ಉಳ್ಳಾಲದಲ್ಲಿ 'ಕೈ' ಪ್ರಾಬಲ್ಯ ಮುರಿದ ಎಸ್ ಡಿಪಿಐ: ಕಾಂಗ್ರೆಸ್-ಜೆಡಿಎಸ್ ಮೈತ್ರಿ?
ಮಂಗಳೂರು, ಸೆಪ್ಟೆಂಬರ್.04: ಉಳ್ಳಾಲ ನಗರಸಭೆ ಚುನಾವಣೆ ಫಲಿತಾಂಶ ಹೊರಬಿದ್ದಿದೆ. ಆಡಳಿತಾರೂಢ ಕಾಂಗ್ರೆಸ್ ಸ್ಪಷ್ಟ ಬಹುಮತ ದಾಖಲಿಸುವಲ್ಲಿ ಎಡವಿ ಬಿದ್ದಿದ್ದು, ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯುಟಿ ಖಾದರ್ ಅವರು ತಮ್ಮ ತವರು ಹಾಗೂ ಸ್ವ ಕ್ಷೇತ್ರದ ಪ್ರತಿಷ್ಠೆಯ ನಗರಸಭೆ ಚುನಾವಣೆಯಲ್ಲಿ ಹಿನ್ನಡೆ ಅನುಭವಿಸಿದ್ದಾರೆ.
ಆದರೆ ಅಧಿಕಾರದ ಗದ್ದುಗೆ ಹಿಡಿಯಲು ರಾಜ್ಯದ ಮೈತ್ರಿ ಸರಕಾರದಂತೆ ಇಲ್ಲಿಯೂ ಕಾಂಗ್ರೆಸ್ ಜೆಡಿಎಸ್ ಸದಸ್ಯರನ್ನು ಸೆಳೆಯಲು ಕಾರ್ಯಪ್ರವೃತ್ತರಾಗಿದ್ದಾರೆ.
ದಕ್ಷಿಣ ಕನ್ನಡದಲ್ಲಿ ಕಾಂಗ್ರೆಸ್ ಗೆ ಹೀನಾಯ ಪರಿಸ್ಥಿತಿ: ಖಾದರ್ ನೀಡಿದ ಕಾರಣವೇನು?
ಉಳ್ಳಾಲ ನಗರಸಭೆ ಚುನಾವಣೆಯಲ್ಲಿ ಎಸ್ ಡಿಪಿಐ 6 ಸ್ಥಾನಗಳನ್ನು ಗೆದ್ದು ಗಮನ ಸೆಳೆದಿದೆ. ಈ ಬಾರಿ ಜೆಡಿಎಸ್ ಉಳ್ಳಾಲದಲ್ಲಿ ಮೊದಲಬಾರಿಗೆ ಖಾತೆ ತೆರೆದಿದೆ. ಉಳ್ಳಾಲ ನಗರಸಭೆಯ 31 ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ 102 ಅಭ್ಯರ್ಥಿಗಳು ಸ್ಪರ್ಧಿಸಿದ್ದರು.
ಚುನಾವಣೆಯಲ್ಲಿ ಕಾಂಗ್ರೆಸ್ 13, ಎಸ್ ಡಿಪಿಐ 6, ಬಿಜೆಪಿ 6, ಜೆಡಿಎಸ್ 4 ಹಾಗು ಪಕ್ಷೇತರರು 2 ಸ್ಥಾನಗಳನ್ನು ಗೆದ್ದುಕೊಂಡಿದ್ದಾರೆ. ಸಿಪಿಎಂ ಈ ಬಾರಿ ಒಂದೇ ಒಂದು ಸ್ಥಾನ ಪಡೆಯಲು ವಿಫಲವಾಗಿದೆ.
ಜೆಡಿಎಸ್ ಇದೇ ಮೊದಲ ಬಾರಿಗೆ ಖಾತೆ ತೆರೆದಿದ್ದು, 4 ಸ್ಥಾನಗಳನ್ನು ಬಾಚಿಕೊಂಡಿದೆ. ಕಳೆದ ಬಾರಿ ಚುನಾವಣೆಯಲ್ಲಿ ಎಸ್ ಡಿಪಿಐ ಖಾತೆ ತೆರೆದಿದ್ದ ಸರೀನಾ ಬಾನು ಈ ಬಾರಿಯೂ ಗೆಲುವು ದಾಖಲಿಸಿದ್ದಾರೆ . ಅದಲ್ಲದೇ ಇನ್ನು 5 ಸ್ಥಾನಗಳನ್ನು ಎಸ್ ಡಿಪಿಐ ಬಾಚಿಕೊಂದಿದೆ.
ಪುತ್ತೂರು ನಗರಸಭೆ ಬಿಜೆಪಿ ತೆಕ್ಕೆಗೆ, ಖಾತೆ ತೆರೆದ ಎಸ್ ಡಿಪಿಐ
ಈ ಬಾರಿ ಪಕ್ಷೇತರರಾಗಿ ಕಣಕ್ಕಿಳಿದು ಜಯಗಳಿಸಿರುವ ಇಬ್ಬರೂ ಅಭ್ಯರ್ಥಿಗಳು ಕಾಂಗ್ರೆಸ್ ನ ಬಂಡಾಯ ಅಭ್ಯರ್ಥಿಗಳು ಎಂಬುದು ವಿಶೇಷ. ಈ ಬಾರಿಯ ಉಳ್ಳಾಲ ನಗರ ಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಎಸ್ ಡಿಪಿಐ ಹಾಗೂ ಜೆಡಿಎಸ್ ಭಾರೀ ಹೊಡೆತ ನೀಡಿದೆ.
ಉಳ್ಳಾಲ ಪುರಸಭೆ ಇದ್ದಾಗ 27 ವಾರ್ಡ್ ಗಳಿದ್ದವು. ಅದರಲ್ಲಿ ಕಾಂಗ್ರೆಸ್ 17, ಬಿಜೆಪಿ 7, ಎಸ್ ಡಿಪಿಐ 1, ಸಿಪಿಐಎಂ 1 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಆದರೆ ಈ ಬಾರಿ ಕಾಂಗ್ರೆಸ್ ಪ್ರಾಬಲ್ಯವನ್ನು ಎಸ್ ಡಿಪಿಐ ಹಾಗೂ ಜೆಡಿಎಸ್ ಮುರಿದಿದೆ. ಕಳೆದ ಬಾರಿ 7 ಸ್ಥಾನಗಳನ್ನು ಹೊಂದಿದ್ದ ಬಿಜೆಪಿ ಈ ಬಾರಿ ಒಂದು ಸ್ಥಾನ ಕಳೆದುಕೊಂಡಿದೆ.
ಬಿಜೆಪಿಯಿಂದ ಈ ಬಾರಿ ಸ್ಪರ್ಧೆ ನಡೆಸಿದ್ದ ಮಾಜಿ ಅಂತರಾಷ್ಟ್ರೀಯ ಪವರ್ ಲಿಫ್ಟರ್ ಗೀತಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. ಗೀತಾಬಾಯಿ ಅವರಿಗೆ ಟಿಕೆಟ್ ನೀಡಿದ್ದಾಗ ಬಿಜೆಪಿಯಲ್ಲಿ ಭಿನ್ನಾಭಿಪ್ರಾಯ ವ್ಯಕ್ತವಾಗಿತ್ತು. ಆದರೆ ಈ ಮಧ್ಯೆಯೂ ಕಾಂಗ್ರೆಸ್ ನ ಅಕ್ಷತಾ ವಿರುದ್ಧ ಗೀತಾಬಾಯಿ ಗೆಲುವು ಸಾಧಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಗೀತಾಬಾಯಿ ಕೆಲವರ ಅಸಮಾಧಾನದ ನಡುವೆಯು ಜನರು ನನ್ನನ್ನು ಕೈಬಿಟ್ಟಿಲ್ಲ. ಪಕ್ಷ ನನ್ನ ಮೇಲೆ ವಿಶ್ವಾಸವಿರಿಸಿದೆ. ವಾರ್ಡ್ನ ಜನರ ಅಭಿವೃದ್ದಿಗೆ ಶ್ರಮಿಸುತ್ತೇನೆ ಎಂದು ಹೇಳಿದರು.
ಸ್ಥಳೀಯ ಸಂಸ್ಥೆ ಚುನಾವಣೆ : ಯಾವ ಪಕ್ಷಕ್ಕೆ ಎಷ್ಟು ಸೀಟು?
ಹಾಗೆಯೇ ಉಳ್ಳಾಲದ ನಗರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹಿನ್ನಡೆಯಾಗಿರುವುದರಲ್ಲಿ ಪಕ್ಷದ ಕೆಲವು ನ್ಯೂನತೆ ಕಾರಣ ಇರಬಹುದು ಎಂದು ಸಚಿವ ಯು.ಟಿ ಖಾದರ್ ಆಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪಕ್ಷದ ಹಿನ್ನಡೆಯನ್ನು ಗಂಭೀರವಾಗಿ ಪರಿಗಣಿಸುತ್ತೇವೆ. ಉಳ್ಳಾಲದಲ್ಲಿ ನಾವು ನಿರೀಕ್ಷೆ ಮಾಡಿದಷ್ಟು ಸ್ಥಾನ ಲಭ್ಯವಾಗಿಲ್ಲ. ಹಾಗಂತ ಪಕ್ಷಕ್ಕೆ ಅಧಿಕಾರ ಇಲ್ಲದಿದ್ದರೂ, ಚಿಂತೆ ಇಲ್ಲ. ಪಕ್ಷದ ಸಿದ್ಧಾಂತ ಒಪ್ಪಿಕೊಳ್ಳದವರ ಜೊತೆ ಸೇರಿ ಅಧಿಕಾರ ನಡೆಸಲ್ಲ ಎಂದು ಹೇಳಿದರು.
ಉಳ್ಳಾಲ ನಗರಸಭೆಗೆ ಸಂಬಂಧಿಸಿದಂತೆ ಎಸ್ ಡಿಪಿಐ ಜೊತೆಯೂ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದ ಅವರು ಉಳ್ಳಾಲದಲ್ಲಿ ಜೆಡಿಎಸ್ ನೊಂದಿಗೆ ಮೈತ್ರಿ ಮಾಡಿಕೊಳ್ಳುವ ಸೂಚನೆ ನೀಡಿದ್ದಾರೆ.