ಧರ್ಮ ಸಂಸ್ಥಾಪನೆ ಮಾಡುವುದೇ ಮಠಗಳ ಕರ್ತವ್ಯ: ಸದಾನಂದ ಗೌಡ
ಹರಿದ್ವಾರ, ನವೆಂಬರ್ 25: ಧರ್ಮ ಸಂಸ್ಥಾಪನೆ ಮಾಡುವುದೇ ಗುರುಗಳ ಹಾಗೂ ಮಠಗಳ ಕರ್ತವ್ಯ ಎಂದು ಕೇಂದ್ರ ಸಚಿವ ಸದಾನಂದ ಗೌಡ ಹೇಳಿದರು.
ಉತ್ತರ ಭಾರತದ ಹರಿದ್ವಾರದಲ್ಲಿ ಶನಿವಾರ ಬೆಳಿಗ್ಗೆ ಉಜಿರೆಯ ಶ್ರೀರಾಮ ಕ್ಷೇತ್ರದ ನೂತನ 'ಸಾಧನ ಕುಟೀರ' ಶಾಖ ಮಠ ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.
ಹರಿದ್ವಾರದಲ್ಲಿ ಶ್ರೀರಾಮ ಕ್ಷೇತ್ರದ ಶಾಖಾ ಮಠ ಆರಂಭ
"ಇಂದು ದಕ್ಷಿಣ ಭಾರತದ ಉಡುಪಿಯಲ್ಲಿ ಧರ್ಮ ಸಂಸತ್ ನಡೆದರೆ, ಉತ್ತರ ಭಾರತದಲ್ಲಿ ಶ್ರೀರಾಮ ಕ್ಷೇತ್ರದ ಮಠಾಧೀಶರಾದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರಿಂದ ಹರಿದ್ವಾರದಲ್ಲಿ ನೂತನ ಸಾಧನಾ ಕುಟೀರದಲ್ಲಿ ಧರ್ಮ ಸಂಸತ್ ನಡೆದಿದೆ. ಇದೊಂದು ಅಸ್ಮರಣೀಯ ದಿನ," ಎಂದು ಸದಾನಂದ ಗೌಡ ಹೇಳಿದರು.
ಮುಂಡ್ಕೂರು ವಿಠೋಬ ದೇವರ ಸಹಸ್ರ ಕುಂಭಾಭಿಷೇಕ ಸಂಪನ್ನ
ಗುರುಗಳ ಮಾರ್ಗದರ್ಶನದಿಂದ ಉತ್ತಮ ಸಮಾಜ
"ಒಂದು ಸಮಾಜವು ಯಶಸ್ವಿಯಾಗಿ ಉಳಿಯಬೇಕಾದರೆ ಆ ಸಮಾಜದಲ್ಲಿ ಸಂಸ್ಕ್ರತಿ, ಸಂಸ್ಕಾರ ಪ್ರೀತಿ ವಿಶ್ವಾಸ ಇರುವುದು ಬಹಳ ಮುಖ್ಯ. ಅದರಂತೆ ಗುರುಗಳ ಉತ್ತಮ ಮಾರ್ಗದರ್ಶದಿಂದ ಒಂದು ಉತ್ತಮ ಸಮಾಜ ನಿರ್ಮಾಣ ಆಗುವುದರಲ್ಲಿ ಸಂದೇಹವೇ ಇಲ್ಲ. ಉತ್ತಮ ಸಮಾಜದಿಂದ ಈ ದೇಶ ಸದೃಢವಾಗಿ ಬೆಳೆಯಬಲ್ಲದು," ಎಂದು ಅವರು ಅಭಿಪ್ರಾಯಪಟ್ಟರು.
ಧರ್ಮದೊಂದಿಗೆ ಶಿಕ್ಷಣ ದಾನ
ಶ್ರೀರಾಮ ಕ್ಷೇತ್ರದ ಸ್ವಾಮೀಜಿಗಳ ಬಗ್ಗೆ ನನಗೆ ಅನೋನ್ಯವಾದ ಸಂಬಂಧವಿದ್ದು ಇವರು ಸಮಾಜಕ್ಕೆ ಧರ್ಮದೊಂದಿಗೆ ಶಿಕ್ಷಣವನ್ನು ಉಚಿತವಾಗಿ ನೀಡಿ ಈ ಸಮಾಜ ಸದೃಢವಾಗಿ ಬೆಳೆಯಲು ಕಾರಣೀಕರ್ತರಾಗಿದ್ದಾರೆ. ಇವರ ಕಾರ್ಯಕ್ರಮ ಇತರರಿಗೆ ಮಾದರಿಯಾಗಿ ಈ ದೇಶಕ್ಕೆ ಉತ್ತಮ ಕೊಡುಗೆ ನೀಡುವಂತಾಗಲಿ. ಸ್ವಾಮೀಜಿಗಳು ಯಾವುದೇ ಕಾರ್ಯ ಮಾಡಿದರೂ ಅದರಲ್ಲಿ ಶಿಸ್ತು, ಬದ್ಧತೆ ಹಾಗೂ ದಕ್ಷತೆ ಇರುತ್ತದೆ. ಇವರ ಮಾರ್ಗದರ್ಶನದಿಂದ ಸಮಾಜದಲ್ಲಿ ಧರ್ಮ ಜಾಗೃತಿಯಾಗಿ ಉತ್ತಮ ಸಂಸ್ಕೃತಿ ಬೆಳೆಯುವಂತಾಗಲಿ ಎಂದು ಆಶಿಸಿದರು.
ಕೆಳ ವರ್ಗದ ಮಕ್ಕಳಿಗೂ ಶಿಕ್ಷಣ
ವೇದಿಕೆಯಲ್ಲಿ ಉಪಸ್ಥಿತರಿದ್ದ ಹರಿದ್ವಾರದ ಶ್ರೀ ಪ್ರೇಮಾನಂದಜೀ ಮಹಾರಾಜ ಸ್ವಾಮೀಜಿ, ದೇವಾನಂದ ಸರಸ್ವತಿ ಸ್ವಾಮೀಜಿ, ಶ್ರೀ ಸೋಮೇಶ್ವರನಂದಜೀ ಸ್ವಾಮೀಜಿಗಳು ಆಶೀರ್ವಚನ ನೀಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಭಟ್ಕಳ ಶಾಸಕ ಮಂಕಾಳ ವೈದ್ಯ ಮಾತನಾಡಿ ಧರ್ಮಸ್ಥಳ ಸಮೀಪದಲ್ಲಿರುವ ಶ್ರೀರಾಮ ಕ್ಷೇತ್ರದಿಂದ ಸಮಾಜದ ಅತ್ಯಂತ ಕೆಳ ವರ್ಗದ ಬಡ ಮಕ್ಕಳೂ ಸಹ ಶಿಕ್ಷಣವಂತರಾಗಿ ಈ ದೇಶದ ಆಸ್ತಿಯಾಗಲು ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಗಳು ಕಾರಣೀಕರ್ತರಾಗಿದ್ದಾರೆ. ಅವರ ಎಲ್ಲಾ ಕಾರ್ಯಕ್ಕೂ ನನ್ನ ಸಹಾಯ ಯಾವತ್ತೂ ಇದೆ ಎಂದರು.
ಎಲ್ಲದಿಕ್ಕೂ ಭಗವಂತನೇ ಕಾರಣ
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀರಾಮ ಕ್ಷೇತ್ರದ ಮಠಾಧೀಶ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಗಳು ಮಾತನಾಡಿ, "ಇಂದು ಮನುಷ್ಯನಲ್ಲಿ ಚಂಚಲತೆ, ಅಹಂಕಾರ ಹೆಚ್ಚುತ್ತಿದ್ದು ಭಗವಂತನಲ್ಲಿ ಇವೆಲ್ಲವನ್ನೂ ಬಿಟ್ಟು ಬಂದಾಗಲೆ ಭಗವಂತ ಆತನನ್ನು ರಕ್ಷಿಸುತ್ತಾನೆ," ಎಂದರಲ್ಲದೆ, 'ಈ ಲೋಕದಲ್ಲಿ ಎಲ್ಲವೂ ಭಗವಂತದ ಇಚ್ಚೆಯಿಂದಲೇ ನಡೆಯುತ್ತಿದೆ,' ಎಂದರು.
ವೇದಿಕೆಯಲ್ಲಿ ಕರ್ನಾಟಕ ರಾಜ್ಯ ಆರ್ಯ ಈಡಿಗ ಸಂಘದ ಅಧ್ಯಕ್ಷ ಕಾಳೇಗೌಡ, ಹರಿದ್ವಾರದ ಮೇಯರ್ ಮನೋಜ ಗರ್ಗ, ಆಶೀಶ್ ಗೌತಮ್, ಪೀತಾಂಬರ ಹರಾಜೆ, ಉದ್ಯಮಿ ಸದಾನಂದ ಬಂಗೇರ, ಭಗವತಿ ಪ್ರಸಾದ ಉಪಸ್ಥಿತರಿದ್ದರು.
ಉದ್ಘಾಟನಾ ಕಾರ್ಯಕ್ರಮಕ್ಕೂ ಮುನ್ನ ದೆಹಲಿಯ ಶ್ರೀರಾಮ ನಿರ್ಧಯ ಭಗವತಿ ನಿಕೇತನ ತಂಡವರಿಂದ ಶ್ರೀರಾಮ ಕೀರ್ತನೆ ನಡೆಯಿತು.