ನೋಡು ಬಾರಾ ಮಂಗಳೂರು ದಸರಾ ಸೊಬಗು..!
ಮಂಗಳೂರು. ಸೆಪ್ಟೆಂಬರ್ 22 : ಮಂಗಳೂರು ದಸರಾ ಉತ್ಸವಕ್ಕೆ ಈಗಾಗಲೇ ಚಾಲನೆ ದೊರೆತಿದ್ದು, ಕರಾವಳಿಯ ಸುಂದರ ನಗರಿ ಮಂಗಳೂರು ನಗರದಲ್ಲಿ ಈಗ ನವರಾತ್ರಿಯ ಸಂಭ್ರಮ ಸಡಗರ ಮನೆ ಮಾಡಿದೆ.
ಮೈಸೂರಿನಂತೆಯೇ ಮಂಗಳೂರು ದಸರಾ ಉತ್ಸವ ವಿಜೃಂಭಣೆಯಿಂದ ನಡೆಯುತ್ತದೆ. ದಸರಾ ಉತ್ಸವದ ಅಂಗವಾಗಿ ಮಂಗಳೂರಿನ ಕುದ್ರೋಳಿಯ ಗೋಕರ್ಣನಾಥೇಶ್ವರ ದೇವಾಲಯದಲ್ಲಿ ಸ್ವರ್ಗವೇ ಧರೆಗಿಳಿದು ಬಂದಂತೆ ಬಾಸವಾಗುತ್ತಿದೆ. ದೇವಾಲಯದಲ್ಲಿ ಪ್ರತಿಷ್ಠಾಪಿಸಲಾದ ನವದುರ್ಗೆಯರ ಮೂರ್ತಿಗಳು ವಿಶೇಷ ಮೆರಗು ನೀಡಿದೆ. ಮಂಗಳೂರು ದಸರಾದ ವಿಜೃಂಭಣೆ ವಿಕ್ಷಿಸಲು ಜನಸಾಗರವೇ ಹರಿದು ಬರುತ್ತಿದೆ.
ನವರಾತ್ರಿ ಬಂತಂದ್ರೆ ಸಾಕು ಕಡಲ ನಗರಿಯಲ್ಲಿ 'ಪಿಲಿ ಡ್ಯಾನ್ಸ್' ಸಂಭ್ರಮ
ವರ್ಷದಿಂದ ವರ್ಷಕ್ಕೆ ಈ ನವರಾತ್ರಿಯ ವೈಭವ ಮಂಗಳೂರಿನಲ್ಲಿ ವೃದ್ದಿಸುತ್ತಲೇ ಇದೆ. ಮೈಸೂರು ದಸರಾಕ್ಕೆ ಅರಮನೆ ಮೆರಗು ನೀಡಿದರೆ ಮಂಗಳೂರು ದಸರಾಕ್ಕೆ ಕುದ್ರೋಳಿ ಗೋಕರ್ಣನಾಥ ದೇವಾಲಯದ್ದೇ ದರ್ಬಾರು. ಮೈಸೂರಲ್ಲಿ ಚಾಮುಂಡೇಶ್ವರಿ ಅಗ್ರದೇವತೆಯಾದರೆ, ಮಂಗಳೂರು ದಸರಾಕ್ಕೆ ಶಾರದ ಮಾತೆಯೊಂದಿಗೆ ಶಕ್ತಿಯ ಪ್ರತೀಕವಾಗಿರುವ ನವದುರ್ಗೆಯರೇ ಧರೆಗಿಳಿದು ಬಂದಿದ್ದಾರೆ.
ಮಂಗಳೂರಿನ ಶ್ರೀ ಕ್ಷೇತ್ರ ಕುದ್ರೋಳಿ ಗೋಕರ್ಣನಾಥ ದೇವಾಲಯದಲ್ಲಿ ಶಾರದ ಮಾತೆಯೊಂದಿಗೆ ಶಕ್ತಿಯ ರೂಪಗಳಾದ ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟ, ಕೂಷ್ಮಾಂಡಿನಿ, ಸ್ಕಂದಮಾತಾ, ಕಾತ್ಯಾಯಿನಿ, ಮಹಾಕಾಳಿ, ಮಹಾಗೌರಿ ಮತ್ತು ಸಿದ್ದಿಧಾತ್ರಿ ಹಾಗೂ ವಿಘ್ನನಿವಾರಕ ಗಣೇಶನನ್ನು ಇಲ್ಲಿ ಪ್ರತಿಷ್ಟಾಪಿಸಿ ವೈಭವಯುತವಾಗಿ 9 ದಿನಗಳ ಕಾಲ ಆರಾಧಿಸಲ್ಪಡುತ್ತಿರುವುದು ಇಲ್ಲಿನ ವೈಶಿಷ್ಟ್ಯ.
ಮೈಸೂರಿನಲ್ಲಿ ನಡೆಯುವಂತೆ ಇಲ್ಲಿಯೂ ವಿವಿಧ ಸಾಂಸ್ಕಂತಿಕ ಕಾರ್ಯಕ್ರಮಗಳು ಸಾಹಿತ್ಯ ಕಲಾ ಸ್ಪರ್ಧೆಗಳು ನಡೆಯುತ್ತವೆ. ಮುಂಬರುವ ದಿನಗಳಲ್ಲಿ ಮಂಗಳೂರು ದಸರಾ ಕೂಡ ಮೈಸೂರಿನಷ್ಟೇ ಪ್ರಸಿದ್ಧಿ ಪಡೆಯಲಿದೆ ಎನ್ನುವ ಅಭಿಪ್ರಾಯ ಮಂಗಳೂರಿಗರದ್ದಾಗಿದೆ.
ನವದುರ್ಗೆಯರ ಮಂಟಪ ನೋಡುವುದೇ ಕಣ್ಣಿಗೆ ಹಬ್ಬ
ದಸರಾ ಉತ್ಸವ ಸಂದರ್ಭದಲ್ಲಿ ನವದುರ್ಗೆಯರನ್ನು ಪ್ರತಿಷ್ಠಾಪಿಸಲಾದ ಮಂಟಪವನ್ನು ನೋಡುವುದೇ ಕಣ್ಣಿಗೆ ಹಬ್ಬ. ಸ್ವರ್ಣಮಯ ಮಂಟಪದಲ್ಲಿ ರಂಗುರಂಗಿನ ಅಲಂಕಾರದ ನಡುವೆ ನವದುರ್ಗೆಯರನ್ನು ನೋಡುವುದು ಸ್ವರ್ಗವೇ ಧರೆಗಿಳಿದಂತೆ ಭಾಸವಾಗುತ್ತದೆ. ಪ್ರತಿವರ್ಷ ನವದುರ್ಗೆಯರ ಮಂಟಪದ ಸ್ವರೂಪ ಬದಲಾಗುತಿದ್ದು ಪ್ರತಿವರ್ಷ ಬೇರೆ ಬೇರೆ ರೂಪದಲ್ಲಿ ಸಿಂಗಾರ ಮಾಡಲಾಗುತ್ತಿದೆ. ಶಕ್ತಿಯ ರೂಪಗಳಾದ ನವದುರ್ಗೆಯರನ್ನು ಪ್ರತಿಷ್ಠಾಪಿಸಿ ನವರಾತ್ರಿಯನ್ನು ಆಚರಿಸುವುದು ಮಂಗಳೂರು ದಸರಾದ ವೈಶಿಷ್ಟ್ಯ.
ದೇವಾಲಯದ ಇತಿಹಾಸ
ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎಂಬ ವಿಶ್ವ ಮಾನವ ತತ್ವವನ್ನು ಸಾರಿದ ಬ್ರಹ್ಮಶ್ರೀ ನಾರಾಯಣಗುರು ಅವರಿಂದ ಪ್ರತಿಷ್ಠಾಪಿಸಲ್ಪಟ್ಟ ಕುದ್ರೋಳಿ ಗೋಕರ್ಣನಾಥ ದೇವಾಲಯಕ್ಕೆ ಈಗ 105 ವರ್ಷ. ಹಿಂದೂ ಧರ್ಮದಲ್ಲಿನ ಅಸಮಾನತೆಯ ವ್ಯವಸ್ಥೆ ಮತ್ತು ಅತ್ಯಂತ ಕ್ರೂರವಾದ ವರ್ಣಾಶ್ರಮ ಹಾಗೂ ಜಾತಿ ಪದ್ದತಿ ತಾಂಡವವಾಡುತಿದ್ದ ಅಂದಿನ ಕಾಲದಲ್ಲಿ ನಾರಾಯಣ ಗುರುಗಳು ಎಲ್ಲಾ ಮತ ಧರ್ಮ, ಜಾತಿ ಯವರಿಗಾಗಿ ಶ್ರೀಕ್ಷೇತ್ರ ಕುರ್ದೋಳಿಯನ್ನು ಪ್ರತಿಷ್ಠಾಪಿಸಿದರು.
1912ರಲ್ಲಿ ಗೋಕರ್ಣನಾಥೇಶ್ವರ ದೇವಾಲಯ ಸ್ಥಾಪನೆ
ಮಂಗಳೂರಿನ ಸುಪ್ರಸಿದ್ದ ಕುದ್ರೋಳಿ ಗೋಕರ್ಣನಾಥ ದೇವಾಲಯಕ್ಕೆ 105 ವರ್ಷ. ಹಿಂದೆ ದೇವಾಲಯಗಳೆಲ್ಲವೂ ಸವರ್ಣೀಯರ ನಿಯಂತ್ರಣದಲ್ಲಿದ್ದ ಕಾಲ ತುಳುನಾಡಿನ ಅಸ್ಪ್ರಶ್ಯವರ್ಗದವರೆಂದು ಪರಿಗಣಿಸಲಾದ ಬಿಲ್ಲವ, ನಾಮದಾರಿ, ಈಡಿಗ, ಭೈದ್ಯ, ಬೆಳ್ಚಡ ಸೇರಿದಂತೆ ಪರಿಶಿಷ್ಟ ಜಾತಿ ಪಂಗಡದವರಿಗೆ ದೇವಾಲಯಗಳಲ್ಲಿ ಪ್ರವೇಶವಿರಲಿಲ್ಲ. ಈ ಹಿನ್ನಲೆಯಲ್ಲಿ ಕೇರಳದಿಂದ ಆಗಮಿಸಿದ ಬ್ರಹ್ಮಶ್ರೀ ನಾರಾಯಣ ಗುರುಗಳು 1912ರಲ್ಲಿ ಮಂಗಳೂರಿನ ಕುದ್ರೋಳಿಯಲ್ಲಿ ಗೋಕರ್ಣನಾಥೇಶ್ವರ ದೇವಾಲಯ ಪ್ರತಿಷ್ಠಾಪಿಸಿದರು. ಆ ಕಾಲದಲ್ಲಿ ಪ್ರತಿಷ್ಠಾಪನೆಗೊಂಡ ಹುಲ್ಲಿನ ಹೊದಿಕೆಯ ಗುಡಿ ಇಂದು ಬೃಹತ್ ದೇವಾಲಯವಾಗಿ ರೂಪುಗೊಂಡಿದೆ. ದೇಶ ವಿದೇಶಗಳಲ್ಲಿ ಪ್ರಖ್ಯಾತಿ ಪಡೆದಿದೆ.
ಮಾಜಿ ಕೇಂದ್ರ ಸಚಿವ ಬಿ. ಜನಾರ್ಧನ ಪೂಜಾರಿಯವರ ಸಂಕಲ್ಪ
ಹುಲ್ಲಿನ ಹೊದಿಕೆ ಹೊಂದಿದ್ದ ಗೋಕರ್ಣನಾಥೇಶ್ವರ ಗುಡಿ ನಂತರ ಹಂತಹಂತವಾಗಿ ಜಿರ್ಣೋದ್ದಾರಗೊಳ್ಳುತ್ತಾ ಬಂದಿತ್ತು. 1984ರಲ್ಲಿ ಬಿಲ್ಲವ ಸಮಾಜದ ಪ್ರಶ್ನಾತೀತ ನಾಯಕ ಮಾಜಿ ಕೇಂದ್ರ ಸಚಿವ ಬಿ. ಜನಾರ್ಧನ ಪೂಜಾರಿ ಈ ಕ್ಷೇತ್ರವನ್ನು ಜಾತ್ಯಾತೀತ ಧರ್ಮಾತೀ ಕ್ಷೇತ್ರವಾಗಿ ನವ ನಿರ್ಮಾಣ ಮಾಡಲು ಸಂಕಲ್ಪ ತೊಟ್ಟು ಎಲ್ಲಾ ಮುಖಂಡರನ್ನು ಒಗ್ಗೂಡಿಸಿ ಸುಂದರ ಬೃಹತ್ ಗೋಕರ್ಣನಾಥ ದೇವಾಲಯ ಕಟ್ಟಿಸಿದರು.
ಗೋಕರ್ಣನಾಥ ದೇವಾಲಯವನ್ನು ಉದ್ಘಾಟಿಸಿದ್ದ ರಾಜೀವ್ ಗಾಂಧಿ
1991ರಲ್ಲಿ ಮಹಾ ಕುಂಬಾಭಿಷೇಕದೊಂದಿಗೆ ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ದೇವಾಲಯವನ್ನು ಉದ್ಘಾಟಿಸಿದರು. ಚೋಳ ಶಿಲ್ಪಕಲೆಯ ನೈಪುಣ್ಯತೆಯನ್ನು ಮೈಗೂಡಿಸಿಕೊಂಡ ಈ ದೇವಾಲಯ ದಿನ ಕಳೆದಂತೆ ಭಕ್ತ ಸಮೂಹವನ್ನು ದೇಶ ವಿದೇಶದಿಂದ ತನ್ನೆಡೆಗೆ ಆಕರ್ಷಿಸತೊಡಗಿದ್ದು, ಇಂದು ವಿಶ್ವ ಪ್ರಸಿದ್ದ ಆಧ್ಯಾತ್ಮಿಕ ಪ್ರವಾಸಿ ತಾಣವಾಗಿ ಗುರುತಿಸಿಕೊಂಡಿದೆ. ಕಳೆದ ಹಲವಾರು ವರ್ಷಗಳಿಂದ ಇಲ್ಲಿ ಅದ್ದೂರಿಯಾಗಿ ದಸರಾ ಉತ್ಸವ ನೆರವೇರಿಸಲಾಗುತ್ತಿದೆ. ಇಲ್ಲಿ ನವದುರ್ಗೆಯರನ್ನು ಹಾಗೂ ಶಾರದಾ ಮಾತೆಯನ್ನು ಪ್ರತಿಷ್ಠಾಪಿಸಿ ಏಕ ಕಾಲದಲ್ಲಿ ಪೂಜೆ ಸಲ್ಲಿಸಲಾಗುತ್ತದೆ. ಅದ್ದೂರಿಯಾಗಿ ಜರಗುವ ಈ ಉತ್ಸವವನ್ನು ನೋಡಲು ದೇಶ ವಿದೇಶಗಳಿಂದ ಭಕ್ತರು ಇಲ್ಲಿ ಬರುತ್ತಾರೆ.
ಭವ್ಯ ಮೆರವಣಿಗೆ ನೊಡುವುದೇ ಕಣ್ಣಿಗೆ ಹಬ್ಬ
ಒಂದೆಡೆ ಮೈಸೂರಿನಲ್ಲಿ ವಿಶ್ವ ವಿಖ್ಯಾತ ಜಂಬು ಸವಾರಿ ನಡೆದರೆ, ಇನ್ನೊಂದೆಡೆ ಮಂಗಳೂರಿನಲ್ಲಿ ನವದುರ್ಗೆಯರ ಭವ್ಯ ಸವಾರಿ ಜರುಗುತ್ತದೆ. ಭವ್ಯ ಮೆರವಣಿಗೆಯ ನಂತರ 9 ದಿನಗಳ ಕಾಲ ನಡೆದ ಮಂಗಳೂರು ದಸರಾ ಉತ್ಸವಕ್ಕೆ ತೆರೆಬೀಳುತ್ತದೆ. ಮಂಗಳೂರಿನಲ್ಲಿ ನಡೆಯುವ ಈ ವಿಜೃಂಭಣೆಯ ದಸರಾ ಉತ್ಸವದಲ್ಲಿ ಲಕ್ಷಾಂತರ ಜನರು ಭಾಗವಹಿಸುತ್ತಾರೆ. ನವದುರ್ಗೆಯರ ಶೋಭಾಯಾತ್ರೆ ನಗರದ ಪ್ರಮುಖ ಬೀದಿಗಳಲ್ಲಿ ನಡೆಯುತ್ತದೆ. ಈ ವಿಜೃಂಭಣೆಯ ಶೋಭಾಯಾತ್ರೆ ಸರಿಸುಮಾರು 9 ಕಿ.ಮೀ ಸಂಚರಿಸುತ್ತದೆ. ಬಣ್ಣ ಬಣ್ಣದ ಮಿನುಗು ದೀಪಗಳಿಂದ ಅಲಂಕೃತ ಗೊಂಡ ಈ ಪ್ರಮುಖ ಬೀದಿಯಲ್ಲಿ ಶೋಭಾಯಾತ್ರೆಯನ್ನು ನೊಡುವುದೇ ಕಣ್ಣಿಗೆ ಹಬ್ಬ.