ಶರತ್ ಮಡಿವಾಳ್ ಹತ್ಯೆ ಪ್ರಕರಣದಲ್ಲಿ ಮತ್ತೆ ಮೂವರ ಬಂಧನ
ಮಂಗಳೂರು, ಆಗಸ್ಟ್ 16: ಆರ್.ಎಸ್.ಎಸ್ ಕಾರ್ಯಕರ್ತ ಶರತ್ ಮಡಿವಾಳ್ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಇನ್ನೊಂದು ಮಹತ್ವದ ಯಶಸ್ಸು ದೊರೆತಿದೆ. ಶರತ್ ಮಡಿವಾಳ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಮೂರು ಮಂದಿ ಆರೋಪಿಗಳನ್ನು ದಕ್ಷಿಣ ಕನ್ನಡ ಪೊಲೀಸರು ಬಂಧಿಸಿದ್ದಾರೆ .
ಬಂಧಿತರನ್ನು ರಿಯಾಜ್ ಪರಂಕಿ, ಸಿದ್ದಿಕ್ ನೆಲ್ಯಾಡಿ ಹಾಗೂ ಕಲೀಂ ಎಂದು ಗುರುತಿಸಲಾಗಿದೆ. ಬಂಧಿತರ ಪೈಕಿ ಕಲೀಂ ಚಾಮರಾಜನಗರ ನಾಗಿದ್ದು ಇನ್ನುಳಿದ ರಿಯಾಜ್ ಪರಂಕಿ ಹಾಗೂ ಸಿದ್ದಿಕ್ ನೆಲ್ಯಾಡಿ ಮತ್ತು ಬೆಳ್ತಂಗಡಿ ತಾಲೂಕಿನವರಾಗಿದ್ದಾರೆ ಎಂದು ಹೇಳಲಾಗಿದೆ.
ಬಂಧಿತ ಆರೋಪಿಗಳು ಶರತ್ ಮಡಿವಾಳ ಹತ್ಯೆ ನಡೆಸಿದ ಪ್ರಮುಖ ಆರೋಪಿಗಳಿಗೆ ಆಶ್ರಯ ನೀಡಿ ಸಹಕರಿಸಿದ್ದು, ಹತ್ಯೆ ಪ್ರಕರಣದ ಷಡ್ಯಂತ್ರದಲ್ಲಿ ಭಾಗಿಯಾಗಿದ್ದಾರೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ .
ಬಂಧಿತ ಮೂರು ಮಂದಿ ಆರೋಪಿಗಳು ಶರತ್ ಮಡಿವಾಳ ಅವರನ್ನು ಮಾರಕಾಸ್ತ್ರಗಳಿಂದ ಕಡಿದು ಹತ್ಯೆ ಮಾಡಿದ ಆರೋಪಿ ಗಳಿಗೆ ಪರಾರಿಯಾಗಲು ಹಾಗೂ ಅಡಗಿ ಕುಳಿತು ಕೊಳ್ಳಲು ಸಹಾಯ ಮಾಡಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ .
ಕೃತ್ಯ ಎಸಗಿದ ಇಬ್ಬರು ಪ್ರಮುಖ ಆರೋಪಿಗಳು ಪರಾರಿಯಾಗಿದ್ದು, ಅವರ ಬಂಧನಕ್ಕೂ ಪೊಲೀಸರು ತಂತ್ರಗಾರಿಕೆ ರೂಪಿಸಿದ್ದಾರೆ .ಈ ನಡುವೆ ಪ್ರಕರಣದಲ್ಲಿ ನೇರವಾಗಿ ಭಾಗಿಯಾಗಿದ್ದ ಆರೋಪಿಗಳ ಪೈಕಿ ಒರ್ವ ವಿದೇಶಕ್ಕೆ ಪರಾರಿಯಾಗಿರುವ ಬಗ್ಗೆ ಸಂಶಯ ವ್ಯಕ್ತಪಡಿಸಲಾಗಿದೆ.
ಆರ್.ಎಸ್.ಎಸ್ ಕಾರ್ಯಕರ್ತ ಶರತ್ ಮಡಿವಾಳ್ ಹತ್ಯೆ ಪ್ರಕರಣದಲ್ಲಿ ನಿನ್ನೆ ಪೊಲೀಸರು ಪಿಎಫ್ಐ ಮುಖಂಡ ಚಾಮರಾಜನಗರದ ಖಲಿಲುಲ್ಲಾ ಹಾಗೂ ಪಿಎಫ್ಐ ಕಾರ್ಯಕರ್ತ ಅಬ್ದುಲ್ ಶಾಫಿ ಎಂಬುವರನ್ನು ಬಂಧಿಸಿದ್ದರು .