ಗೌರಿ ಲಂಕೇಶ್ ಸಾವಿನಲ್ಲಿ ರಾಜ್ಯ ಸರಕಾರ ರಾಜಕೀಯ ಮಾಡುತ್ತಿದೆ: ಇಂದ್ರಜಿತ್
ಮಂಗಳೂರು, ಜನವರಿ 9: "ಅಕ್ಕ ಗೌರಿ ಲಂಕೇಶ್ ಸಾವಿನಲ್ಲಿ ರಾಜ್ಯ ಸರಕಾರ ರಾಜಕೀಯ ಮಾಡುತ್ತಿದೆ," ಎಂದು ಚಿತ್ರ ನಿರ್ದೇಶಕ ಇಂದ್ರಜಿತ್ ಲಂಕೇಶ್ ಆಕ್ರೋಶ ವ್ಯಕ್ತಪಡಿಸಿದರು.
ಮಂಗಳೂರಿನಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, "ಗೌರಿ ಲಂಕೇಶ್ ಅವರನ್ನು ಯಾಕೆ ಸಾಯಿಸಿದ್ದಾರೆ ಅನ್ನೋದು ಈವರೆಗೆ ಪತ್ತೆಯಾಗಿಲ್ಲ," ಎಂದು ಅಸಮಾಧಾನ ವ್ಯಕ್ತಪಡಿಸಿದರು. "ರಾಜಕೀಯಕ್ಕೋಸ್ಕರ ಗೌರಿ ಲಂಕೇಶ್ ಪ್ರಕರಣದ ತನಿಖೆಯ ದಾರಿ ತಪ್ಪಿಸಬೇಡಿ," ಎಂದು ಅವರು ಮನವಿ ಮಾಡಿದರು. ಅಕ್ಕ ಗೌರಿ ಲಂಕೇಶ್ ಹತ್ಯೆಯ ಬಗ್ಗೆ ಯಾರಲ್ಲಾದರೂ ಸಾಕ್ಷಿಗಳಿದ್ದರೆ ಕೊಡಿ ಎಂದು ಅವರು ಇದೇ ಸಂದರ್ಭದಲ್ಲಿ ಜನರ ಬಳಿ ಕೇಳಿಕೊಂಡರು.
"ರಾಜ್ಯದಲ್ಲಿ ಒಂದು ಧರ್ಮದ ವಿರುದ್ಧ ಇನ್ನೊಂದು ಧರ್ಮವನ್ನು ಎತ್ತಿ ಕಟ್ಟುವ ಕೆಲಸ ನಡೆಯುತ್ತಿದೆ. ಯಾವುದೇ ಸಾವಿನಲ್ಲಿ ಸರಕಾರ ರಾಜಕೀಯ ಮಾಡಬಾರದು," ಎಂದು ಇಂದ್ರಜಿತ್ ಲಂಕೇಶ್ ಅಭಿಪ್ರಾಯಪಟ್ಟರು.
"ಮಂಗಳೂರಿನ ಕಾಟಿಪಳ್ಳದಲ್ಲಿ ನಡೆದ ದೀಪಕ್ ರಾವ್ ಹಾಗೂ ಕೊಟ್ಟಾರ ಚೌಕಿಯಲ್ಲಿ ನಡೆದ ಅಬ್ದುಲ್ ಬಷೀರ್ ಅವರ ಸಾವು ತುಂಬಾ ನೋವು ತಂದಿದೆ," ಎಂದು ಹೇಳಿದ ಅವರು, "ರಾಜ್ಯದಲ್ಲಿ ರಾಜಕೀಯ ಹಿನ್ನಲೆಯಲ್ಲಿ ಹತ್ಯೆಗಳು ನಡೆಯುತ್ತಿವೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ," ಎಂದು ಆರೋಪಿಸಿದರು.
"ಮಂಗಳೂರಿನಲ್ಲಿ ನಡೆದ ಎರಡು ಸಾವಿನಲ್ಲೂ ರಾಜಕೀಯ ನಡೆಯುತ್ತಿದೆ," ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, "ರಾಜಕೀಯಕ್ಕಾಗಿ ಹಾಗೂ ಮತಗಳಿಕೆಯ ಲಾಭಕ್ಕಾಗಿ ಈ ಇಬ್ಬರ ಸಾವನ್ನು ಬಳಸಿಕೊಳ್ಳಬೇಡಿ," ಎಂದು ಮನವಿ ಮಾಡಿಕೊಂಡರು.
"ರಾಜ್ಯದಲ್ಲಿ ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ಧರ್ಮ ಧರ್ಮಗಳನ್ನು ಎತ್ತಿ ಕಟ್ಟುವ ಕೆಲಸ ನಡೆಯುತ್ತಿದೆ," ಎಂದು ಇಂದ್ರಜಿತ್ ಲಂಕೇಶ್ ವಿಷಾದ ವ್ಯಕ್ತಪಡಿಸಿದರು.