ಮಹಿಳಾ ಕಾರ್ಪೊರೇಟರ್ ಜೊತೆ ಅಸಭ್ಯ ವರ್ತನೆ, ಕಾಂಗ್ರೆಸ್ ಮುಖಂಡ ವಜಾ
ಮಂಗಳೂರು, ಮಾರ್ಚ್ 13: ಮಂಗಳೂರಿನ ಮಹಿಳಾ ಕಾರ್ಪೊರೇಟರ್ ಜೊತೆ ಅನುಚಿತವಾಗಿ ವರ್ತಿಸಿದ ಕಾಂಗ್ರೆಸ್ ಮುಖಂಡರೊಬ್ಬರನ್ನು ಪಕ್ಷದಿಂದ ವಜಾ ಮಾಡಲಾಗಿದೆ.
ದಕ್ಷಿಣ ಕನ್ನಡ ಕಾಂಗ್ರೆಸ್ ಘಟಕದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಸತ್ತಾರ್ ಅವರನ್ನು ಹುದ್ದೆಯಿಂದ ವಜಾಗೊಳಿಸಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಆದೇಶ ಹೊರಡಿಸಿದ್ದಾರೆ.
ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಮಂಗಳೂರು ಮಹಾನಗರ ಪಾಲಿಕೆಯ ಕಾಂಗ್ರೆಸ್ ಮಹಿಳಾ ಕಾರ್ಪೋರೇಟರ್ ಪ್ರತಿಭಾ ಕುಳಾಯಿ ಅವರೊಂದಿಗೆ ಅಬ್ದುಲ್ ಸತ್ತಾರ್ ಸೋಮವಾರ ರಾತ್ರಿ ಅಸಭ್ಯವಾಗಿ ವರ್ತಿಸಿದ್ದರು ಎಂದು ಆರೋಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಅಬ್ದುಲ್ ಸತ್ತಾರ್ ವಿರುದ್ದ ಪಕ್ಷ ಶಿಸ್ತು ಕ್ರಮ ಕೈಗೊಂಡಿದೆ.
ನಿನ್ನೆ ರಾತ್ರಿ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಮೊಯ್ದೀನ್ ಬಾವಾ ಅವರ ಮನೆಯಲ್ಲಿ ಅಬ್ದುಲ್ ಸತ್ತಾರ್ ಅಸಭ್ಯವಾಗಿ ವರ್ತಿಸಿದ್ದ ಎಂದು ಆರೋಪಿಸಲಾಗಿದೆ. ಈ ಹಿನ್ನಲೆಯಲ್ಲಿ ಸಿಟ್ಟಿಗೆದ್ದ ಕಾರ್ಪೊರೇಟರ್ ಪ್ರತಿಭಾ ಕುಳಾಯಿ ಅಬ್ದುಲ್ ಸತ್ತಾರ್ ಅವರಿಗೆ ಶಾಸಕರ ಮನೆಯಲ್ಲಿ ಧರ್ಮದೇಟು ನೀಡಿದ್ದರು ಎಂದು ಹೇಳಲಾಗಿದೆ.
ಪಬ್ ದಾಳಿ ಆರೋಪಿಗಳು ದೋಷಮುಕ್ತ, ಸಿಹಿ ಹಂಚಿ ಸಂಭ್ರಮಾಚರಣೆ
ತನ್ನ ಜತೆ ಅಸಭ್ಯವಾಗಿ ವರ್ತಿಸಿದ್ದ ಅಬ್ದುಲ್ ಸತ್ತಾರ್ ಅವರನ್ನು ಪ್ರತಿಭಾ ಕುಳಾಯಿ ಶಾಸಕ ಮೊಯ್ದೀನ್ ಬಾವಾರ ಕಚೇರಿಯಲ್ಲಿ ತರಾಟೆಗೆ ತೆಗೆದುಕೊಂಡು ಹೊಡೆಯಲು ಯತ್ನಿಸಿದ್ದರು. ಆದರೆ ಅಲ್ಲಿಂದ ತಪ್ಪಿಸಿ ಓಡಿದ್ದ ಅಬ್ದುಲ್ ಸತ್ತಾರ್ ಮತ್ತೆ ಪ್ರತಿಭಾ ಕುಳಾಯಿ ಅವರ ಕಾರಿಗೆ ಅಡ್ಡ ಬಂದು ತನ್ನ ಉದ್ಧಟತನ ತೋರಿದ್ದರು. ಈ ಪರಿಣಾಮ ಸಿಟ್ಟಿಗೆದ್ದ ಪ್ರತಿಭಾ ಅಬ್ದುಲ್ ಸತ್ತಾರ್ ಅವರಿಗೆ ಧರ್ಮದೇಟು ನೀಡಿದ್ದರು.
ಸುರತ್ಕಲ್ ವ್ಯಾಪ್ತಿಯಲ್ಲಿ ಈ ಹಿಂದೆಯೂ ಮಹಿಳೆಯರ ಜತೆ ಅಬ್ದುಲ್ ಸತ್ತಾರ್ ಅಸಭ್ಯವಾಗಿ ವರ್ತಿಸುತ್ತಿದ್ದ ಎಂದು ಆರೋಪಿಸಲಾಗಿದೆ. ಈ ಹಿಂದೆ ಯುವತಿಗೆ ಕಿರುಕುಳ ನೀಡಿ ಹಿಂದೂ ಸಂಘಟನೆಯ ಕಾರ್ಯಕರ್ತರ ಕೈಗೆ ಸಿಕ್ಕಿಬಿದ್ದು ಸತ್ತಾರ್ ಪೆಟ್ಟು ತಿಂದಿದ್ದರು ಎಂದೂ ಹೇಳಲಾಗಿದೆ. ಆದರೂ ಚಪಲ ಬಿಡದ ಅಬ್ದುಲ್ ಸತ್ತಾರ್ ಮತ್ತೆ ತನ್ನ ಚಾಳಿ ಮುಂದುವರೆಸಿದ್ದರು.
ಆದರೆ ಈ ಬಾರಿ ತನ್ನ ಪಕ್ಷದ ಕಾರ್ಪೊರೇಟರ್ ಮೇಲೆ ಕಣ್ಣು ಹಾಕಿದ್ದ ಸತ್ತಾರ್ ರನ್ನು ಪಕ್ಷದಿಂದಲೇ ವಜಾಗೊಳಿಸಲಾಗಿದೆ.