ಧರ್ಮಸ್ಥಳದಲ್ಲಿ ಆ.19ರಂದು 'ಸತ್ಯಕ್ಕೆ ಸಂದ ಜಯ'
ಮಂಗಳೂರು, ಆಗಸ್ಟ್ 11 : ಸೌಜನ್ಯ ಕೊಲೆ ಪ್ರಕರಣದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಕುಟುಂಬಕ್ಕೆ ಕ್ಲೀನ್ ಚಿಟ್ ಸಿಕ್ಕಿದೆ. ಆದ್ದರಿಂದ, ಧರ್ಮಸ್ಥಳದ ಜನರು 'ಸತ್ಯಕ್ಕೆ ಸಂದ ಜಯ' ಎಂಬ ಹೆಸರಿನಲ್ಲಿ ಸಂಭ್ರಮಾಚರಣೆ ನಡೆಸಲು ನಿರ್ಧರಿಸಿದ್ದಾರೆ.
2012ರ ಅಕ್ಟೋಬರ್ 10ರಂದು ನಡೆದ ವಿದ್ಯಾರ್ಥಿನಿ ಸೌಜನ್ಯ ಕೊಲೆ ಪ್ರಕರಣದ ತನಿಖೆ ನಡೆಸಿದ ಸಿಬಿಐ, ಪೊಲೀಸರಿಂದ ಬಂಧಿತರಾಗಿರುವ ಆರೋಪಿ ಸಂತೋಷ್ ರಾವ್ ಕೊಲೆ ಮಾಡಿದ್ದಾನೆ ಎಂದು ಕೋರ್ಟ್ಗೆ ಚಾರ್ಜ್ಶೀಟ್ ಸಲ್ಲಿಸಿದೆ.[ಸೌಜನ್ಯ ಅತ್ಯಾಚಾರ, ಕೊಲೆ: ಸಿಬಿಐ ಅಂತಿಮ ವರದಿ ಸಲ್ಲಿಕೆ]
ಈ ಕೊಲೆ ಪ್ರಕರಣದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಕುಟುಂಬದವರು ಮತ್ತು ಧರ್ಮಸ್ಥಳದ ನಾಗರಿಕರ ಪಾತ್ರವಿಲ್ಲ ಎಂಬುದು ಸಾಬೀತಾಗಿದೆ. ಆದ್ದರಿಂದ, ಆಗಸ್ಟ್ 19ರಂದು ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ಸತ್ಯಕ್ಕೆ ಸಂದ ಜಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.[ಸೌಜನ್ಯ ಕೊಲೆ ಪ್ರಕರಣ: ಸಿಬಿಐ ತನಿಖೆ]
ಧರ್ಮಸ್ಥಳ ಗ್ರಾಮ ಪಂಚಾಯಿತಿ ಅಧ್ಯಕ್ಷ ಚಂದನ್ ಕಾಮತ್ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ. 'ಸೌಜನ್ಯ ಕೊಲೆ ಪ್ರಕರಣದಲ್ಲಿ ಸಂತೋಷ್ ರಾವ್ ಎಂಬಾತನ ಪಾತ್ರವಿದೆ ಎಂದು ತನಿಖಾ ತಂಡ ಹೇಳಿದೆ. ಸೌಜನ್ಯ ತಂದೆ-ತಾಯಿ, ಕೆಮಾರು ಈಶವಿಠಲ ದಾಸ ಸ್ವಾಮೀಜಿ ಮುಂತಾದವರು ಹೆಗ್ಗಡೆ ಕುಟುಂಬ ಶಾಮೀಲಗಿದೆ ಎಂದು ಹೇಳಿಕೆ ನೀಡಿದ್ದರು' ಎಂದರು.[ಕೇಮಾರು ಶ್ರೀ ವಿಶೇಷ ಸಂದರ್ಶನ]
'ಸಿಐಡಿ ತನಿಖೆಯಲ್ಲಿ ಸಾಬೀತಾದಂತೆ ಸಂತೋಷ್ ರಾವ್ ಕೊಲೆ ನಡೆಸಿದ್ದಾನೆ ಎಂದು ಸಿಬಿಐ ಹೇಳಿದೆ. ಸಿಬಿಐ ತನಿಖಾ ವರದಿ ಬಂದ ಬಳಿಕ ಸತ್ಯಕ್ಕೆ ಜಯವಾಗಿದೆ. ಸಿಬಿಐ ವರದಿಯಿಂದ ಊರಿನವರಿಗೆಲ್ಲಾ ಸಂತೋಷವಾಗಿದೆ. ಇದಕ್ಕಾಗಿ ಸಂಭ್ರಮಾಚರಣೆ ನಡೆಸಲಾಗುವುದು' ಎಂದು ಹೇಳಿದರು.