ಮಂಗಳೂರು : ಶ್ರೀರಾಮಸೇನೆಯಿಂದ ಶಾಲೆ ಮೇಲೆ ದಾಳಿ
ಮಂಗಳೂರು, ಜುಲೈ 30 : ಶ್ರೀರಾಮಸೇನೆಯ ಕಾರ್ಯಕರ್ತರು ಶಾಲೆಯಲ್ಲಿ ಒತ್ತಾಯಪೂರ್ವಕವಾಗಿ ಉರ್ದು ಮತ್ತು ಅರೇಬಿಕ್ ಭಾಷೆಗಳನ್ನು ಕಲಿಸಲಾಗುತ್ತಿದೆ ಎಂದು ಆರೋಪಿಸಿ ನಗರದ ಹೊರವಲಯದ ನೀರುಮಾರ್ಗ ಸಮೀಪದ ಪಡುಬೊಂತಿಲ ಎಂಬಲ್ಲಿರುವ ಖಾಸಗಿ ಶಾಲೆಯೊಂದಕ್ಕೆ ದಾಳಿ ನಡೆಸಿದರು.
ಪಡು ಬೊಂಡಂತಿಲದಲ್ಲಿರುವ ಸೈಂಟ್ ಥೊಮಸರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸುಮಾರು ಆರು ತಿಂಗಳಿನಿಂದ ಅರೇಬಿಕ್ ಮತ್ತು ಉರ್ದು ಭಾಷೆಗಳನ್ನು ಕಲಿಸಲಾಗುತ್ತಿದೆ ಎಂಬುದು ಆರೋಪ. ಶಾಲೆಯಲ್ಲಿ ಸುಮಾರು 100 ಮಕ್ಕಳಿದ್ದಾರೆ.[ತಂದೆಯ ಜೊತೆ ಕೂಲಿ ಮಾಡುತ್ತಿದ್ದ ಬಾಲಕ ಶಾಲೆ ಸೇರಿದ]
ಶಾಲೆಯಲ್ಲಿ ಕ್ರೈಸ್ತ ಹಾಗೂ ಹಿಂದೂ ಧರ್ಮದ ಮಕ್ಕಳಿದ್ದಾರೆ. ಅವರಿಗೂ ಸಹ ಈ ಅರೇಬಿಕ್ ಮತ್ತು ಉರ್ದು ಭಾಷೆಗಳನ್ನು ಕಲಿಸಲಾಗುತ್ತಿದೆ ಎಂದು ಆರೋಪಿಸಲಾಗಿದೆ. ಅವರಿಗೆ ಈ ಭಾಷೆಯ ಪಠ್ಯ ಪುಸ್ತಕಗಳನ್ನು ನೀಡಲಾಗುತ್ತಿದ್ದು ಈ ಕುರಿತು ಮಕ್ಕಳು ತಮ್ಮ ಪೋಷಕರಿಗೆ ತಿಳಿಸಿದ್ದರು. ಅವರು ಶ್ರೀರಾಮಸೇನೆಯ ಕಾರ್ಯಕರ್ತರಿಗೆ ಈ ಕುರಿತು ವಿಷಯ ತಿಳಿಸಿದ್ದರು.[ಮಂಗಳೂರು : ಶಾಲಾ ಬಸ್ಸುಗಳ ಮೇಲೆ ಪೊಲೀಸರು ಕಣ್ಣು]
ಈ ದಾಳಿ ಪ್ರಕರಣದ ಬಗ್ಗೆ ಇದುವರೆಗೂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಲಿಲ್ಲ. ಆದರೆ, ಶಾಲೆಗೆ ಪೊಲೀಸರು ಬಿಗಿ ಬಂದೋಬಸ್ತ್ ಒದಗಿಸಿದ್ದಾರೆ.
ಅರೇಬಿಕ್ ಕಳಿಸಬೇಡಿ
ಶ್ರೀರಾಮಸೇನೆಯ ಸುಮಾರು 50 ರಿಂದ 60 ಕಾರ್ಯಕರ್ತರು ಶಾಲೆಗೆ ನುಗ್ಗಿ ಮಕ್ಕಳಿಗೆ ಅರೇಬಿಕ್ ಭಾಷೆ ಕಳಿಸದಂತೆ ಆಗ್ರಹಿಸಿದ್ದಾರೆ. ಶಾಲೆಯ ಮುಖ್ಯೋಪಾದ್ಯಾಯರಿಗೂ ಈ ಕುರಿತು ಒತ್ತಾಯಿಸಿದ್ದಾರೆ. ಇದಲ್ಲದೆ ತರಗತಿಗೆ ನುಗ್ಗಿ ಪುಸ್ತಕಗಳನ್ನು ತೆಗೆದುಕೊಂಡು ಹೋಗಿದ್ದಾರೆ.
ಆಸಕ್ತ ವಿದ್ಯಾರ್ಥಿಗಳು ಕಲಿಯಬಹುದು
ಈ ಕುರಿತು ಪ್ರತಿಕ್ರಿಯೆ ನೀಡಿರುವ ಶಾಲಾ ಮುಖ್ಯೋಪಾಧ್ಯಾಯ ಮೆಲ್ವಿನ್ ಅವರು, 'ಕಳೆದ 2 ವರ್ಷಗಳಿಂದ ಶಾಲೆಯಲ್ಲಿ 6 ಮತ್ತು 7 ತರಗತಿ ವಿದ್ಯಾರ್ಥಿಗಳಿಗೆ ಫ್ರೆಂಚ್, ಜರ್ಮನಿ, ಅರೇಬಿಕ್ ಮತ್ತು ಕರಾಟೆ ತರಗತಿಗಳನ್ನು ನಡೆಸುತ್ತಿದ್ದೇವೆ. ಆಸಕ್ತ ವಿದ್ಯಾರ್ಥಿಗಳು ಮಾತ್ರ ಇದಕ್ಕೆ ಸೇರಬಹುದಾಗಿದೆ. ಯಾರನ್ನೂ ಒತ್ತಾಯಪೂರ್ವಕವಾಗಿ ತರಗತಿಗಳಿಗೆ ಸೇರಿಸಲಿಲ್ಲ' ಎಂದು ಹೇಳಿದ್ದಾರೆ.
ಹೆಚ್ಚುವರಿ ಶುಲ್ಕವನ್ನು ವಸೂಲಿ ಮಾಡಿಲ್ಲ
ವಿದ್ಯಾರ್ಥಿಗಳಿಂದ ಹೆಚ್ಚುವರಿ ಶುಲ್ಕವನ್ನು ವಸೂಲಿ ಮಾಡಿಲ್ಲ. ಒಟ್ಟು 59 ವಿದ್ಯಾರ್ಥಿಗಳ ಪೈಕಿ 49 ವಿದ್ಯಾರ್ಥಿಗಳು ಈ ತರಬೇತಿಗೆ ಸೇರಿದ್ದಾರೆ. ಈವರೆಗೆ ನಾವು ಉರ್ದು ಭಾಷಾ ತರಗತಿಗಳನ್ನು ನಡೆಸಿಲ್ಲ ಎಂದು ಶಾಲೆಯವರು ಸ್ಪಷ್ಟನೆ ನೀಡಿದ್ದಾರೆ.
ಪ್ರಕರಣ ದಾಖಲಾಗಲಿಲ್ಲ
ಶ್ರೀರಾಮಸೇನೆಯ ಕಾರ್ಯಕರ್ತರು ಉರ್ದು ಮತ್ತು ಅರೇಬಿಕ್ ಭಾಷೆಗಳನ್ನು ಮಕ್ಕಳಿಗೆ ಕಲಿಸದಂತೆ ಒತ್ತಡ ಹೇರಿದ್ದಾರೆ. ಇದುವರೆಗೂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಲಿಲ್ಲ. ಆದರೆ, ಶಾಲೆಗೆ ಪೊಲೀಸರು ಬಂದೋಬಸ್ತ್ ಒದಗಿಸಿದ್ದಾರೆ.