'ಹುಬ್ಳಿ ಹುಡ್ಗ'ನ ಢಿಪರೆಂಟ್ ಮದುವೆ ಆಮಂತ್ರಣ ನೋಡಿದ್ದೀರಾ?
ಮಂಗಳೂರು, ಜನವರಿ 24: ಈಗಿನ ಪೀಳಿಗೆಯೇ ಹಾಗೆ ಎಲ್ಲದರಲ್ಲೂ ಫಾಸ್ಟ್. ಹಾಗಾಗಿ ಮದುವೆ ಫಿಕ್ಸ್ ಆದರೆ ಸಾಕು ಸಂಬಂಧಿಕರಿಗೆ ಹಾಗು ಸ್ನೇಹಿತರಿಗೆ ಆಮಂತ್ರಣ ಪತ್ರಿಕೆಯನ್ನು ವಾಟ್ಸಾಪ್ , ಫೇಸ್ಬುಕ್ , ಈ-ಮೇಲ್ ಹಾಗು ಎಸ್ಎಂಎಸ್ ಮೂಲಕವೇ ಕಳುಹಿಸುತ್ತಾರೆ. ಇದರ ಮಧ್ಯೆ ಮಂಗಳೂರಿನ ಪ್ರತಿಷ್ಠಿತ ಸಿನೆಮಾ ರಂಗದ ಕಲಾವಿದ ಶೋಭರಾಜ್ ಪಾವೂರ್ ಮಾತ್ರ ನವ ವಿನ್ಯಾಸದ ಹಾಗೂ ಮನೆಮಾತಾಗುವಂತಹ ಆಮಂತ್ರಣ ಪತ್ರಿಕೆಯೊಂದನ್ನು ಸಿದ್ದಪಡಿಸಿದ್ದಾರೆ.[ನೂರು ಬಗೆ ಖಾದ್ಯ, 20 ಸಾವಿರ ಅತಿಥಿಗಳು: ಕೇರಳದಲ್ಲಿ ಮದುವೆ ವೈಭೋಗ]
ಸಾಮಾನ್ಯವಾಗಿ ಸಾಂಪ್ರದಾಯಿಕ ಮದುವೆ ಆಮಂತ್ರಣ ಪತ್ರಿಕೆಗಳನ್ನು ನೀವು ನೋಡಿರಬಹುದು. ಆದರೆ ಇಲ್ಲಿದೆ ವಿಭಿನ್ನ ಆಮಂತ್ರಣ ಪತ್ರಿಕೆ . ಯಾರದಪ್ಪಾ ಈ ಆಮಂತ್ರಣ ಪತ್ರಿಕೆ ಎಂದು ನೀವು ಯೋಚಿಸಿರಬಹುದು. ಅವರು ಮತ್ಯಾರೂ ಅಲ್ಲ ಕರಾವಳಿ ಕರ್ನಾಟಕದ ಅತ್ಯಂತ ಸೃಜನಶೀಲ ಪ್ರತಿಭೆಗಳಲ್ಲಿ ಒಬ್ಬರಾದ ಶೋಭರಾಜ್ ಪಾವೂರ್.[ಮದುವೆ ಪ್ರಮಾಣ ಪತ್ರ ಪಡೆಯುವುದು ಹೇಗೆ? ಏಕೆ?]
ದೊಡ್ಡ ಪರದೆಗೆ 'ಹುಬ್ಳಿ ಹುಡುಗ’
ಪ್ರಸ್ತುತವಾಗಿ ಶೋಭರಾಜ್ ಕಲರ್ಸ್ ಸೂಪರ್ ಚಾನೆಲ್ ನಲ್ಲಿ ಮೂಡಿಬರುತ್ತಿರುವ 'ಮಂಗ್ಳೂರ್ ಹುಡ್ಗಿ ಹುಬ್ಳಿ ಹುಡ್ಗ' ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ಮುಂಬರುವ ತುಳು ಚಿತ್ರ 'ಏಸ' ದಲ್ಲಿ ಸಹಾಯಕ ನಿರ್ದೇಶಕ ಮತ್ತು ಚಿತ್ರಕಥೆ ಬರೆಯುತ್ತಿದ್ದಾರೆ. ಮೊದಲು ಒಂಭತ್ತು ವರ್ಷಗಳ ಕಾಲ ರಂಗಭೂಮಿಯಲ್ಲಿ ತನ್ನದೇ ಆದ ಛಾಪು ಮೂಡಿಸಿದ ಇವರು ಇದೀಗ ದೊಡ್ಡ ಪರದೆಗೆ ಹೆಜ್ಜೆ ಇಟ್ಟಿದ್ದಾರೆ.
ಇದೇ ಜನವರಿ 25ಕ್ಕೆ ಸಪ್ತಪದಿ
ಶೋಭರಾಜ್ ಜನವರಿ 25ರಂದು ವಿವಾಹವಾಗಲಿದ್ದಾರೆ. ಹಳೇ ಕಾಲದ ಅಂಚೆ ಪತ್ರಿಕೆಯ ಮಾದರಿಯಲ್ಲಿ ಇವರ ಆಮಂತ್ರಣ ಪತ್ರಿಕೆ ಸಿದ್ದವಾಗಿದೆ. ಈ ಆಮಂತ್ರಣ ಪತ್ರಿಕೆಯನ್ನು ನೀವು ಓದಿದರೆ ನಿಮ್ಮ ಮುಖದಲ್ಲಿ ನಗು ಬರುವುದಂತೂ ಸಹಜ. ಮದುವೆಗೆ ಜನರನ್ನು ಆಮಂತ್ರಿತರಾಗಲು ಪತ್ರ ಬರೆದಿರುವ ಶೋಭರಾಜ್ ಅವರ ಈ ಆಮಂತ್ರಣ ಪತ್ರಿಕೆ ಹೀಗಿದೆ.
ಇಂತಹ ಮದುವೆ ಆಮಂತ್ರಣ ನೋಡಿದ್ದೀರಾ?
ಆಮಂತ್ರಣ ಪತ್ರಿಕೆ ಮೇಲೆ ಶೋಭರಾಜ್ ಹೀಗೆ ಬರೆದಿದ್ದಾರೆ, '' ನಾನು ಮೇಲಾಗಿ ತಿಳಿಸುವುದೇನೆಂದರೆ ನಾನು ಕ್ಷೇಮ .ಅದೇ ರೀತಿ ನೀವು ಕ್ಷೇಮವೆಂದು ನಂಬಿರುತ್ತೇನೆ. ನನ್ನ ಕ್ಷೇಮಕ್ಕೆ ಕಾರಣವೇನೆಂದರೆ ಕಂಡಾಬಟ್ಟೆ ಖುಷಿ. ವಿಷಯ ಇಷ್ಟೇ ಮನಸ್ಸಿಗೆ ಹಿಡಿಸಿದ ಹುಡುಗಿ ದೀಪಿಕಾಳನ್ನು ಕೈ ಹಿಡಿದು ಮನೆ ತುಂಬಿಸಿಕೊಳ್ಳಲು ಗುರುಹಿರಿಯರು ಒಪ್ಪಿಗೆ ನೀಡಿರುತ್ತಾರೆ. ಮದುವೆಗೆ ವಾರದ ನಡುವಿನಲ್ಲಿ ಪುರುಸೊತ್ತು ಇಲ್ಲದಿದ್ದರೂ ಒಂದು ದಿನದ ಕೆಲಸ ಹೋಗ್ತದೆ ಎನ್ನುವ ದುಖಃವನ್ನು ಬದಿಗಿರಿಸಿ ನೀವು ನಿಮ್ಮವರನ್ನೆಲ್ಲಾ ಕರೆದುಕೊಂಡು ಬಂದು ಹಾರೈಸಿ'' ಎನ್ನುವುದಾಗಿ ವಿಭಿನ್ನ ರೀತಿಯಲ್ಲಿ ತನ್ನ ಆಮಂತ್ರಣ ಪತ್ರಿಕೆಯಲ್ಲಿ ಆಹ್ವಾನಿಸಿದ್ದಾರೆ.
ಹಳೆ ನೋಟೂ ಇಲ್ಲ, ಹೊಸದೂ ಇಲ್ಲ
ಇದಲ್ಲದೆ ವಿಶೇಷ ಸೂಚನೆಯಾಗಿ ಹಳೆಯ ನೋಟುಗಳನ್ನು ಮಾತ್ರವಲ್ಲ ಹೊಸ ನೋಟುಗಳನ್ನೂ ಸ್ವೀಕರಿಸುವುದಿಲ್ಲ ಎಂದುದಾಗಿ ನಮೂದಿಸಿದ್ದಾರೆ. ಇಂತಹ ವಿಭಿನ್ನ ರೀತಿಯ ಆಮಂತ್ರಣ ಪತ್ರಿಕೆ ನೀವು ನೋಡಿರಲಿಕ್ಕಿಲ್ಲ. ಇದು ಸ್ವತಃ ಶೋಭರಾಜ್ ಅವರ ಸೃಜನಶೀಲತೆಯನ್ನು ಪ್ರತಿಬಿಂಬಿಸುತ್ತದೆ.