ದಕ್ಷಿಣ ಕನ್ನಡ ಜಿಲ್ಲೆಯ ಫೈರ್ ಬ್ರಾಂಡ್ ಸ್ವಾಮೀಜಿ ಚುನಾವಣಾ ಅಖಾಡಕ್ಕೆ
ಮಂಗಳೂರು, ನವೆಂಬರ್ 1: ದಕ್ಷಿಣ ಕನ್ನಡ ಜಿಲ್ಲೆಯ ಫೈರ್ ಬ್ರಾಂಡ್ ಸ್ವಾಮೀಜಿ ಎಂದೇ ಖ್ಯಾತಿ ಪಡೆದಿರುವ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ರಾಜಕೀಯ ಅಖಾಡಕ್ಕೆ ಧುಮುಕಲು ನಿರ್ಧರಿಸಿದ್ದಾರೆ.
ಮುಂಬರುವ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ತೀರ್ಮಾನಿಸಿದ್ದಾರೆ. ಈ ಮೂಲಕ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಪ್ರಭಾವ ರಾಜ್ಯದ ರಾಜಕೀಯದ ಮೇಲೆ ಬೀಳುತ್ತಿರುವುದು ಈಗ ಗೋಚರಿಸುತ್ತಿದೆ.
ಕರ್ನಾಟಕ ವಿಧಾನಸಭಾ ಚುನಾವಣೆ: ಮೈಸೂರಿನ ಮೇಲೇ ಎಲ್ಲರ ಕಣ್ಣು!
ಉತ್ತರಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಮುಖ್ಯಮಂತ್ರಿ ಆದ ಬಳಿಕ ಕರ್ನಾಟಕದಲ್ಲಿಯೂ ಅನೇಕ ಸಂತರಿಗೆ ರಾಜ್ಯವನ್ನು ಹಿಂದುತ್ವದ ಆಧಾರದ ಮೇಲೆ ಮುನ್ನಡೆಸಬೇಕೆಂಬ ಮಹತ್ವಾಕಾಂಕ್ಷೆ ಬಂದಿರುವುದು ಸುಳ್ಳಲ್ಲ.
ಚುನಾವಣಾ ಕಣಕ್ಕೆ ವಜ್ರದೇಹಿ ಮಠದ ಸ್ವಾಮೀಜಿ
ಇದಕ್ಕೆ ಪೂರಕ ಎನ್ನುವಂತೆ ಮಂಗಳೂರು ಹೊರವಲಯದ ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಮುಂದಿನ ಚುನಾವಣೆಯಲ್ಲಿ ಬಿಜೆಪಿಯಿಂದ ಕಣಕ್ಕಿಳಿಯಲು ನಿರ್ಧರಿಸಿದ್ದಾರೆ.
ಸ್ವಾಮೀಜಿ ಕಣಕ್ಕಿಳಿಸಲು ಸಂಘ ಪರಿವಾರ ತೀರ್ಮಾನ
ರಾಜಶೇಖರಾನಂದ ಸ್ವಾಮೀಜಿ ಅವರನ್ನು ಸ್ಪರ್ಧೆಗೆ ಇಳಿಸಲು ಸಂಘ ಪರಿವಾರದ ಸಂಘಟನೆಗಳು ಈಗಾಗಲೇ ತೀರ್ಮಾನ ಕೈಗೊಂಡಿದ್ದು ಈಗಾಗಲೇ ಬಿಜೆಪಿಯ ಉನ್ನತ ಮಟ್ಟದ ನಾಯಕರು ವಜ್ರದೇಹಿ ಸ್ವಾಮೀಜಿ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ ಎಂದು ಹೇಳಲಾಗಿದೆ .
ಹಿಂದುತ್ವದ ನೆಲೆಯಲ್ಲಿ ಸ್ಪರ್ಧೆ
ಈ ಕುರಿತು 'ಒನ್ಇಂಡಿಯಾ'ದೊಂದಿಗೆ ಮಾತನಾಡಿದ ರಾಜಶೇಖರಾನಂದ ಸ್ವಾಮೀಜಿ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಮನದಾಳವನ್ನು ಬಿಚ್ಚಿಟ್ಟರು.
"ರಾಜ್ಯದಲ್ಲಿ ಹಿಂದುತ್ವದ ಬಗ್ಗೆ ಹೆಚ್ಚಿನ ಕೆಲಸ ಕಾರ್ಯಗಳಾಗಿಲ್ಲ. ಈ ಹಿನ್ನೆಲೆಯಲ್ಲಿ ಹಿಂದುತ್ವದ ನೆಲೆಯಲ್ಲಿ ಮುಂದಿನ ಚುನಾವಣೆಗೆ ಬಿಜೆಪಿಯಿಂದ ಸ್ಪರ್ಧಿಸಲು ನಿರ್ಧರಿಸಿದ್ದೇನೆ," ಎಂದು ಅವರು ಹೇಳಿದರು.
ಯಾವ ಕ್ಷೇತ್ರದಲ್ಲಿ ನಿಂತರೂ ಗೆಲುವು
"ಹಿಂದೂ ಸಂಘಟನೆಗಳ ಕಾರ್ಯಕರ್ತರು ಹಾಗೂ ಮುಖಂಡರ ಅಪೇಕ್ಷೆ ಮತ್ತು ಒತ್ತಾಯದ ಹಿನ್ನಲೆಯಲ್ಲಿ ಈ ತೀರ್ಮಾನ ಕೈಗೊಂಡಿದ್ದೇನೆ. ದಕ್ಷಿಣ ಕನ್ನಡ ಜಿಲ್ಲೆಯ ಯಾವ ಕ್ಷೇತ್ರ ನೀಡಿದರೂ ಸ್ಪರ್ಧಿಸಿ ಗೆಲ್ಲುವ ವಿಶ್ವಾಸವಿದೆ," ಎಂದು ಅವರು ತಿಳಿಸಿದರು.
"9 ತಿಂಗಳ ಹಿಂದೆಯೇ ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಪ್ರಸ್ತಾಪ ಮಾಡಲಾಗಿತ್ತು. ಆ ಬಗ್ಗೆ ಸುಧೀರ್ಘ ಚರ್ಚೆ, ಸಮಾಲೋಚನೆ ನಡೆಸಿದ ಬಳಿಕ ಈಗ ತೀರ್ಮಾನ ಕೈಗೊಳ್ಳಲಾಗಿದೆ," ಎಂದು ವಜ್ರದೇಹಿ ಮಠದ ಸ್ವಾಮೀಜಿ ಹೇಳಿದರು.