ಮಿಥುನ್ ರೈಗೆ ಟಿಕೆಟ್ ನಿರಾಕರಣೆ: ಇಂದು ಎನ್ಎಸ್ ಯುಐ ಮುಖಂಡರ ರಾಜೀನಾಮೆ
ಮಂಗಳೂರು ಏಪ್ರಿಲ್ 18 : ದಕ್ಷಿಣ ಕನ್ನಡ ಜಿಲ್ಲೆಯ ಕಾಂಗ್ರೆಸ್ ಪಾಳಯದ ಯುವ ಮುಖಂಡರು ಬಂಡಾಯವೆದ್ದಿದ್ದಾರೆ. ಕಾಂಗ್ರೆಸ್ ಯುವ ಮುಖಂಡ ಮಿಥುನ್ ರೈಗೆ ಮುಲ್ಕಿ-ಮೂಡಬಿದರೆ ವಿಧಾನಸಭಾ ಕ್ಷೇತ್ರದ ಟಿಕೆಟ್ ನೀಡದ ಹಿನ್ನೆಲೆಯಲ್ಲಿ ಜಿಲ್ಲೆಯ ಕಾಂಗ್ರೆಸ್ ಯುವ ಮುಖಂಡರು ಹಾಗೂ ಎನ್ಎಸ್ ಯುಐ ಪದಾಧಿಕಾರಿಗಳು ಬಂಡಾಯದ ಬಾವುಟ ಹಾರಿಸಿದ್ದಾರೆ.
ಯುವ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಮಿಥುನ್ ರೈಗೆ ಟಿಕೆಟ್ ನೀಡದ ಹಿನ್ನೆಲೆಯಲ್ಲಿ ಎನ್ಎಸ್ ಯುಐ ಮುಖಂಡರು ಮಂಗಳೂರಿನಲ್ಲಿ ಮಾಧ್ಯಮ ಗೋಷ್ಠಿ ನಡೆಸಿ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡುವುದಾಗಿ ತಿಳಿಸಿದ್ದಾರೆ. ರಾಜೀನಾಮೆ ವಿಚಾರವಾಗಿ ಮಾತನಾಡಿದ ಎನ್ಎಸ್ ಯುಐ ರಾಜ್ಯ ಕಾರ್ಯದರ್ಶಿ ರೂಪೇಶ್ ರೈ, "ಯುವ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಮಿಥುನ್ ರೈ ಅವರಿಗೆ ಟಿಕೆಟ್ ನೀಡದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಎನ್ಎಸ್ ಯುಐ ನಾಯಕರು ಸಾಮೂಹಿಕ ರಾಜೀನಾಮೆ ನೀಡಲು ನಿರ್ಧರಿಸಿದ್ದೇವೆ," ಎಂದು ತಿಳಿಸಿದರು.
"ಕಾಂಗ್ರೆಸ್ ಜಿಲ್ಲಾಧ್ಯಕ್ಷರಿಗೆ ರಾಜೀನಾಮೆ ಸಲ್ಲಿಸುತ್ತೇವೆ. ಮಿಥುನ್ ರೈ ಯಾವ ಪಕ್ಷಕ್ಕೆ ಹೋದರೂ ನಾವು ಅವರ ಜೊತೆ ಹೋಗುತ್ತೇವೆ. ಮಿಥುನ್ ರೈ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ದರಾಗಿದ್ದೇವೆ," ಎಂದು ರೂಪೇಶ್ ರೈ ಸ್ಪಷ್ಟಪಡಿಸಿದರು.
ಮಿಥುನ್ ರೈಗಿಲ್ಲ ಮೂಡಬಿದಿರೆ ಟಿಕೆಟ್, ಅಭಯಚಂದ್ರ ಜೈನ್ ಹೇಳಿದ್ದೇನು?
ಕಾಂಗ್ರೆಸ್ ಪಾಳಯದ ಯುವ ಮುಖಂಡರು ಈಗ ಹೆೃಕಮಾಂಡ್ ವಿರುದ್ಧವೇ ತಿರುಗಿ ಬಿದ್ದಿದ್ದಾರೆ. ಕಾಂಗ್ರೆಸ್ ಪಾಳಯದಲ್ಲಿ ನಡೆಯುತ್ತಿರುವ ಈ ಬೆಳವಣಿಗೆ ಪಕ್ಷದ ನಾಯಕರಿಗೆ ಮುಜುಗರ ಮೂಡಿಸಿದೆ. ರಾಜೀನಾಮೆಯ ಒತ್ತಡ ಹೇರಿ ಮಿಥುನ್ ರೈಗೆ ಟಿಕೆಟ್ ಕೊಡಿಸಲು ಕೊನೆಯ ಹಂತದ ಪ್ರಯತ್ನ ನಡೆಸಿದ್ದಾರೆ.
ನಿನ್ನೆ ಕೂಡ ಯುವ ಕಾಂಗ್ರೆಸ್ ನ ಕೆಲ ಮುಖಂಡರು ಪತ್ರಿಕಾಗೋಷ್ಠಿ ನಡೆಸಿ ರಾಜೀನಾಮೆ ನೀಡುವ ಹೇಳಿಕೆ ನೀಡಿದ್ದರು. ಕಾಂಗ್ರೆಸ್ ಯುವ ಮುಖಂಡರ ಈ ಒತ್ತಡ ತಂತ್ರ ಎಷ್ಟು ಫಲಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.