ತಾರಸಿ ತೋಟ ನಿರ್ಮಿಸಿ, ನಿಮ್ಮ ಮನೆಯನ್ನು ಹಚ್ಚ ಹಸುರಾಗಿಸಿ
ಮನುಷ್ಯ ಯಾವುದೇ ಮೂಲೆಯಲ್ಲಿದ್ದರೂ ಆಹಾರವೇ ಜೀವಾಳ. ಜೀವನೋತ್ಸಾಹದ ಸೆಲೆಗೆ ಮೂಲ ಆಧಾರ ಕೃಷಿ. ನಾಗಾಲೋಟದಲ್ಲಿ ಓಡುತ್ತಿರುವ ನಗರೀಕರಣದಲ್ಲಿ ಕೃಷಿ ಭೂಮಿಗಳು ಮಾಯವಾಗುತ್ತಿವೆ. ಇದರ ಜಾಗವನ್ನು ಐಟಿಬಿಟಿ ಕಂಪನಿ, ಗಗನದೆತ್ತರದ ಕಟ್ಟಡಗಳು ಕಬಳಿಸುತ್ತಿವೆ.
ಬೆಂಗಳೂರು, ಮಂಗಳೂರು ನಗರದಲ್ಲಿ ಹಸಿರು ಸಂಪತ್ತನ್ನು ಹುಡುಕಿಕೊಂಡು ಅಲೆಯುವ ಪಾಡು ಇಲ್ಲಿನ ಜನರಿಗೆ. ಇಲ್ಲಿ ಹಸಿರು ಸಂಪತ್ತು ಹೇಳಹೆಸರಿಲ್ಲದೇ ಅವಸಾನದತ್ತ ಸಾಗುತ್ತಿದ್ದು, ಬೆಂಗಳೂರಿನಂತೆ ಮಂಗಳೂರು ಕೂಡ ಹೈಟೆಕ್ ಸಿಟಿಯಾಗಿ ಬೆಳೆಯುತ್ತಿದೆ.
ಹೈಟೆಕ್ ಸಿಟಿಯ ಸೋಗಿನಲ್ಲಿರುವ ಮಂಗಳೂರಿನಲ್ಲಿ ವಿಪರೀತ ತಾಪಮಾನ, ವಾಯುಮಾಲಿನ್ಯ, ಪರಿಸರ ಸಂಬಂಧಿ ಸಮಸ್ಯೆಗಳು ಎಗಿಲ್ಲದೇ ಬೆಳೆಯುತ್ತಿದೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಇಲ್ಲಿನ ಜನತೆ ಹೊಸ ಆಲೋಚನಾ ಕ್ರಮಕ್ಕೆ ಮುಂದಾಗಿದ್ದಾರೆ.[ಸಾಂಬಾರ ಪದಾರ್ಥಗಳ ರಾಣಿ ಏಲಕ್ಕಿ ನೇಪಥ್ಯಕ್ಕೆ ಸರಿದದ್ಯಾಕೆ?]
ಹೌದು ಮಂಗಳೂರು ಜನರು ತಮ್ಮ ಬದುಕನ್ನು ಹಚ್ಚಹಸುರಾಗಿಸಿಕೊಳ್ಳಲು ಹೊರಟಿದ್ದಾರೆ. ಅದು ಯಾವುದಪ್ಪಾ ನವೀನ ಆಲೋಚನೆ ಎಂದು ಕೇಳ್ತಿದ್ದೀರಾ?. ಹೌದು ಸದ್ಯದ ಸಮಸ್ಯೆಗೆ ಒಂದು ಪರಿಹಾರವೆಂದರೆ ತಾರಸಿ ತೋಟ. ಹೀಗಾಗಿ ಮಂಗಳೂರು ನಗರದಲ್ಲಿ 500ಕ್ಕೂ ಅಧಿಕ ಮಂದಿ ತಾರಸಿ ತೋಟದ ಮೊರೆಹೋಗಿದ್ದಾರೆ.
ಏನಿದು ತಾರಸಿ ತೋಟ ?
ನಮ್ಮ ಮನೆಯ ಮುಂದೆ ಕೈತೋಟ ನಿರ್ಮಿಸಲು ಸಾಕಷ್ಟು ಸ್ಥಳಾವಕಾಶ ಇಲ್ಲದಿದ್ದಲ್ಲಿ ಮನೆಯ ಮಾಳಿಗೆ (ತಾರಸಿ) ಮೇಲೆ ಅಂದದ ತೋಟ ನಿರ್ಮಿಸಿ ಸಾವಯವ ಹಣ್ಣು ತರಕಾರಿಗಳನ್ನು ಬೆಳೆಯಬಹುದು. ದೈನಂದಿನ ಅಡುಗೆಗೆ ಬೇಕಾದ ವಿವಿಧ ರೀತಿ ತರಕಾರಿ, ಆಯ್ದ ಹಣ್ಣಿನ ಬೆಳೆಗಳು, ಸೊಪ್ಪುಗಳಿಂದ ಹಿಡಿದು ಅನಾರೋಗ್ಯದ ಸಂದರ್ಭದಲ್ಲಿ ಮನೆಮದ್ದಿಗೆ ಬಳಸುವ ಗಿಡಮೂಲಿಕೆಗಳನ್ನು ಬೆಳೆಯಬಹುದು.
ಇಲಾಖೆ ತಾರಸಿ ತೋಟಕ್ಕೆ ಯಾವ ರೀತಿ ಪ್ರೋತ್ಸಾಹ ನೀಡುತ್ತಿದೆ?
ತೋಟಗಾರಿಕೆ ಇಲಾಖೆಯು ನಗರ ಪಟ್ಟಣ ಪ್ರದೇಶದ ನಾಗರಿಕರಿಗೆ ತಾರಸಿ ತೋಟದ ಪ್ರಾಮುಖ್ಯತೆ ಬಗ್ಗೆ ಅರಿವು ಮೂಡಿಸಲು ಅಗತ್ಯ ತರಬೇತಿ ನೀಡುತ್ತಿದೆ. ತೋಟಗಾರಿಕಾ ಅಧಿಕಾರಿಗಳು ಮತ್ತು ಸಂಪನ್ಮೂಲ ವ್ಯಕ್ತಿಗಳು ಸಂಘ ಸಂಸ್ಥೆಗಳು ಶಾಲೆಗಳು, ಅಂಗನವಾಡಿಗಳಿಗೆ ತೆರಳಿ ತಾರಸಿ ತೋಟದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದು, ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಇಲಾಖೆ ಕೊಡುವ ಕಿಟ್ ನಲ್ಲಿ ಏನಿರುತ್ತದೆ?
ತಾರಸಿ ತೋಟಕ್ಕೆ ರೂ. 1000 ಬೆಲೆಯ, ಕೈತೋಟಕ್ಕೆ ರೂ. 250 ಬೆಲೆಯ ತರಕಾರಿ ಮಿನಿಕಿಟ್ ವಿತರಿಸಲಾಗುತ್ತಿದೆ. ಕೈತೋಟದ ಕಿಟ್ ನಲ್ಲಿ ರೂ.80 ಮೌಲ್ಯದ ಬಯೋಮಿಕ್ಸ್, ರೂ.100 ಮೌಲ್ಯದ ತರಕಾರಿ ಸಸಿಗಳು, ರೂ. 70 ಮೌಲ್ಯದ ತರಕಾರಿ ಬೀಜಗಳನ್ನು ನೀಡಲಾಗುತ್ತಿದೆ.
ತಾರಸಿ ತೋಟ ನಿರ್ಮಾಣಕ್ಕೆ ಸಹಾಯಧನ
ಖಾಸಗಿ ತಾರಸಿ ತೋಟ ಮತ್ತು ಕೈತೋಟ ನಿರ್ಮಾಣಕ್ಕೆ 50 ಸಾವಿರ ವೆಚ್ಚ ತಗುಲುತ್ತದೆ. ಇದಕ್ಕೆ ತೋಟಗಾರಿಕೆ ಇಲಾಖೆಯು ಶೇ.50ರಷ್ಟು ಸಹಾಯಧನ ನೀಡುತ್ತದೆ. ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಶೇ. 90 ಸಹಾಯಧನ ಸಿಗಲಿದೆ.
ತಾರಸಿ ತೋಟ ಮಾಡುವವರಿಗೆ ಇಲ್ಲಿದೆ ವಿಫುಲ ಅವಕಾಶ
2015-16 ನೇ ಸಾಲಿನಲ್ಲಿ ತೋಟಗಾರಿಕೆ ಇಲಾಖೆ ನೀಡುವ ತಾರಸಿ ತೋಟದ ಮಿನಿಕಿಟ್ ಗಳನ್ನು ಮೊದಲು ಅರ್ಜಿ ಸಲ್ಲಿಸಿದ 600 ಮಂದಿಗೆ ಆದ್ಯತೆ ಮೇಲೆ ನೀಡಲಾಗಿದೆ. 2016-17ನೇ ಸಾಲಿನ ಯೋಜನೆಯಲ್ಲಿ ಕಿಟ್ ಪಡೆಯಲು ಬಯಸುವವರು ಅರ್ಜಿ ಸಲ್ಲಿಸಬಹುದು. ಮೊದಲು ಬಂದವರಿಗೆ ಆದ್ಯತೆ ನೀಡಲಾಗುವುದು. ಮಾಹಿತಿಗೆ ದೂರವಾಣಿ 0824-2412628 , ಇ ಮೇಲ್ [email protected] ಸಂಪರ್ಕಿಸಬಹುದು ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಎಚ್. ಆರ್. ಯೋಗೇಶ್ ಹೇಳಿದ್ದಾರೆ.