'ದೇವಾಲಯದ ಹೊರಗಿನ ಧಾರ್ಮಿಕ ವಿಧಿವಿಧಾನಗಳ ಬಗ್ಗೆ ಟೀಕೆ ಸರಿಯಲ್ಲ'
ಮಂಗಳೂರು, ಆಗಸ್ಟ್ 03: ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ಮಠ, ದೇವಸ್ಥಾನ ಹಾಗೂ ಭಕ್ತರ ನಡುವೆ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮಂಡಳಿ ಮತ್ತು ಧಾರ್ಮಿಕ ದತ್ತಿ ಇಲಾಖೆ ಹಸ್ತಕ್ಷೇಪ ಮಾಡಬಾರು ಎಂದು ಕನ್ಯಾನ ಬಾಳೆಕೋಡಿಯ ಮಠದ ಶ್ರೀ ಶಶಿಕಾಂತ ಮಣಿಸ್ವಾಮಿ ಒತ್ತಾಯಿಸಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇವಸ್ಥಾನದ ಹೊರಗೆ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲು ದೇವಸ್ಥಾನದ ಆಡಳಿತ ಸಮಿತಿಯ ಸದಸ್ಯರು ಆಕ್ಷೇಪಿಸುತ್ತಿರುವುದು ಸರಿಯಲ್ಲ.
ಶಬರಿಮಲೆ ದೇವಸ್ಥಾನ: ಮಹಿಳೆಯರಿಗೆ ಪ್ರವೇಶ ನೀಡಲು ಕೇರಳ ಸರ್ಕಾರ ಒಲವು
ಧಾರ್ಮಿಕ ದತ್ತಿ ಇಲಾಖೆಯ ನಿಯಮಾನುಸಾರವೇ ಶ್ರೀ ಕ್ಷೇತ್ರ ಸುಬ್ರಹ್ಮಣ್ಯ ದೇವಾಲಯದಲ್ಲಿ ಕಾರ್ಯಕ್ರಮಗಳು ನಡೆಯುತ್ತಿವೆ. ಆದರೆ ದೇವಾಲಯದ ಹೊರಗೆ ನಡೆಯುವ ಕಾರ್ಯಕ್ರಮಗಳಿಗೆ ದೇವಾಲಯದ ಆಡಳಿತ ಮಂಡಳಿ ಹಾಗು ಧಾರ್ಮಿಕ ದತ್ತಿ ಇಲಾಖೆ ಅಡ್ಡಿಪಡಿಸುವುದು ಸರಿಯಲ್ಲ ಎಂದು ಹೇಳಿದರು.
ದೇವಾಲಯದ ಹೊರಗೆ ನಡೆಯುವ ಧಾರ್ಮಿಕ ವಿಧಿವಿಧಾನಗಳ ಬಗ್ಗೆ ಆಕ್ಷೇಪ, ಟೀಕೆ ಸರಿಯಲ್ಲ ಎಂದು ಹೇಳಿದ ಅವರು ಧಾರ್ಮಿಕ ದತ್ತಿ ಇಲಾಖೆಯ ಅಧೀನಕ್ಕೆ ಒಳಪಟ್ಟ ದೇವಸ್ಥಾನದಲ್ಲಿ ಯಾವುದೇ ಸೇವೆಗೆ ಭಕ್ತರು ಅಡ್ಡಿಪಡಿಸಿಲ್ಲ.
ಹೊರಗೆ ಭಕ್ತರ ಇಷ್ಟಪ್ರಕಾರ ನಾಗಪ್ರತಿಷ್ಠೆ, ಆಶ್ಲೇಷಬಲಿ, ಸರ್ಪಸಂಸ್ಕಾರ ಸೇವೆಗಳು ನಡೆಯುತ್ತವೆ. ಈ ಸೇವೆಗಳು ದೇವಸ್ಥಾನ ವತಿಯಿಂದಲೂ ನಡೆಯುತ್ತಿದೆ. ಇದು ಭಕ್ತರ ಇಚ್ಛೆಗೆ ಸಂಬಂಧಿಸಿದ ವಿಚಾರವಾಗಿದೆ ಎಂದು ಅವರು ಆಭಿಪ್ರಾಯಪಟ್ಟರು .
ಆದರೆ ದೇವಸ್ಥಾನದ ಆಡಳಿತ ಮಂಡಳಿಯ ಕೆಲವು ಸದಸ್ಯರು ಹಾಗೂ ಧಾರ್ಮಿಕ ದತ್ತಿ ಇಲಾಖೆ ಅಧಿಕಾರಿಗಳು ವಿನಾ ಕಾರಣ ಭಕ್ತರ ಹಾಗೂ ಮಠದ ವಿಚಾರದಲ್ಲಿ ಮೂಗುತೂರಿಸುತ್ತಿದೆ ಎಂದು ಅವರು ಆರೋಪಿಸಿದರು.
ಶ್ರೀ ಕ್ಷೇತ್ರದ ಮಠ ಹಾಗೂ ಮೂಲ ನಿವಾಸಿಗಳಾದ ಮಲೆಕುಡಿಯರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಕೆಲಸವನ್ನು ಮಾಡಬಾರದು ಎಂದು ಹೇಳಿದ ಅವರು ನಾನು ಕೂಡ ದಲಿತ ಸಮುದಾಯದಿಂದ ಬಂದ ಸ್ವಾಮೀಜಿ. ನಮ್ಮವರ ಕಟ್ಟುಪಾಡುಗಳಿಗೆ ದೇವಸ್ಥಾನದಿಂದ ತೊಂದರೆಯಾಗಬಾರದು ಎಂದು ಸ್ವಾಮೀಜಿ ಹೇಳಿದರು.