಿಧಾನಸಭೆ ಚುನಾವಣೆ ಕಾಂಗ್ರೆಸ್ ಪಕ್ಷದ ಬೆಂಬಲಿಗರ ಪಾಲಿಗೆ ಬಹಳ ಮುಖ್ಯವಾದುದು. ಎಲ್ಲಾ ಯುವ ಕಾಂಗ್ರೆಸ್ ಸದಸ್ಯರು, ಕಾಂಗ್ರೆಸ್ ಪಕ್ಷದ ಸದಸ್ಯರು ಮತ್ತು ಕಾಂಗ್ರೆಸ್ ಬೆಂಬಲಿಗರು ಒಟ್ಟಾಗಿ ಕೆಲಸ ಮಾಡುವಂತೆ ನಾನು ಮನವಿ ಮಾಡುತ್ತೇನೆ ಈ ಮೂಲಕ ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುವುದನ್ನು ಖಚಿತಪಡಿಸಬೇಕಿದೆ," ಎಂದಿದ್ದಾರೆ.