ಮಂಗಳೂರಿನಲ್ಲಿ ರಸ್ತೆ ಸುರಕ್ಷತೆಗಾಗಿ 3 ಸಾಕ್ಷ್ಯಚಿತ್ರಗಳು
ಮಂಗಳೂರು, ಜನವರಿ 03 : ಮಂಗಳೂರಿನ 'ಕನ್ನಡಕ ಪ್ರೊಡಕ್ಷನ್ಸ್'ನವರು ನಗರದ ಪೋಲಿಸ್ ಇಲಾಖೆ, ಲಯನ್ಸ್ ಕ್ಲಬ್ ಮಂಗಳೂರು ಮತ್ತು ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಇವರ ಸಹಯೋಗದಿಂದ ರಸ್ತೆ ಸುರಕ್ಷಾ ಮಾಸಾಚರಣೆಯ ನಿಮಿತ್ತ ಮೂರು ಸಾಕ್ಷ್ಯಚಿತ್ರಗಳನ್ನು ನಿರ್ಮಿಸಿದೆ.
'ಹೆಲ್ಮೆಟ್ ಧರಿಸಿ ದ್ವಿಚಕ್ರ ಚಲಾಯಿಸಿ', 'Rash ಡ್ರೈವಿಂಗ್' ಮತ್ತು 'ಡ್ರಿಂಕ್ ಎಂಡ್ ಡ್ರೈವ್' ಎಂಬ ಮೂರು ಸಾಕ್ಷ್ಯ ಚಿತ್ರಗಳನ್ನು ಮಂಗಳೂರಿನ ಮಹಾಪೌರರಾದ ಕವಿತಾ ಸನಿಲ್ ಅವರು ಪ್ರೆಸ್ ಕ್ಲಬ್ನಲ್ಲಿ ಲೋಕಾರ್ಪಣೆ ಮಾಡಿದರು.
"ಸಾಮಾಜಿಕ ಕಾಳಜಿಯುಳ್ಳ ಅನಿವಾಸಿ ಭಾರತೀಯ ಮಂಜೇಶ್ವರ ಮೋಹನದಾಸ ಕಾಮತ ಇವರ ಕನಸಿನ ಕೂಸಾದ ಸಾಕ್ಷ್ಯಚಿತ್ರಗಳು ಚೆನ್ನಾಗಿ ಮೂಡಿ ಬಂದಿವೆ. ಪೋಲಿಸ್ ಕಮಿಷನರ್ ಟಿ. ಸುಧೀರ ಕುಮಾರ ಸಂಪೂರ್ಣ ಸಹಯೋಗವನ್ನು ನೀಡಿದ್ದು, ಮುಂದಿನ ದಿನಗಳಲ್ಲಿ ಈ ಸಾಕ್ಷ್ಯಚಿತ್ರಗಳ ಪ್ರದರ್ಶನ ಎಲ್ಲಾ ಚಿತ್ರ ಮಂದಿರಗಳಲ್ಲಿ ಆಗಲಿದೆ. ನಟ ಉಪೇಂದ್ರ, ಖ್ಯಾತ ಪತ್ರಕರ್ತ ಮನೋಹರ ಪ್ರಸಾದ ಹಾಗೂ ಪೋಲಿಸ್ ಕಮಿಷನರ್ ಈ ಸಾಕ್ಷ್ಯಚಿತ್ರಗಳಲ್ಲಿ ಸಂದೇಶಗಳನ್ನು ನೀಡಿದ್ದಾರೆ" ಎಂದು ಯೋಜನೆಯ ಸಂಚಾಲಕ ಪತ್ರಕರ್ತ ಶ್ರೀನಿವಾಸ ನಾಯಕ ಇಂದಾಜೆ ಮಾಹಿತಿ ನೀಡಿದರು.
"ಮಂಗಳೂರಿನ ರಸ್ತೆಗಳಲ್ಲಿ ಪ್ರತಿ ತಿಂಗಳು 5000 ಹೊಸ ವಾಹನಗಳು ಸೇರ್ಪಡೆಯಾಗುತ್ತಿವೆ. ರಸ್ತೆಗಳು ಅಷ್ಟೇನು ಅಗಲವಾಗಿಲ್ಲ. ವಾಹನಗಳು ಅಲ್ಲಲ್ಲಿ ಬ್ಲಾಕ್ ನಲ್ಲಿ ಸಿಲುಕುವುದನ್ನು ನಾವು ಕಾಣುತ್ತೇವೆ. ಹಿಂದಿನ ದಿನಗಳಲ್ಲಿ ಐದು ನಿಮಿಷ ತಗಲುತ್ತಿದ್ದ ಪ್ರಯಾಣಕ್ಕೆ ಇಂದು ಒಂದು ಗಂಟೆ ತಗಲುತ್ತದೆ. ವಾಹನ ಚಾಲಕರಲ್ಲಿ ರಸ್ತೆ ನಿಯಮಗಳನ್ನು ಪಾಲಿಸಲು ಸಮಯ ಇಲ್ಲವಾಗಿದೆ. ಇಂತಹ ಸಾಕ್ಷ್ಯಚಿತ್ರಗಳಿಂದ ಸಾರ್ವಜನಿಕರಲ್ಲಿ ರಸ್ತೆ ನಿಯಮಗಳ ಬಗ್ಗೆ ಪ್ರಜ್ಞೆ ಮೂಡಿಸಲು ಸಾಧ್ಯವಿದೆ" ಎಂದು ಲಯನ್ಸ್ ಕ್ಲಬ್ ಮಂಗಳೂರು ಇದರ ಅಧ್ಯಕ್ಷ ವೆಂಕಟೇಶ ಬಾಳಿಗಾ ಹೇಳಿದರು.
"ನನ್ನ ಪತಿ ಪ್ರತಿ ಬಾರಿ ಮಂಗಳೂರಿಗೆ ಬಂದಾಗ ಒಂದಲ್ಲ ಒಂದು ರಸ್ತೆ ಅಪಘಾತಕ್ಕೆ ಸಾಕ್ಷಿಯಾಗಿದ್ದಾರೆ. ಪ್ರತಿಯೊಂದು ಅಪಘಾತದಲ್ಲಿ ರಸ್ತೆ ನಿಯಮಗಳನ್ನು ಪಾಲಿಸದೆ ಇರುವುದನ್ನು ಪರಿಗಣಿಸಿದ ಅವರು ಈ ಸಾಕ್ಷ್ಯಚಿತ್ರಗಳನ್ನು ನಿರ್ಮಿಸುವ ಯೋಜನೆಗೆ ಕೈಹಾಕಿದ್ದಾರೆ. ಲಯನ್ಸ್ ಹಾಗೂ ರೋಟರಿ ಸಂಸ್ಥೆಯವರಿಗೆ ಧನ್ಯವಾದಗಳು" ಎಂದು ನಿರ್ಮಾಪಕಿ ಲಕ್ಷ್ಮೀ ಮೋಹನದಾಸ ಕಾಮತ ಹೇಳಿದರು.
"ರಸ್ತೆ ಅಪಘಾತಗಳನ್ನು ತಡೆಯುವಲ್ಲಿ ಸಾಮಾಜಿಕ ಜಾಗೃತಿ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಈ ಸಾಕ್ಷ್ಯಚಿತ್ರಗಳು ಸಹಕಾರಿಯಾಗಿವೆ. 30 ವರ್ಷಗಳ ಇತಿಹಾಸವುಳ್ಳ ರೋಟರಿ ಸೆಂಟ್ರಲ್ ಇಂತಹ ಯೋಜನೆಗಳಿಗೆ ಸಹಕಾರ ನೀಡುತ್ತದೆ" ಎಂದು ರೋಟರಿ ಸೆಂಟ್ರಲ್ ಇದರ ಅಧ್ಯಕ್ಷ ರೇಮಂಡ್ ಡಿಕುನ್ಹಾ ತಿಳಿಸಿದರು. ಈ ಸಾಕ್ಷ್ಯಚಿತ್ರಗಳು ಖ್ಯಾತ ಛಾಯಾಚಿತ್ರಗಾರರಾದ ಸತೀಷ್ ಇರಾ ಮತ್ತು ದಯಾ ಕುಕ್ಕಾಜೆ ಮತ್ತು ಪತ್ರಕರ್ತ ಶ್ರೀನಿವಾಸ ನಾಯಕ ಇಂದಾಜೆ ನಿರ್ದೇಶನದಲ್ಲಿ ಮೂಡಿ ಬಂದಿವೆ.
ಕನ್ನಡಕ ಪ್ರೊಡಕ್ಷನ್ ನಿರ್ಮಾಪಕಿ ಲಕ್ಷ್ಮೀ ಮೋಹನದಾಸ ಕಾಮತ, ಲಯನ್ಸ್ ಕ್ಲಬ್ ಮಂಗಳೂರು ಅಧ್ಯಕ್ಷ ವೆಂಕಟೇಶ ಬಾಳಿಗಾ, ಖಜಾಂಚಿ ಜಯರಾಜ್ ಪ್ರಕಾಶ, ರೋಟರಿ ಮಂಗಳೂರು ಸೆಂಟ್ರಲ್ ಅಧ್ಯಕ್ಷ ರೇಮಂಡ್ ಡಿಕ್ಹುನಾ, ವಿಠೋಭಾ ಭಂಡಾರಕಾರ್, ವಿಶಾಲ ಭಂಡಾರಕಾರ್, ದಯಾ ಕುಕ್ಕಾಜೆ, ಶ್ರೀನಿವಾಸ ನಾಯಕ ಇಂದಾಜೆ, ಸತೀಷ ಇರಾ ಉಪಸ್ಥಿತರಿದ್ದರು.