ಮಂಗಳೂರಿನಲ್ಲಿ ಸೆಪ್ಟೆಂಬರ್ 13ರಂದು ಶ್ರೀ ಕೃಷ್ಣ ವೇಷ ಸ್ಪರ್ಧೆ
ಮಂಗಳೂರು, ಸೆಪ್ಟೆಂಬರ್ 10: ಕೃಷ್ಣಾಷ್ಟಮಿ ಪ್ರಯುಕ್ತ ಕಳೆದ ಮೂರು ದಶಕಗಳಿಂದ ಶ್ರೀಕೃಷ್ಣ ವೇಷ ಸ್ಪರ್ಧೆಗೆ ವೇದಿಕೆಯಾಗಿರುವ ಕಲ್ಕೂರ ಪ್ರತಿಷ್ಠಾನ ಈ ಬಾರಿ ಸೆಪ್ಟೆಂಬರ್ 13 ರಂದು ಶ್ರೀ ಕೃಷ್ಣ ವೇಷ ಸ್ಪರ್ಧೆ ಏರ್ಪಡಿಸಿದೆ.
ನಗರದ ಕದ್ರಿ ಶ್ರೀ ಮಂಜುನಾಥ ದೇವಾಲಯದ ಆವರಣದಲ್ಲಿ ನಡೆಯಲಿರುವ ಈ ಸ್ಪರ್ಧೆಯಲ್ಲಿ ಈ ಬಾರಿ 3 ಸಾವಿರಕ್ಕೂ ಅಧಿಕ ಚಿಣ್ಣರು ಭಾಗವಹಿಸುವ ನಿರೀಕ್ಷೆಯಿದೆ .
ಈ ಕುರಿತು ಮಂಗಳೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಸೆಪ್ಟೆಂಬರ್ 13 ರಂದು ಕೃಷ್ಣಾಷ್ಟಮಿ ಪ್ರಯುಕ್ತ ನಡೆಯುವ ರಾಷ್ಟ್ರಮಟ್ಟದ ಮಕ್ಕಳ ಉತ್ಸವ ಶ್ರೀಕೃಷ್ಣ ವೇಷ ಸ್ಪರ್ಧೆ ಈ ಬಾರಿ 28 ವಿಭಾಗಗಳಲ್ಲಿ ನಡೆಯಲಿದೆ ಎಂದು ಹೇಳಿದರು .
8 ವೇದಿಕೆಗಳಲ್ಲಿ ಏಕಕಾಲಕ್ಕೆ ಈ ಸ್ಪರ್ಧೆಗಳು ನಡೆಯಲಿದ್ದು ಇದರೊಂದಿಗೆ ವಿವಿಧ ಸಾಹಿತ್ಯಿಕ , ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಈ ರಾಷ್ಟ್ರೀಯ ಮಕ್ಕಳ ಉತ್ಸವದಲ್ಲಿ ಏರ್ಪಡಿಸಲಾಗಿದೆ ಎಂದು ತಿಳಿಸಿದರು .
ಈ ಬಾರಿ ಕಂದ ಕೃಷ್ಣ, ಮುದ್ದು ಕೃಷ್ಣ, ತುಂಟ ಕೃಷ್ಣ, ಬಾಲಕೃಷ್ಣ, ಕಿಶೋರ ಕೃಷ್ಣ, ಶ್ರೀ ಕೃಷ್ಣ, ಗೀತಾ ಕೃಷ್ಣ, ಯಕ್ಷ ಕೃಷ್ಣ, ರಾಧಾಕೃಷ್ಣ ಯಶೋಧ ಕೃಷ್ಣ ಸೇರಿದಂತೆ ಒಟ್ಟು 28 ವಿಭಾಗದಲ್ಲಿ ಈ ಸ್ಪರ್ಧೆ ನಡೆಯಲಿದೆ ಎಂದವರು ಸ್ಪಷ್ಟಪಡಿಸಿದರು.
ರಂಗೋಲಿಯಲ್ಲಿ ಶ್ರೀಕೃಷ್ಣ ರಚನೆ, ಛಾಯಾಚಿತ್ರಗಾರರಿಗಾಗಿ ಛಾಯಾ ಕೃಷ್ಣ ಸ್ಪರ್ಧೆ , ಶ್ರೀಕೃಷ್ಣ ವರ್ಣ ವೈಭವ ಚಿತ್ರ ರಚನಾ ಸ್ಪರ್ಧೆ ಕೂಡ ಈ ಸಂದರ್ಭದಲ್ಲಿ ನಡೆಯಲಿದೆ ಎಂದು ಅವರು ತಿಳಿಸಿದರು.