ಚಿತ್ರಗಳು : ನೇತ್ರಾವತಿ ಉಳಿಸಲು ಬೃಹತ್ ಪ್ರತಿಭಟನೆ
ಮಂಗಳೂರು, ಸೆಪ್ಟೆಂಬರ್, 15 : ನೇತ್ರಾವತಿ ಉಳಿಸಿ, ಎತ್ತಿನ ಹೊಳೆ ಯೋಜನೆಯನ್ನು ಜಾರಿಗೊಳಿಸಬೇಡಿ ಎಂದು ಒತ್ತಾಯಿಸಿ ಉಪ್ಪಿನಂಗಡಿಯಲ್ಲಿ ಬೃಹತ್ ಪ್ರತಿಭಟನೆ ನೆಡೆಯುತ್ತಿದೆ. ಬೆಂಗಳೂರು-ಮಂಗಳೂರು ಹೆದ್ದಾರಿಯನ್ನು ಸಂಪೂರ್ಣವಾಗಿ ಬಂದ್ ಮಾಡಿ ಪ್ರತಿಭಟನೆ ನಡೆಸಲಾಗುತ್ತಿದೆ.
ಸಂಸದ ನಳಿನ್ ಕುಮಾರ್ ಕಟೀಲ್, ಒಡಿಯೂರು, ವಜ್ರದೇಹಿ ಶ್ರೀಗಳು, ಶ್ರೀಧಾಮ ಮಾಣಿಲ ಶ್ರೀಗಳು ಹೆದ್ದಾರಿಯಲ್ಲಿ ಕುಳಿತುಕೊಂಡು ಪ್ರತಿಭಟನಾಕಾರರಿಗೆ ಬೆಂಬಲ ನೀಡಿದ್ದಾರೆ. ನೂರಾರು ಜನರು ಹೆದ್ದಾರಿ ತಡೆಯಲ್ಲಿ ಭಾಗವಹಿಸಿದ್ದು, ನಂತರ ಜೈಲು ಭರೋ ಚಳವಳಿ ನಡೆಸಲಿದ್ದಾರೆ. [ಎತ್ತಿನಹೊಳೆ ಕುಡಿಯುವ ನೀರಿಗಾಗಿ ಮಾತ್ರ]
ಮಂಗಳೂರು-ಬೆಂಗಳೂರು ಹೆದ್ದಾರಿಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದ್ದು ಪ್ರತಿಭಟನಾಕಾರರು ಎತ್ತಿನಹೊಳೆ ಯೋಜನೆಯನ್ನು ಸರ್ಕಾರ ಕೈಬಿಡಬೇಕೆಂದು ಘೋಷಣೆಗಳನ್ನು ಕೂಗುತ್ತಿದ್ದಾರೆ. ಹಲವಾರು ಸಂಘಟನೆಗಳು ಈ ಪ್ರತಿಭಟನೆಗೆ ಕೈ ಜೋಡಿಸಿವೆ.
ಅತ್ತ ನವದೆಹಲಿಯಲ್ಲಿ ಮಾತನಾಡಿರುವ ಜಲ ಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ ಅವರು, 'ಎತ್ತಿನಹೊಳೆ ಯೋಜನೆಯಿಂದ 24 ಟಿಎಂಸಿ ನೀರು ಲಭ್ಯವಾಗಲಿದೆ. ಹೀಗಾಗಿ ಈ ಯೋಜನೆ ವಿಫಲವಾಗುವುದಿಲ್ಲ' ಎಂದು ಹೇಳಿದ್ದಾರೆ.
ಏನಿದು ಎತ್ತಿನಹೊಳೆ ಯೋಜನೆ
ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಬೆಂಗಳೂರು ಗ್ರಾಮಾಂತರ, ರಾಮನಗರ ಜಿಲ್ಲೆಗಳಿಗೆ 24 ಟಿಎಂಸಿ ಕುಡಿಯುವ ನೀರು ಒದಗಿಸುವ ಯೋಜನೆ ಇದಾಗಿದೆ. 2014ರ ಮಾರ್ಚ್ 3ರಂದು ಈ ಯೋಜನೆಗೆ ಶಂಕುಸ್ಥಾಪನೆ ಮಾಡಲಾಗಿದೆ. ನೇತ್ರಾವತಿ ನದಿಯ ಉಪ ನದಿಯಾದ ಎತ್ತಿನಹೊಳೆಯ ನೀರನ್ನು ಈ ಯೋಜನೆ ಮೂಲಕ ಬರ ಪೀಡಿತ ಜಿಲ್ಲೆಗಳಲ್ಲಿ ಒದಗಿಸಲಾಗುತ್ತದೆ. ಆದರೆ, ಈ ಯೋಜನೆ ಜಾರಿಯಾದರೆ ನೇತ್ರಾವತಿ ಬತ್ತಿಹೋಗುತ್ತದೆ. ಆದ್ದರಿಂದ ಯೋಜನೆ ಕೈಬಿಡಬೇಕು ಎಂದು ದಕ್ಷಿಣ ಕನ್ನಡದಲ್ಲಿ ಪ್ರತಿಭಟನೆ ನಡೆಯುತ್ತಿದೆ.
ಇಂದು ಹೆದ್ದಾರಿ ಬಂದ್
ಎತ್ತಿನ ಹೊಳೆ ಯೋಜನೆ ವಿರುದ್ಧ ಹಲವಾರು ಬಾರಿ ಪ್ರತಿಭಟನೆಗಳು ನಡೆದಿವೆ. ದಕ್ಷಿಣ ಕನ್ನಡ ಬಂದ್ ಸಹ ಮಾಡಲಾಗಿದೆ. ಇಂದು ನೇತ್ರಾವತಿ ನದಿ ತಿರುವು ಯೋಜನೆ ವಿರೋಧಿ ಹೋರಾಟ ಸಮಿತಿ ಉಪ್ಪಿನಂಗಡಿ ಬಳಿ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಬಂದ್ ಮತ್ತು ಜೈಲ್ ಭರೋ ಚಳವಳಿ ಹಮ್ಮಿಕೊಂಡಿದೆ.
ಅನೇಕ ಸಂಘಟನೆಗಳ ಬೆಂಬಲ
ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್, ಒಡಿಯೂರು, ವಜ್ರದೇಹಿ ಶ್ರೀಗಳು, ಶ್ರೀಧಾಮ ಮಾಣಿಲ ಶ್ರೀಗಳು ಹೆದ್ದಾರಿಯಲ್ಲಿ ಕುಳಿತುಕೊಂಡು ಪ್ರತಿಭಟನಾಕಾರರಿಗೆ ಬೆಂಬಲ ನೀಡಿದ್ದಾರೆ. ನೂರಾರು ಜನರು ಹೆದ್ದಾರಿ ತಡೆಯಲ್ಲಿ ಭಾಗವಹಿಸಿದ್ದು, ನಂತರ ಜೈಲು ಭರೋ ಚಳವಳಿ ನಡೆಸಲಿದ್ದಾರೆ.
ಪ್ರತಿಭಟನೆಯಿಂದ ಹೆದ್ದಾರಿ ಬಂದ್
ಜನರ ಪ್ರತಿಭಟನೆಯಿಂದಾಗಿ ಬೆಂಗಳೂರು-ಮಂಗಳೂರು ಹೆದ್ದಾರಿ ಸಂಪೂರ್ಣವಾಗಿ ಬಂದ್ ಆಗಿದೆ. ನೂರಾರು ಸಂಖ್ಯೆಯಲ್ಲಿ ಜನರು ರಸ್ತೆಯಲ್ಲಿ ಕುಳಿತು ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದಾರೆ. ಎತ್ತಿನಹೊಳೆ ಯೋಜನೆಯನ್ನು ಸ್ಥಗಿತಗೊಳಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ.
ಪೂಜಾರಿ ವಿರುದ್ಧ ಮೊಯ್ಲಿ ಕಿಡಿ
ಎತ್ತಿನ ಹೊಳೆ ಯೋಜನೆಯನ್ನು ವಿರೋಧಿಸುತ್ತಿರುವ ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ ಅವರ ವಿರುದ್ಧ ಚಿಕ್ಕಬಳ್ಳಾಪುರ ಸಂಸದ ವೀರಪ್ಪ ಮೊಯ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ಮಾತನಾಡಿದ ಅವರು, 'ಯೋಜನೆ ವಿರೋಧಿಸುವ ಹಿಂದೆ ಸ್ವಾರ್ಥ, ಸೇಡಿನ ಕಾರಣವಿದೆ. ಈ ಭಾಗದ ಜನರು ಕುಡಿಯಲು ನೀರಿಲ್ಲದೆ ಪರದಾಡುತ್ತಿದ್ದಾರೆ. ಅತ್ತ ಸಮುದ್ರದ ನೀರಿಗಾಗಿ ಹೋರಾಟ ನಡೆಯುತ್ತಿದೆ' ಎಂದು ಹೇಳಿದ್ದಾರೆ.