ಮಂಗಳೂರು: ಪ್ರಾಂಶುಪಾಲರ ಮೇಲೆ ವಿದ್ಯಾರ್ಥಿ ಹಲ್ಲೆ
ಮಂಗಳೂರು, ಅಕ್ಟೋಬರ್ 22: ಹಾಜರಾತಿ ಕೊರತೆ ಇರುವುದರಿಂದ ಪರೀಕ್ಷೆ ಬರೆಯಲು ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಕ್ಕೆ ಪ್ರಾಂಶುಪಾಲರ ಮೇಲೆ ವಿದ್ಯಾರ್ಥಿಯೊಬ್ಬ ಹಲ್ಲೆ ಮಾಡಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಘಟನೆಯನ್ನು ಕ್ಯಾಥೋಲಿಕ್ ಸಭಾ ಖಂಡಿಸಿದ್ದು, ಸಭೆಯ ಅಧ್ಯಕ್ಷ ಅನಿಲ್ ಲೋಬೊ ಅವರು ಮೂರು ದಿನದೊಳಗೆ ವಿದ್ಯಾರ್ಥಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಇಲ್ಲಿಯ ಮಿಲಾಗ್ರಿಸ್ ಕಾಲೇಜಿನಲ್ಲಿ ಮೂರನೇ ವರ್ಷದ ಬಿಬಿಎಂ ಪದವಿಯಲ್ಲಿ ವ್ಯಾಸಾಂಗ ಮಾಡುತ್ತಿರುವ ಮೊಹಮ್ಮದ್ ಸಹನವಾವಾಜ್ ಎಂಬ ವಿದ್ಯಾರ್ಥಿ ಕಾಲೇಜಿಗೆ ಸರಿಯಾಗಿ ಬಾರದ ಕಾರಣ ಹಾಜರಾತಿ ಕೊರತೆ ಇತ್ತು.
ಈ ಕಾರಣದಿಂದಾಗಿ ಕಾಲೇಜಿನ ಪ್ರಾಂಶುಪಾಲರಾದ ಫಾ. ಮೈಕಲ್ ಸಾಂತುಮಾಯರ್ ಅವರು ' ನಿನಗೆ ಹಾಜರಾತಿ ಕೊರತೆ ಇದೆ ಆದ್ದರಿಂದ ಪರೀಕ್ಷೆ ಬರೆಯಲು ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾರೆ.
ಪರೀಕ್ಷೆ ಬರೆಯಲು ಪ್ರಾಂಶುಪಾಲರು ನಿರಾಕರಿಸಿದ್ದರಿಂದ ವಿದ್ಯಾರ್ಥಿಯು ಪ್ರಾಂಶುಪಾಲರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ.
ಹಲ್ಲೆಗೊಳಗಾದ ಪ್ರಾಂಶುಪಾಲರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕುರಿತು ಮಾತನಾಡಿದ ಅನಿಲ್ ಲೋಬೋ, ಪ್ರಿನ್ಸಿಪಾಲರ ಮೇಲೆ ನಡೆದಿರುವ ಈ ಹಲ್ಲೆಯಿಂದ ಕರಾವಳಿಯ ಶಿಕ್ಷಕರು ಭಯಭೀತರಾಗಿದ್ದಾರೆ ಎಂದು ಹೇಳಿದರು.
ವಿದ್ಯಾರ್ಥಿಗಳ ಸಣ್ಣ ತಪ್ಪಿಗೆ ಏರು ಧ್ವನಿಯಲ್ಲಿ ಮಾತನಾಡಿದರೂ , ಶಿಕ್ಷಕರ ಮೇಲೆ ಉಗ್ರ ಕ್ರಮ ಕೈಗೊಳ್ಳಲು ಹಲವಾರು ನಿಯಮಗಳನ್ನು ರೂಪಿಸಿರುವ ಸರ್ಕಾರ , ಶಿಕ್ಷಕರಿಗೆ ಸೂಕ್ತ ರಕ್ಷಣೆ ನೀಡುವಲ್ಲಿ ವಿಫಲವಾಗಿದೆ ಎಂದರು.
ಪಾಂಶುಪಾಲರ ಮೇಲೆ ಈ ರೀತಿಯ ಹೇಯ ಕೃತ್ಯವನ್ನು ಎಸಗಿರುವ ವಿದ್ಯಾರ್ಥಿ ಮೊಹಮ್ಮದ್ ಸಹನಾವಾಜ್ ನ ವಿರುದ್ದ ಶೀಘ್ರ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಪ್ರಾಂಶುಪಾಲರ ಮೇಲೆ ಹಲ್ಲೆ ನಡೆಸಿರುವುದು ಖಂಡನೀಯ . ಈ ಕೃತ್ಯ ಮುಂದೆಂದೂ ಮರುಕಳೀಸಬಾರದು ಹಾಗೆಯೇ ಮುಂದಿನ ಮೂರು ದಿನಗಳಲ್ಲಿ ವಿದ್ಯಾರ್ಥಿಯನ್ನು ಬಂಧಿಸಿ ಶಿಕ್ಷಕರಿಗೆ ನ್ಯಾಯ ಒದಗಿಸದೇ ಹೋದಲ್ಲಿ ದ.ಕ, ಉಡುಪಿ ಹಾಗೂ ಕಾಸರಗೋಡು ಜಿಲ್ಲೆಗಳಲ್ಲಿ ಕ್ರೈಸ್ತ್ ವಿದ್ಯಾಸಂಸ್ಥೆಗಳನ್ನು ಮುಚ್ಚಿ ಪ್ರತಿಭಟನೆ ನಡೆಸಲಾಗುವುದು ಎಂದರು.