ಕಾಂಗ್ರೆಸ್ ಪ್ರಚಾರದಲ್ಲಿ ಮೊಯ್ದಿನ್ ಬಾವಾಗೆ ವೇಣುಗೋಪಾಲ್ ತರಾಟೆ
ಮಂಗಳೂರು, ನವೆಂಬರ್ 6: ರಾಜ್ಯ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜ್ಯದಲ್ಲಿ ಪ್ರಮುಖ ರಾಜಕೀಯ ಪಕ್ಷಗಳು ಚಟುವಟಿಕೆ ಬಿರುಸುಗೊಳಿಸಿವೆ.
ಬಿಜೆಪಿ ಒಂದೆಡೆ ಪರಿವರ್ತನಾ ಯಾತ್ರೆ ಆರಂಭಿಸಿದರೆ. ಇನ್ನೊಂದೆಡೆ ಜೆಡಿಎಸ್ ಕರ್ನಾಟಕ ವಿಕಾಸ ವಾಹಿನಿ ಯಾತ್ರೆ ಆರಂಭಿಸಲಿದೆ. ಕಾಂಗ್ರೆಸ್ ಈಗಾಗಲೇ ರಾಜ್ಯದೆಲ್ಲೆಡೆ 'ಮನೆ ಮನೆಗೆ ಕಾಂಗ್ರೆಸ್' ಅಭಿಯಾನಕ್ಕೆ ಚಾಲನೆ ನೀಡಿ ಚುನಾವಣಾ ಸಿದ್ದತೆ ಆರಂಭಿಸಿದೆ.
ಮನೆ ಮನೆ ಕಾಂಗ್ರೆಸ್ ಅಭಿಯಾನದ ಅಂಗವಾಗಿ ಮಂಗಳೂರಿನಲ್ಲಿ 2ನೇ ಸುತ್ತಿನ ಅಭಿಯಾನಕ್ಕೆ ಇಂದು ಚಾಲನೆ ನೀಡಲಾಗಿದೆ. ನಗರದ ಆಕಾಶ ಭವನ ಪ್ರದೇಶದಲ್ಲಿ ಮನೆ ಮನೆಗೆ ಕಾಂಗ್ರೆಸ್ ಅಭಿಯಾನಕ್ಕೆ ರಾಜ್ಯ ಉಸ್ತುವಾರಿ ಹಾಗು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಚಾಲನೆ ನೀಡಿದರು.
ಸ್ಥಳೀಯ ನಾಯಕರು ಭಾಗಿ
ಈ ಅಭಿಯಾನದಲ್ಲಿ ಸ್ಥಳೀಯ ಶಾಸಕ ಮೊಯ್ದೀನ್ ಬಾವಾ, ಜಿಲ್ಲಾ ಉಸ್ತುವಾರಿ ಸಚಿವ ಬಿ ರಮಾನಾಥ ರೈ, ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್, ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿ ಸೋಜಾ ಸೇರಿದಂತೆ ಮತ್ತಿತರ ಕಾಂಗ್ರೆಸ್ ಮುಖಂಡರು ಭಾಗವಹಿಸಿದ್ದರು.
ಮೊಯ್ದೀನ್ ಬಾವಾಗೆ ತರಾಟೆ
ಮನೆ ಮನೆ ಕಾಂಗ್ರೆಸ್ ಅಭಿಯಾನ ಸಂದರ್ಭದಲ್ಲಿ ವೇಣುಗೋಪಾಲ್, ಶಾಸಕ ಮೊಯ್ದಿನ್ ಬಾಬಾ ಅವರನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ . ಮನೆ ಮನೆ ಕಾಂಗ್ರೆಸ್ ಅಭಿಯಾನವನ್ನು ಯೋಜನಾಬದ್ಧವಾಗಿ ರೂಪಿಸದಿರುವುದಕ್ಕೆ ಹಾಗೂ ಅವ್ಯವಸ್ಥೆಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ .
ಶಾಸಕರ ವಿರುದ್ಧ ಕಿಡಿ
ಮನೆಮನೆ ಭೇಟಿ ಸಂದರ್ಭ ನಿವೇಶನ ವಂಚಿತ ಕಡು ಬಡ ಕುಟುಂಬವೊಂದು ಸಮಸ್ಯೆ ಹೇಳಿಕೊಂಡಾಗ ಕುಪಿತರಾದ ವೇಣುಗೋಪಾಲ್ ಶಾಸಕ ಮೊಯ್ದಿ ಬಾವ ಅವರ ವಿರುದ್ಧ ಕಿಡಿಕಾರಿದರು.
ಮನೆ ನಿರ್ಮಿಸಿ ಕೊಡಲು ಸೂಚನೆ
ಕುಟುಂಬಕ್ಕೆ ತಕ್ಷಣ ಮನೆ ನಿರ್ಮಿಸಿ ಕೊಡಲು ಸೂಚನೆ ನೀಡಿದ್ದಲ್ಲದೆ ಕುಟುಂಬಕ್ಕೆ ತಮ್ಮ ದೂರವಾಣಿ ಸಂಖ್ಯೆ ನೀಡಿ ಮನೆ ನಿರ್ಮಿಸಿ ಕೊಡದಿದ್ದರೆ ಕರೆ ಮಾಡಲು ವೇಣುಗೋಪಾಲ್ ತಿಳಿಸಿದರು.