ಉಡುಪಿಯಲ್ಲಿ ವೈಭವೋಪೇತ ವಿಟ್ಲಪಿಂಡಿ ಉತ್ಸವ
ಉಡುಪಿ, ಸೆಪ್ಟೆಂಬರ್, 07 : ಶ್ರೀ ಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ ಶ್ರೀ ಕೃಷ್ಣ ಮಠದಲ್ಲಿ ವಿಟ್ಲಪಿಂಡಿ ಉತ್ಸವ ಬಹಳ ವೈಭವದಿಂದ ಭಾನುವಾರ ನಡೆಯಿತು. ಸಹಸ್ರಾರು ಭಕ್ತರು ಈ ಉತ್ಸವದಲ್ಲಿ ಪಾಲ್ಗೊಂಡು ಉತ್ಸವದ ಸೊಬಗನ್ನು ಕಣ್ತುಂಬಿಕೊಂಡರು.
ವಿಟ್ಲಪಿಂಡಿ ಉತ್ಸವದಲ್ಲಿ ಮಣ್ಣಿನಿಂದ ತಯಾರಿಸಿದ ಶ್ರೀಕೃಷ್ಣ ಮೂರ್ತಿಯನ್ನು ಚಿನ್ನದ ರಥದಲ್ಲಿ, ಅನಂತೇಶ್ವರ ಹಾಗೂ ಚಂದ್ರ ಮೌಳೀಶ್ವರ ಉತ್ಸವ ಮೂರ್ತಿಗಳನ್ನು ರತ್ನದ ರಥದಲ್ಲಿರಿಸಿ ಮೆರವಣಿಗೆ ನಡೆಸಲಾಯಿತು.[ಯಕ್ಷ-ಗಾನ-ಯಾನ : ಬಾರ್ಕೂರು ಸುರೇಶ ಭಾಗವತರ ಸಂದರ್ಶನ]
ಈ ಉತ್ಸವದಲ್ಲಿ ಪರ್ಯಾಯ ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು, ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು, ಶಿರೂರು ಮಠದ ಶ್ರೀ ಲಕ್ಷ್ಮೀವರ ತೀರ್ಥ ಶ್ರೀ ಪಾದರು ಈ ಉತ್ಸವದಲ್ಲಿ ಪಾಲ್ಗೊಂಡಿದ್ದರು.
ನೆಟ್ಟ ಗುರ್ಜಿಗಳಲ್ಲಿ ತೂಗು ಹಾಕಿದ ಮಡಕೆಗಳನ್ನು ಸಾಂಪ್ರದಾಯಿಕ ಗೊಲ್ಲರ ವೇಷಧಾರಿಗಳು ಒಡೆಯುತ್ತ ಸಾಗಿದಂತೆ ಮೆರವಣಿಗೆಯೂ ಬಹಳ ಭಕ್ತಿಪೂರ್ವಕವಾಗಿ ಮುಂದೆ ಸಾಗಿತು. ಉತ್ಸವ ಮುಗಿದ ಬಳಿಕ ಮಣ್ಣಿನ ಮೂರ್ತಿಗಳನ್ನು ಮಧ್ವ ಸರೋವರದಲ್ಲಿ ವಿಸರ್ಜಿಸಲಾಯಿತು.
ಈ ಸಂಭ್ರಮದ ವೈಭವದಲ್ಲಿ ನೂರಾರು ಹುಲಿವೇಷಧಾರಿಗಳು ನಗರದಲ್ಲಿ ಕಂಡು ಬಂದರು. ಅಲ್ಲದೇ ಹೆಣ್ಣುಹುಲಿಗಳು ಈ ಬಾರಿಯ ವಿಶೇಷ ಆಕರ್ಷಣೆಯಾಗಿದ್ದು, ಮಹಿಳೆಯರು ಬಹಳ ಉತ್ಸಾಹದಿಂದ ಉತ್ಸವದಲ್ಲಿ ಪಾಲ್ಗೊಂಡಿದ್ದರು.
ಗಡಿಕಾಯುವ ಸೈನಿಕರ ನೈತಿಕ ಬೆಂಬಲ ನೀಡುವ ಗುರಿ ಇರಿಸಿಕೊಂಡ ಹೆರ್ಗ ಗೋಳಿಕಟ್ಟೆ ಫ್ರೆಂಡ್ಸ್ ತಂಡದ ಹುಲಿವೇಷ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಯಿತು. ಇದರಲ್ಲಿ ಸಂಗ್ರಹವಾದ ಹಣವನ್ನು ಸಿಯಾಚಿನ್ ಗಡಿಕಾಯುವ ಯೋಧರಿಗೆ ಕೊಡಲಾಗುವುದು ಎಂದು ಸಂಸ್ಥೆಯ ಸಂಚಾಲಕ ಹೆರ್ಗ ದಿನಕರ ಶೆಟ್ಟಿ ತಿಳಿಸಿದ್ದಾರೆ.