ಚೀನಾ ಪಟಾಕಿಗೆ ಬಹಿಷ್ಕಾರ ಹಾಕಿ ದೀಪಾವಳಿ ಆಚರಿಸಿದ ಮಂಗಳೂರಿಗರು
ಮಂಗಳೂರು, ಅಕ್ಟೋಬರ್ 19: ಭಾರತ ಹಾಗೂ ಚೀನಾ ನಡುವಿನ ಮುಸುಕಿನ ಗುದ್ದಾಟ ಮಾರುಕಟ್ಟೆಯಲ್ಲೂ ಕಂಡು ಬರುತ್ತಿದೆ. ದೇಶದ ಆರ್ಥಿಕತೆಗೆ ಮಾರಕವಾಗಿರುವ ಚೀನಾ ವಸ್ತುಗಳನ್ನು ಬಹಿಷ್ಕರಿಸಬೇಕೆಂಬ ಅಭಿಯಾನದ ಮಧ್ಯೆಯೂ ಮಾರುಕಟ್ಟೆಯಲ್ಲಿ ಮಾತ್ರ ಡ್ರ್ಯಾಗನ್ ದೇಶದ ವಸ್ತುಗಳೇ ಕಾಣಸಿಗುತ್ತಿದೆ. ಆದರೆ ಮಂಗಳೂರಿನಲ್ಲಿ ಹಾಗಿಲ್ಲ.
ಬೆಂಗಳೂರಿನ ಪಟಾಕಿ ವ್ಯಾಪಾರಿಗಳ ಬಿಸಿನೆಸ್ ಟುಸ್!
ಮಂಗಳೂರಿಗರು ಈ ಬಾರಿಯ ದೀಪಾವಳಿಗೆ ಚೀನಾ ವಸ್ತುಗಳನ್ನು ಬಹಿಷ್ಕರಿಸಿದ್ದಾರೆ. ಒಂದೆಡೆ ಸ್ವದೇಶಿ ನಿರ್ಮಿತ ಗೂಡು ದೀಪ. ಇನ್ನೊಂದೆಡೆ ಮೇಡ್ ಇನ್ ಇಂಡಿಯಾ ಮುದ್ರೆಯ ಪಟಾಕಿಗಳು.. ಇದು ಮಂಗಳೂರಿನಲ್ಲಿ ಎಲ್ಲೆಡೆ ಕಂಡು ಬರುತ್ತಿರುವ ದೃಶ್ಯ.
ದೀಪಾವಳಿಯಲ್ಲಿ ಪಟಾಕಿ ಸಿಡಿಸುವವರು ಎಚ್ಚರವಾಗಿರಿ!
ಕರಾವಳಿಗರ ಅಭಿರುಚಿಗೆ ತಕ್ಕಂತೆ ಚೀನಾ ಉತ್ಪನ್ನಗಳ ಬದಲಾಗಿ ಸ್ವದೇಶಿ ವಸ್ತುಗಳೇ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಈ ಉತ್ಪನ್ನಗಳನ್ನೇ ಕೊಂಡು ಭಾರತದ ಜತೆ ಗಡಿ ತಕರಾರು ತೆಗೆಯುವ ಡ್ರ್ಯಾಗನ್ ಗಳಿಗೆ ತಕ್ಕಪಾಠ ಕಲಿಸಲು ಮಂಗಳೂರಿಗರು ಪಣತೊಟ್ಟಂತಿದೆ.
ಸೂಲಿಬೆಲೆ ಗೂಡುದೀಪಗಳಿಗೆ ಬೇಡಿಕೆ
ಚಿಂತಕ ಚಕ್ರವರ್ತಿ ಸೂಲಿಬೆಲೆಯವರ ಮಾರ್ಗದರ್ಶನದಂತೆ ಬೆಂಗಳೂರಿನ ಆಯೋಜಕ ಟ್ರಸ್ಟ್ ವಿಶೇಷ ಮಕ್ಕಳಿಂದ ತಯಾರಿಸಲ್ಪಟ್ಟ ಸ್ವದೇಶಿ ಗೂಡು ದೀಪಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ವ್ಯಕ್ತವಾಗಿದೆ.
ಗೂಡು ದೀಪದ ಬೆಲೆ ರೂ. 300
ಚನ್ನಪಟ್ಟಣದ ಕಟ್ಟಿಗೆ ಉಪಯೋಗಿಸಿ ಆಕಾಶ ಬುಟ್ಟಿಗಳನ್ನು ತಯಾರು ಮಾಡಲಾಗಿದ್ದು 300ರೂಪಾಯಿ ಬೆಲೆ ನಿಗದಿಪಡಿಸಲಾಗಿದೆ. ಅಲ್ಲದೆ ಗೂಡುದೀಪ ಮೊತ್ತದ 25% ರಷ್ಟು ಹಣವನ್ನು ಸೈನಿಕರ ಅಭಿವೃದ್ಧಿಗೆ ವಿನಿಯೋಗಿಸಲಾಗುತ್ತಿದೆ. ಮಾರುಕಟ್ಟೆ ಗೆ ಬಂದ ಒಂದೇ ದಿನದಲ್ಲಿ ಎಲ್ಲಾ ಗೂಡುದೀಪಗಳು ಖಾಲಿಯಾಗುತ್ತಿದ್ದು ಸಾರ್ವಜನಿಕರಿಂದ ಭರ್ಜರಿ ಬೇಡಿಕೆ ವ್ಯಕ್ತವಾಗಿದೆ.
ಭಾರತೀಯ ಪಟಾಕಿಗಳು ಮಾತ್ರ ಮಾರಾಟ
ಇನ್ನು ಕೇವಲ ಗೂಡುದೀಪಗಳಲ್ಲಿ ಮಾತ್ರವಲ್ಲದೆ ಪಟಾಕಿ ಮಾರಾಟದಲ್ಲೂ ಚೀನಾ ವಸ್ತುಗಳ ಬಹಿಷ್ಕರಿಸುವ ಅಭಿಯಾನ ಆರಂಭವಾಗಿದೆ. ಮಂಗಳೂರಿನ ಪಟಾಕಿ ಮಾರಾಟ ಮಾಲಕರ ಸಂಘ ಚೀನಾ ಪಟಾಕಿಗಳನ್ನು ಬಹಿಷ್ಕರಿಸಿದ್ದು ಕೇವಲ ಮೇಡ್ ಇನ್ ಇಂಡಿಯಾದ ಪಟಾಕಿಗಳನ್ನು ಮಾತ್ರ ಮಾರಾಟ ಮಾಡಲು ತೀರ್ಮಾನಿಸಿದ್ದಾರೆ.
ಜನರಿಂದಲೂ ಉತ್ತಮ ಪ್ರತಿಕ್ರಿಯೆ
ಚೀನಾ ಪಟಾಕಿಗಳು ಆರೋಗ್ಯಕ್ಕೂ ಹಾನಿಕಾರಕ ವಾಗಿದ್ದು, ಸ್ವದೇಶಿ ನಿರ್ಮಿತ ಪಟಾಕಿಗಳಿಗೆ ಜನರೂ ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ ಎನ್ನುವುದು ಪಟಾಕಿ ಮಾರಾಟಗಾರರ ಅಭಿಪ್ರಾಯವಾಗಿದೆ.
'ಚೀನಾ ಮಾಲ್ ಹಠಾವೋ ದೇಶ್ ಬಚಾವೋ'
ಒಟ್ಟಿನಲ್ಲಿ ದೇಶದ ಗಡಿ ಮತ್ತು ಆರ್ಥಿಕತೆಗೆ ಮಾರಕವಾಗಿರುವ ಚೀನಾ ದೇಶದ ವಸ್ತುಗಳನ್ನು ಬಹಿಷ್ಕರಿಸುವ ಅಭಿಯಾನಕ್ಕೆ ಮಂಗಳೂರಿನಲ್ಲಿ ಭಾರೀ ಜನಬೆಂಬಲ ವ್ಯಕ್ತವಾಗಿದೆ. 'ಚೀನಾ ಮಾಲ್ ಹಠಾವೋ ದೇಶ್ ಬಚಾವೋ' ಅಂದೋಲನಕ್ಕೆ ದೇಶವಾಸಿಗಳು ನೀಡುತ್ತಿರುವ ಬೆಂಬಲ ಚೀನಾ ದೇಶಕ್ಕೆ ಒಂದಷ್ಟು ನಡುಕ ನಷ್ಟ ಉಂಟು ಮಾಡಿರೋದಂತೂ ಸತ್ಯ.