2 ಲಕ್ಷ ರುಪಾಯಿ ಮೌಲ್ಯದ ಒಂದು ಗೂಬೆ ಸಾಗಿಸುತ್ತಿದ್ದ ಮೂವರು ಅಂದರ್
ಮಂಗಳೂರು, ಫೆಬ್ರವರಿ 27: ಅಕ್ರಮವಾಗಿ ಗೂಬೆ ಸಾಗಾಟ ಮಾಡುತ್ತಿದ್ದ ಮೂರು ಮಂದಿಯನ್ನು ಬಂಧಿಸಿ, ಗೂಬೆ ಹಾಗೂ ಸಾಗಾಟಕ್ಕೆ ಬಳಸಲಾಗಿದ್ದ ವಾಹನವನ್ನು ಪೊಲೀಸರು ವಶಪಡಿಸಿಕೊಂಡ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ.
ಪುತ್ತೂರು ಅರಣ್ಯ ಸಂಚಾರಿ ಘಟಕದ ಪಿಎಸ್ ಐ ಸುಂದರ್ ಪೂಜಾರಿ ಮತ್ತು ಸಿಬ್ಬಂದಿ ಬೆಳ್ತಂಗಡಿ ತಾಲೂಕಿನ ಗೇರುಕಟ್ಟೆ ಕಡೆ ಗಸ್ತು ತೆರಳಿದ್ದ ಸಂದರ್ಭದಲ್ಲಿ ಗೂಬೆ ಸಾಗಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ದೊರೆತಿತ್ತು.
ಪೊಲೀಸರು ಬೆಳ್ತಂಗಡಿ ತಾಲೂಕಿನ ನಿಟ್ಟಡೆ ಗ್ರಾಮದ ಕುಂಭ ಶ್ರೀ ಶಾಲೆಯ ಮುಂಭಾಗದಲ್ಲಿ ಬೊಲೆರೊ ವಾಹನನ್ನು ತಡೆದು ನಿಲ್ಲಿಸಿ, ತಪಾಸಣೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ವಾಹನದಲ್ಲಿ ಗೂಬೆ ಪತ್ತೆಯಾಗಿದೆ.
ಗೂಬೆ ಸಾಗಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರಿನ ಬಜಪೆಯ ಪೆರ್ಮುದೆಯ ಜೋಸೆಫ್ ಸುನಿಲ್ ರೊಡ್ರಿಗಸ್ (37), ಉತ್ತರ ಕನ್ನಡ ಜಿಲ್ಲೆಯ ಕೃಷ್ಣಮೂರ್ತಿ ಧರ್ಮಬೋವಿ (25), ಉಡುಪಿ ಜಿಲ್ಲೆ ಅಂಬಲಪಾಡಿಯ ಪ್ರಶಾಂತ್ (34) ಎಂಬುವರನ್ನು ಬಂಧಿಸಲಾಗಿದೆ.
ಅಕ್ರಮವಾಗಿ ಸಾಗಿಸುತ್ತಿದ್ದ ಗೂಬೆಯ ಮಾರುಕಟ್ಟೆ ಬೆಲೆ ಸುಮಾರು 2 ಲಕ್ಷ ರುಪಾಯಿ ಎಂದು ಅಂದಾಜಿಸಲಾಗಿದೆ. ಗೂಬೆಯನ್ನು ವಶಕ್ಕೆ ಪಡೆದು, ಮುಂದಿನ ಕ್ರಮಕ್ಕಾಗಿ ವನ್ಯಜೀವಿ ವಿಭಾಗಕ್ಕೆ ಹಸ್ತಾಂತರಿಸಲಾಗಿದೆ. ಗೂಬೆಯನ್ನು ಯಾವ ಉದ್ದೇಶಕ್ಕೆ ಸಾಗಿಸಲಾಗುತ್ತಿತ್ತು ಎಂಬುದರ ಕುರಿತು ವಿಚಾರಣೆ ನಡೆಸಲಾಗುತ್ತಿದೆ.
ಬೆಳಗಾವಿಯಲ್ಲಿ ಗೂಬೆಗೂ ಬಂತು ಕೇಡುಗಾಲ!