ಟೋಲ್ ಎಫೆಕ್ಟ್: ಫೆ.11ರಂದು ಮಂಗಳೂರು-ತಲಪಾಡಿ ರಸ್ತೆ ಬಂದ್
ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪೂರ್ಣಗೊಳಿಸದೆನೇ ರಾಷ್ಟ್ರೀಯ ಹೆದ್ದಾರಿ 66ರ ತಲಪಾಡಿಯಲ್ಲಿ ಟೋಲ್ ಸಂಗ್ರಹ ಆರಂಭಿಸಿರುವುದನ್ನು ವಿರೋಧಿಸಿ ಫೆಬ್ರವರಿ 11ರಂದು ಮಂಗಳೂರು-ತಲಪಾಡಿ ರಸ್ತೆ ಬಂದ್ ಮಾಡಲು ಹಲವು ಸಂಘನೆಗಳು ನಿರ್ಧರಿಸಿವೆ.
ಮಂಗಳೂರು, ಫೆಬ್ರವರಿ. 10 : ಕಾಮಗಾರಿ ಪೂರ್ಣಗೊಳಿಸಿದೆ ರಾಷ್ಟ್ರೀಯ ಹೆದ್ದಾರಿ 66ರ ತಲಪಾಡಿಯಲ್ಲಿ ಟೋಲ್ ಸಂಗ್ರಹ ಆರಂಭಿಸಿರುವುದನ್ನು ವಿರೋಧಿಸಿ ಫೆಬ್ರವರಿ 11ರಂದು ತೊಕ್ಕೊಟ್ಟುನಿಂದ ತಲಪಾಡಿವರೆಗೆ ರಸ್ತೆ ತಡೆ ನಡೆಸಲಾಗುವುದು ಎಂದು ಮಂಗಳೂರು ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ತಿಳಿಸಿದ್ದಾರೆ.
ಈ ಬಗ್ಗೆ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅವರು, ಸಾರ್ವಜನಿಕರಿಗೆ ವಂಚಿಸುವ ನಿಟ್ಟಿನಲ್ಲಿ ಟೋಲ್ ಆರಂಭಿಸಲಾಗಿದೆ. ಇದಕ್ಕೆ ಅನುಮತಿ ನೀಡಿರುವ ಕೇಂದ್ರ ಸರಕಾರದ ಕ್ರಮ ಖಂಡನೀಯ. ಸಂಸದರು ಇದಕ್ಕೆ ಕೂಡಲೇ ಸ್ಪಂದಿಸಬೇಕಿದೆ.[ಮಂಗಳೂರು: ತಲಪಾಡಿ ಟೋಲ್ ಗೇಟ್ ವಿರುದ್ಧ ಮುಂದುವರಿದ ಪ್ರತಿಭಟನೆ]
ನಾಳೆ ನಡೆಯುವ ಬಂದ್ನಲ್ಲಿ ಟೂರಿಸ್ಟ್ ವಾಹನಗಳ, ರಿಕ್ಷಾ, ಖಾಸಗಿ ಚಾಲಕರು ಮಾಲೀಕರು, ಗಡಿನಾಡು ರಕ್ಷಣಾ ವೇದಿಕೆ, ತುಳುನಾಡು ರಕ್ಷಣಾ ವೇದಿಕೆ, ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಸ್ಥಳೀಯ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಬಂದ್ ನಡೆಯಲಿದೆ ಎಂದು ತಿಳಿಸಿದ್ದಾರೆ.
ಬಸ್ಸು ಮಾಲಕರು ಬೆಂಬಲ ನೀಡಿರುವುದರಿಂದ ತಲಪಾಡಿಯಿಂದ - ಮಂಗಳೂರಿಗೆ ಸಂಚರಿಸುವ ಖಾಸಗಿ ಬಸ್ ಸಂಚಾರ ಸಂಪೂರ್ಣವಾಗಿ ಬಂದ ಆಗಲಿದೆ.ಆಂಬುಲೆನ್ಸ್, ಪತ್ರಿಕಾ ವಾಹನ, ಹಾಲಿನ ವಾಹನ, ಔಷಧಿ ಅಂಗಡಿಗಳಿಗೆ ಬಂದ್ ವೇಳೆ ವಿನಾಯಿತಿ ಇದೆ ಎಂದರು.
ಈ ಸಂದರ್ಭ ಕಾಂಗ್ರೆಸ್ ಕ್ಷೇತ್ರ ಕಾರ್ಯದರ್ಶಿ ಅಬ್ದುಲ್ ರಹ್ಮಾನ್ ಕೋಡಿಜಾಲ್, ಟೂರಿಸ್ಟ್ ವಾಹನ ಮತ್ತು ಮಾಲಕರ ಸಂಘದ ದಿನೇಶ್ ಕುಂಪಲ, ಜಿಪಂ ಮಾಜಿ ಸದಸ್ಯ ಮುಸ್ತಫಾ, ಗಣೇಶ್ ತಲಪಾಡಿ ಇತರರು ಇದ್ದರು.
ಆದರೆ ಒನ್ ಇಂಡಿಯಾ ಕನ್ನಡ ಜೊತೆ ಮಾತನಾಡಿದ ಕೆನರಾ ಬಸ್ ಅಸೋಸಿಯೇಷನ್ ಅಧ್ಯಕ್ಷ ರಾಜವರ್ಮಾ ಬಲ್ಲಾಳ್ ಬಸ್ ಬಂದ್ ಗೆ ನಾವು ಯಾವುದೇ ಕರೆ ಕೊಟ್ಟಿಲ್ಲ, ಈ ಬಗ್ಗೆ ನಮ್ಮಲಿ ಯಾರು ಕೂಡ ಚರ್ಚೆ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.