ಮದೀನಾ ತಲುಪಿದ ಮಂಗಳೂರಿನ ಹಜ್ಜಾಜಿಗಳ ತಂಡಕ್ಕೆ ಕೆಸಿಎಫ್ ಸ್ವಾಗತ
ಮಂಗಳೂರು, ಜುಲೈ.22: ಮಂಗಳೂರಿನಿಂದ ನಿನ್ನೆ ಹೊರಟ ಪವಿತ್ರ ಹಜ್ ಯಾತ್ರಿಗಳ ತಂಡ ನಿನ್ನೆ ರಾತ್ರಿ ಮದೀನಾ ತಲುಪಿದೆ. ಪವಿತ್ರ ಹಜ್ ಕರ್ಮ ನಿರ್ವಹಿಸಲು ಮಂಗಳೂರಿನಿಂದ ಆಗಮಿಸಿದ ಹಜ್ಜಾಜಿಗಳ ತಂಡ ನಿನ್ನೆ ಶನಿವಾರದಂದು ಮದೀನಾ ಮುನವ್ವರದ ಪ್ರಿನ್ಸ್ ಮೊಹಮ್ಮದ್ ಬಿನ್ ಅಬ್ದುಲ್ ಅಝೀಝ್ ವಿಮಾನ ನಿಲ್ದಾಣ ತಲುಪಿತು.
ಹಜ್ ಯಾತ್ರಿಗಳನ್ನು ಕೆಸಿಎಫ್ ಕಾರ್ಯಕರ್ತರು ವಿಮಾನ ನಿಲ್ದಾಣದಲ್ಲಿ ಅದ್ದೂರಿಯಾಗಿ ಸ್ವಾಗತಿಸಿದರು.
ಜಮೀರ್ ಭಾಯ್, ಹಜ್ ಭವನಕ್ಕೆ ಮರುನಾಮಕರಣದ ಅವಶ್ಯಕತೆ ಇದೆಯೇ?
"ಹಜ್ ಕರ್ಮ ನಿರ್ವಹಿಸಲು ಆಗಮಿಸಿದ ನಾವು ಯಾವುದೇ ತೊಂದರೆಯಿಲ್ಲದೇ ಮದೀನಾ ತಲುಪಿದ್ದು ಬಹಳ ಸಂತೋಷವಾಗಿದೆ. ಕೆಸಿಎಫ್ ಕಾರ್ಯಕರ್ತರು ನಮ್ಮನ್ನು ಆದರದಿಂದ ಸ್ವಾಗತಿಸಿ, ಎಲ್ಲಾ ಹಾಜಿಗಳಿಗೆ ಧೈರ್ಯ ತುಂಬಿದ್ದಾರೆ" ಎಂದು ಬಜ್ಪೆ ಜುಮಾ ಮಸೀದಿ ಅಧ್ಯಕ್ಷ ಇಸ್ಮಾಯಿಲ್ ಹಾಜಿ ತಿಳಿಸಿದ್ದಾರೆ.
ಹಜ್ಜಾಜಿಗಳು ತಂಗುವ ವಸತಿಗಳಿಗೆ ತೆರಳಿದ ಎಚ್.ವಿ.ಸಿ ಕಾರ್ಯಕರ್ತರು ದಣಿದು ಬಂದ ಹಜ್ಜಾಜಿಗಳಿಗೆ ಹಣ್ಣು ಹಂಪಲು ನೀಡಿ, ಹಜ್ಜಾಜಿಗಳ ಕೊಠಡಿಗಳಿಗೆ ಲಗೇಜ್ ಸಾಗಿಸಲು ಸಹಕರಿಸಿದರು. 146 ಹಜ್ಜಾಜಿಗಳು ಶನಿವಾರದಂದು ಮದೀನಾಕ್ಕೆ ಆಗಮಿಸಿದ್ದು, ಇಂದು ಹಾಗೂ ಸೋಮವಾರವು ಕೂಡ ಹಜ್ಜಾಜಿಗಳು ಮದೀನಾ ಪ್ರಯಾಣ ಬೆಳೆಸಲಿದ್ದಾರೆ.
ಎಲ್ಲಾ ಹಾಜಿಗಳಿಗೆ ದಿನದ 24 ಗಂಟೆಗಳ ಕಾಲ ಅಗತ್ಯವಿರುವ ಸೇವೆ ನೀಡಲು ಕೆಸಿಎಫ್ , ಹೆಚ್.ವಿ.ಸಿ ಕಾರ್ಯಕರ್ತರು ಸನ್ನದ್ಧರಾಗಿದ್ದಾರೆ ಎಂದು ಹೆಚ್.ವಿ.ಸಿ ರಾಷ್ಟ್ರೀಯ ಸಮಿತಿ ಕನ್ವೀನರ್ ಸೆಲೀಂ ಕನ್ಯಾಡಿ ತಿಳಿಸಿದ್ದಾರೆ.
ಈ ವೇಳೆ ಕೆಸಿಎಫ್ ಹೆಚ್.ವಿ.ಸಿ ಮದೀನಾ ಚೇರ್ಮೆನ್ ತಾಜುದ್ದೀನ್ ಸುಳ್ಯ, ಕನ್ವೀನರ್ ರಝಾಕ್ ಸಂತೋಷ್ ನಗರ , ಫಾರೂಖ್ ನಈಮಿ, ಜಬ್ಬಾರ್ ಉಪ್ಪಿನಂಗಡಿ, ರಝಾಕ್ ಬೈತಡ್ಕ,ಅಶ್ರಫ್ ಸಖಾಫಿ ನೂಜಿ, ಇಕ್ಬಾಲ್ ಕುಪ್ಪೆಪದವು, ಮತ್ತಿತರ ಕೆಸಿಎಫ್ ಹೆಚ್.ವಿ.ಸಿ ಕಾರ್ಯಕರ್ತರು ಉಪಸ್ಥಿತರಿದ್ದರು.