ಬಂಟ್ವಾಳದಲ್ಲಿ ಮತ್ತೆ ಕಳ್ಳತನ, ಈ ಬಾರಿ ಕಳ್ಳರ ಟಾರ್ಗೆಟ್ ಅರಳ ದೇವಸ್ಥಾನ
ಮಂಗಳೂರು, ಸೆಪ್ಟೆಂಬರ್ 13: ಯಾಕೋ ಏನೋ ಗೊತ್ತಿಲ್ಲ ಬಂಟ್ವಾಳದ ದೇವಸ್ಥಾನಗಳಲ್ಲಿ ಕಳ್ಳತನ ದಿನೇ ದಿನೇ ಹೆಚ್ಚುತ್ತಾ ಹೋಗುತ್ತಿದೆ. ವಾರದ ಹಿಂದೆಯಷ್ಟೇ ಬಂಟ್ವಾಳ ಮತ್ತು ಬೆಳ್ತಂಗಡಿ ತಾಲೂಕಿನ ಗಡಿ ಭಾಗದಲ್ಲಿರುವ ಹೊಕ್ಕಾಡಿ ಗೋಳಿ ಸಮೀಪದ ಪುಂಜ ಶ್ರೀ ಪಂಚ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಕಳ್ಳರು ನುಗ್ಗಿ ಎರಡು ಸಿಸಿ ಕ್ಯಾಮೆರಾ ಎಗರಿಸಿ ಪರಾರಿಯಾಗಿದ್ದರು.
ಎರಡು ದಿನಗಳ ಹಿಂದೆ ಕಡೇಶ್ವಾಲ್ಯ ದೇವಾಲಯದಲ್ಲಿ ಕಳ್ಳರು ಲಗ್ಗೆ ಹಾಕಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ನಗದು ಕಳವುಗೈದ ಪ್ರಕರಣ ನಡೆದಿತ್ತು. ಇದೀಗ ಇಂದು ಬಂಟ್ವಾಳದ ಅರಳ ಶ್ರೀ ಗರುಡ ಮಹಾಕಾಳಿ ದೇವಾಲಯದಲ್ಲಿ ಕಳ್ಳತನ ನಡೆದಿದೆ.
ಅರಳ ಶ್ರೀ ಗರುಡ ಮಹಾಕಾಳಿ ದೇವಸ್ಥಾನಕ್ಕೆ ನುಗ್ಗಿದ ಕಳ್ಳರು ಕೆಲವು ಸ್ವತ್ತುಗಳನ್ನು ದೋಚಿ ಪರಾರಿಯಾಗಿದ್ದಾರೆ. ಇದೀಗ ಸುದ್ಧಿ ತಿಳಿದ ಬಂಟ್ವಾಳ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸುತ್ತಿದ್ದಾರೆ.
ಬಂಟ್ವಾಳ ತಾಲ್ಲೂಕಿನ ಪ್ರಮುಖ ಕಾರಣಿಕದ ದೇವಸ್ಥಾನ ಎಂಬ ಪ್ರತೀತಿಗೆ ಒಳಗಾಗಿರುವ ಕಡೇಶ್ವಾಲ್ಯ ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನಕ್ಕೆ ಕಳ್ಳರು ನುಗ್ಗಿದ ಬಳಿಕ ಬಂಟ್ವಾಳದಲ್ಲಿ ಮತ್ತೊಂದು ಕಳ್ಳತನ ಘಟನೆ ನಡೆದಿರುವುದು ಹಾಗೂ ಸಿಸಿ ಕ್ಯಾಮೆರಾ ಇದ್ದರೂ ಪ್ರಯೋಜನವಾಗದಿರುವುದು ಸಾರ್ವಜನಿಕರಲ್ಲಿ ಹಾಗೂ ಭಕ್ತಾಭಿಮಾನಿಗಳಲ್ಲಿ ಆತಂಕ ಸೃಷ್ಟಿಸಿದೆ.
ಹಲವು ಪ್ರಕರಣಗಳು ರಾಶಿ ಬಿದ್ದಿರುವ ಹೊತ್ತಿನಲ್ಲಿ ಕೆಲ ದಿನಗಳಿಂದ ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಖದೀಮರ ಅಟ್ಟಹಾಸ ಪೊಲೀಸರಿಗೆ ಸವಾಲಾಗಿ ಪರಿಣಮಿಸಿದೆ. ಬಿಸಿ ರೋಡಿನ ದೇವಸ್ಥಾನವೊಂದರಲ್ಲಿ ಕಳವು ಕೃತ್ಯ ನಡೆದಿದ್ದ ಸಂದರ್ಭ ಪೊಲೀಸರು ಎಲ್ಲಾ ದೇವಸ್ಥಾನಗಳಲ್ಲೂ ಸಿಸಿ ಕ್ಯಾಮೆರಾ ಅಳವಡಿಸಬೇಕು ಎಂಬ ಸೂಚನೆ ನೀಡಿದ್ದರು.
ಅದರಂತೆ ಕ್ಯಾಮೆರಾಗಳನ್ನೇನೋ ದೇವಸ್ಥಾನದ ಆಡಳಿತ ಮಂಡಳಿಯವರು ಅಳವಡಿಸಿದರೂ ಚುರುಕಾಗಿರುವ ಕಳ್ಳರು ಅದರ ಫೂಟೇಜ್ ಗಳನ್ನೇ ಹೊತ್ತೊಯ್ಯುತ್ತಿರುವುದು ಪೊಲೀಸರಿಗೆ ಹುಚ್ಚು ಹಿಡಿಸಿದೆ.