ಪುತ್ತೂರಿನಲ್ಲಿ ಮಾಜಿ ಸೈನಿಕನಿಗೆ ಗನ್ ತೋರಿಸಿ ಮನೆ ದೋಚಿದ ಕಳ್ಳರು
ಮಂಗಳೂರು, ಮಾರ್ಚ್ 22: ವೃದ್ದ ದಂಪತಿಯ ಮನೆಗೆ ನುಗ್ಗಿದ ಇಬ್ಬರು ದುಷ್ಕರ್ಮಿಗಳು ಚಾಕು ಹಾಗು ಪಿಸ್ತೂಲ್ ತೋರಿಸಿ ಮನೆಯಲ್ಲಿದ್ದ ನಗ ನಗದು ದೋಚಿ ಪರಾರಿಯಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ನಡೆದಿದೆ .
ಇಲ್ಲಿನ ಇಚಿಲಂಪಾಡಿ ಎಂಬಲ್ಲಿ ಈ ಘಟನೆ ನಡೆದಿದ್ದು ನಿವೃತ್ತ ಯೋಧ ನಾರಾಯಣ ಪಿಳ್ಳೆ ಎಂಬವರ ಮನೆಗೆ ಮಂಗಳವಾರ ರಾತ್ರಿ ನುಗ್ಗಿದ ಇಬ್ಬರು ದುಷ್ಕರ್ಮಿಗಳು ಮನೆಯಲ್ಲಿದ್ದ ನಾರಾಯಣ ಪಿಳ್ಳೆ ಹಾಗೂ ಅವರ ಪತ್ನಿಯವರನ್ನು ಚಾಕು ಮತ್ತು ಪಿಸ್ತೂಲು ತೋರಿಸಿ ಬೆದರಿಸಿದ್ದಾರೆ . ನಂತರ ಮನೆಯಲ್ಲಿದ್ದ 35 ಸಾವಿರ ರೂಪಾಯಿ ನಗದು ಹಾಗೂ 8 ಪವನ್ ಚಿನ್ನಾಭರಣ, 2 ಮೊಬೈಲ್ ಗಳನ್ನು ದೋಚಿ ಪರಾರಿಯಾಗಿದ್ದಾರೆ.
ಬದಲಾಗಿದ್ದಾರಪ್ಪೋ ಕಳ್ಳರು, ಸಿಸಿಟಿವಿ ಕ್ಯಾಮೆರಾ ಇದ್ದರೂ ಹಣ ಎಗರಿಸಿದರು
ಮನೆಗೆ ರಾತ್ರಿ ನುಗ್ಗಿದ ದುಷ್ಕರ್ಮಿಗಳು ಸುಮಾರು 15 ನಿಮಿಷ ನಾರಾಯಣ ಪಿಳ್ಳೆ ಅವರ ಮನೆಯಲ್ಲೇ ಇದ್ದು, ಮಲೆಯಾಳಂ ಭಾಷೆ ಮಾತಾನಾಡುತ್ತಿದ್ದರು ಎಂದು ಹೇಳಲಾಗಿದೆ. ಘಟನೆಯ ಕುರಿತು ಮಾಹಿತಿ ನೀಡಿದ ಬಳಿಕ ಸ್ಥಳಕ್ಕೆ ತೆರಳಿದ ಉಪ್ಪಿನಂಗಡಿ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಮನೆಗೆ ನುಗ್ಗಿದ್ದ ದುಷ್ಕರ್ಮಿಗಳು ದ್ವಿಚಕ್ರ ವಾಹನದಲ್ಲಿ ಬಂದಿದ್ದರು ಎಂದು ಹೇಳಲಾಗಿದೆ. ಘಟನೆ ನಡೆದ ಮನೆಗೆ ಬೆರಳಚ್ಚು ತಜ್ಞರ ತಂಡ ಹಾಗೂ ಶ್ವಾನದಳ ತನಿಖೆ ಆರಂಭಿಸಿವೆ.
ಈ ಭಾಗದಲ್ಲಿ ಈ ರೀತಿ ಗನ್, ಚಾಕು ತೋರಿಸಿ ಒಂಟಿ ಮನೆಗಳನ್ನು ದೋಚುವ ಪ್ರಕರಣಗಳು ಪದೇ ಪದೇ ವರದಿಯಾಗುತ್ತಿವೆ. ಆದರೂ ಈ ಬಗ್ಗೆ ಪೊಲೀಸ್ ಇಲಾಖೆ ಮೌನ ವಹಿಸಿದ್ದು ಜನರ ಆಕ್ರೋಶಕ್ಕೆ ಕಾರಣವಾಗಿದೆ ಮತ್ತು ಜನರಲ್ಲಿ ಭೀತಿಯ ವಾತಾವರಣ ಸೃಷ್ಟಿಸಿದೆ.