ಹವಾಮಾನ ವೈಪರೀತ್ಯದಿಂದ ಸುರಿದ ಮಳೆ ಜಲಕ್ಷಾಮ ತಪ್ಪಿಸಿತು!
ಮಂಗಳೂರು, ಮೇ 18 : ಹವಾಮಾನ ವೈಪರಿತ್ಯದಿಂದಾಗಿ ಸುರಿದ ಮಳೆ ಈ ಬಾರಿ ಮಂಗಳೂರು ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಇಲ್ಲದಂತೆ ಮಾಡಿದೆ. ಕಳೆದ ಕೆಲವು ದಿನಗಳಿಂದ ಸುರಿದ ಉತ್ತಮ ಮಳೆಯಿಂದಾಗಿ ಈ ಬಾರಿ ನಗರದ ನಾಗರಿಕರು ನಿರಾಳರಾಗಿದ್ದಾರೆ.
ಮಳೆಯಿಂದಾಗಿ ನೇತ್ರಾವತಿ ನದಿಯಲ್ಲಿ ನೀರಿನ ಹರಿವು ಆರಂಭವಾಗಿದ್ದು, ಪ್ರತಿ ಬಾರಿ ಉದ್ಭವಿಸುತ್ತಿದ್ದ ಕುಡಿಯುವ ನೀರಿನ ಸಮಸ್ಯೆ ಈ ವರ್ಷ ಇಲ್ಲವಾಗಿದೆ. 2016ರಲ್ಲಿ ತುಂಬೆ ಅಣೆಕಟ್ಟೆಯಲ್ಲಿ ನೀರಿನ ಪ್ರಮಾಣ ಗಣನೀಯ ಇಳಿಕೆಯಾದ ಪರಿಣಾಮ ಖಾಸಗಿ ನೀರು ಪೂರೈಕೆಯ ಎಲ್ಲ ಟ್ಯಾಂಕರ್ ಗಳನ್ನು ಪಾಲಿಕೆಯೇ ವಶಕ್ಕೆ ಪಡೆದು ಜನರಿಗೆ ನೀರು ಪೂರೈಸಿತ್ತು.
ಮಂಗಳವಾರದೊಳಗೆ ಬಿಡಲೇ ಬೇಕು 2 ಟಿಎಂಸಿ ಅಡಿ ನೀರು: ಸುಪ್ರಿಂ
ಪಾಲಿಕೆಯೇ ನೀರು ಪೂರೈಸಿತ್ತು
ಆದರೆ 2017ರಲ್ಲಿ ನೀರಿನ ಸಮಸ್ಯೆ ಕಂಡುಬಂದ ಪ್ರದೇಶಕ್ಕೆ ಪಾಲಿಕೆಯು 2- 3 ದಿನಕ್ಕೊಮ್ಮೆ ನೀರು ಪೂರೈಸಿ ಪರಿಸ್ಥಿತಿಯನ್ನು ನಿಭಾಯಿಸಿತ್ತು. ಆದರೆ ಈ ಬಾರಿ ಈ ಸಮಸ್ಯೆಗಳಿಗೆ ಮುಕ್ತಿ ಸಿಕ್ಕಿದೆ. ಹವಾಮಾನ ವೈಪರಿತ್ಯದಿಂದಾಗಿ ಸುರಿದ ಮಳೆ ನೀರಿನ ಸಮಸ್ಯೆ ಉಂಟಾಗದಂತೆ ಮಾಡಿದೆ.
ಮಂಗಳೂರಿಗೆ ನೀರು ಪೂರೈಕೆ ಮಾಡಲಾಗುತ್ತಿರುವ ತುಂಬೆ ಕಿಂಡಿ ಅಣೆಕಟ್ಟೆಯಲ್ಲಿ ಬೇಸಿಗೆಯಲ್ಲಿ ಸಾಮಾನ್ಯವಾಗಿ ನಿತ್ಯ ಸುಮಾರು 3 ರಿಂದ 5 ಸೆಂ.ಮೀ. ನೀರು ಕಡಿಮೆಯಾಗುತ್ತಾ ಹೋಗುತ್ತದೆ.
ಎಆರ್ ಎಂ ಡ್ಯಾಂನಲ್ಲಿ ಎಷ್ಟಿದೆ ನೀರು?
ಇದೀಗ ಹವಾಮಾನ ವೈಪರೀತ್ಯದಿಂದ ತುಂಬೆ ಡ್ಯಾಂನ ಮೇಲ್ಭಾಗದಲ್ಲಿರುವ ಶಂಭೂರು ಎಆರ್ ಎಂ ಡ್ಯಾಂನಲ್ಲಿ ಪೂರ್ಣ ಪ್ರಮಾಣದಲ್ಲಿ 5 ಮೀಟರ್ ನೀರು ಸಂಗ್ರಹವಿದೆ. ಕಳೆದ ವರ್ಷ 5 ಮೀಟರ್ ಎತ್ತರಕ್ಕೆ ನೀರು ಸಂಗ್ರಹಿಸಲಾಗಿತ್ತು.
ಅಲ್ಲದೇ ನೀರಿನ ಅಭಾವ ಕಂಡು ಬರುವ ಸಾಧ್ಯತೆ ಇದ್ದದರಿಂದ ನೀರಿನ ರೇಷನಿಂಗ್ ನ್ನು ಮಾಡಲಾಗಿತ್ತು. ದಿನ ಬಿಟ್ಟು ದಿನ ನೀರನ್ನು ಬೀಡುವ ಕಾರ್ಯವನ್ನು ಕಳೆದ ವರ್ಷ ಕೈಗೊಳ್ಳಲಾಗಿತ್ತು.
ಈ ಹಿನ್ನಲೆಯಲ್ಲಿ ತುಂಬೆ ಕಿಂಡಿ ಅಣೆಕಟ್ಟಿನಲ್ಲಿ ಈ ಬಾರಿ 6 ಮೀಟರ್ ನಷ್ಟು ನೀರನ್ನು ಸಲ್ಲಿಸಲಾಗುತ್ತಿದೆ. ಸದ್ಯಕ್ಕೆ ಒಟ್ಟು ಸಂಗ್ರಹಣೆ ಮಾಡಿರುವ ನೀರಿನ ಮಟ್ಟದಲ್ಲಿ 10 ಸೆಂ.ಮೀ. ಮಾತ್ರ ಕಡಿಮೆಯಾಗಿದೆ. ಇದರ ಆಧಾರದಲ್ಲಿ ಮಂಗಳೂರು ನಗರಕ್ಕೆ ಕನಿಷ್ಠ 50 ದಿನಗಳವರೆಗೆ ಕುಡಿಯುವ ನೀರು ಪೂರೈಕೆ ಮಾಡಬಹುದಾಗಿದೆ.
ಏಪ್ರಿಲ್ ನಲ್ಲಿ ಮಳೆ
ಜೂನ್ 20ರವರೆಗೆ ನೀರು ಅಬಾಧಿತವಾಗಿ ನೀರು ಪೂರೈಕೆ ಮಾಡಬಹುದಾಗಿದೆ. ಈ ಬಾರಿ ಏಪ್ರಿಲ್ನಲ್ಲಿ ನೇತ್ರಾವತಿ ನದಿ ಜಲಾನಯನ ಪ್ರದೇಶದಲ್ಲಿ ಮಳೆಯಾಗುತ್ತಿರುವುದು ನೀರಿನ ಸಮಸ್ಯೆ ನೀಗಿಸುವಲ್ಲಿ ಸಹಕಾರಿಯಾಗಿದೆ. ನೇತ್ರಾವತಿ ನದಿಯಲ್ಲಿ ಕ್ಷೀಣಗೊಂಡಿದ್ದ ಒಳಹರಿವು ಹೆಚ್ಚಳವಾಗಿದ್ದು, ಎಆಂಆರ್ ಡ್ಯಾಂಗೆ ಈ ವರೆಗೆ ಸುಮಾರು 20 ಸೆಂ.ಮೀ. ನೀರು ಹರಿದು ಬಂದಿದೆ.
ಮಳೆಯಾಗಿರುವುದರಿಂದ ನದಿ ಪಕ್ಕದಲ್ಲಿರುವ ಅಡಿಕೆ ತೋಟ ಸಹಿತ ಕೃಷಿಗೆ ನದಿ ನೀರಿನ ಬಳಕೆ ಕಡಿಮೆಯಾಗಿದೆ. ಇದು ತುಂಬೆ ಡ್ಯಾಂನಲ್ಲಿ ನೀರಿನ ಮಟ್ಟವನ್ನು ಕಾಯ್ದುಕೊಳ್ಳುವಲ್ಲಿ ಸಹಕಾರಿಯಾಗಿದೆ.
ಟ್ಯಾಂಕರ್ ಗೆ ಕುಗ್ಗಿತು ಬೇಡಿಕೆ
ನಗರದಲ್ಲಿ ನೀರಿನ ಅಭಾವ ಉಂಟಾದರೆ ಲಾಭ ಮಾಡಿಕೊಳ್ಳುವುದು ನೀರಿನ ಟ್ಯಾಂಕರ್ ಗಳ ಮಾಲೀಕರು. ಆದರೆ ಈ ಬಾರಿ ಅಕಾಲಿಕ ಮಳೆಯಿಂದಾಗಿ ಈ ಬಾರಿ ತುಂಬೆಯಲ್ಲಿ ನೀರಿನ ಸಂಗ್ರಹ ಉತ್ತಮವಾಗಿದ್ದು, ಬಹುತೇಕ ಕಡೆಗಳಲ್ಲಿ ನಿತ್ಯ ನೀರು ಪೂರೈಕೆ ಆಗುತ್ತಿದೆ. ಹೀಗಾಗಿ ಟ್ಯಾಂಕರ್ ನೀರಿನ ಬೇಡಿಕೆಯೂ ಈ ಬಾರಿ ಕುಗ್ಗಿದೆ.
ಸದ್ಯಕ್ಕೆ 3 ಸಾವಿರ ಲೀಟರ್ ಸಾಮರ್ಥ್ಯದ ಟ್ಯಾಂಕರ್ ನೀರಿಗೆ 500 ರೂಪಾಯಿ ಇದ್ದರೆ, 6 ಸಾವಿರ ಲೀಟರ್ಗೆ 900 ರೂಪಾಯಿ ಇದೆ.