ಆಳ್ವರ ತೇಜೋವಧೆ ಖಂಡನೀಯ: ಕ್ಯಾ. ಗಣೇಶ್ ಕಾರ್ಣಿಕ್
ಮಂಗಳೂರು, ಆಗಸ್ಟ್ 3: ಮೂಡಬಿದ್ರೆಯ ಸಂಸ್ಥೆಯಲ್ಲಿ ಕಲಿಯುತ್ತಿದ್ದ ವಿದ್ಯಾರ್ಥಿನಿ ಕಾವ್ಯ ಅಸಹಜ ಸಾವಿನ ಪ್ರಕರಣವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ದೃಶ್ಯ ಮಾಧ್ಯಮಗಳಲ್ಲಿ ಅತಿರಂಜಿತವಾಗಿ ವರ್ಣಿಸಿ ಸಂಸ್ಥೆಯ ಹಾಗೂ ಡಾ. ಮೋಹನ್ ಆಳ್ವರ ತೇಜೋವಧೆ ಮಾಡುತ್ತಿರುವುದು ಖಂಡನೀಯ ಎಂದು ವಿಧಾನಸಭಾ ಪ್ರತಿಪಕ್ಷ ಸಚೇತಕ ಕ್ಯಾ . ಗಣೇಶ್ ಕಾರ್ಣಿಕ್ ಹೇಳಿದ್ದಾರೆ.
"ಪೊಲೀಸ್ ಇಲಾಖೆ ಈ ಪ್ರಕರಣದ ತನಿಖೆಯನ್ನು ಕೂಡಲೇ ಮುಗಿಸಿ ಸತ್ಯ ಸಂಗತಿಯನ್ನು ಸಾರ್ವಜನಿಕರಿಗೆ ಮನದಟ್ಟು ಮಾಡಿಸಿಕೊಡಬೇಕು. ಕಾವ್ಯ ಪ್ರತಿಭಾವಂತ ಕ್ರೀಡಾಪಟು ಎಳೆಯ ವಯಸ್ಸಿನಲ್ಲಿ ಅಗಲಿರುವುದು ನಿಜವಾಗಿಯೂ ಖೇದಕರ . ಪೊಲೀಸ್ ಇಲಾಖೆ ಕಾವ್ಯ ಸಾವನ್ನು ಮೆಡಿಕೋ ಲೀಗಲ್ ಕೇಸ್ ಎಂದು ದಾಖಲಿಸಿಕೊಂಡಿದೆ . ತನಿಖೆ ನಡೆಯುತ್ತಿದೆ. ಈ ಸಮಯದಲ್ಲಿ ತನಿಖೆ ದಾರಿ ತಪ್ಪಿಸಲು ಸಾಮಾಜಿಕ ಜಾಲತಾಣ ಹಾಗೂ ದೃಶ್ಯ ಮಾಧ್ಯಮಗಳಲ್ಲಿ ಮಾಡುವಂತಹ ಚರ್ಚೆಗಳು ಆಳ್ವಾಸ್ ಸಂಸ್ಥೆಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳ ಹೆತ್ತವರ ಜತೆಯಲ್ಲಿ ಸಿಬ್ಬಂದಿ ವರ್ಗಕ್ಕೂ ಆತಂಕ ಸೃಷ್ಟಿ ಮಾಡಲಾಗುತ್ತಿದೆ," ಎಂದು ಕಾರ್ಣಿಕ್ ಹೇಳಿದರು.
"ಮೂರು ದಶಕಗಳಿಂದಲೂ ನಾಡಿನ ಸಹಸ್ರಾರು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಆಳ್ವಾಸ್ ಶಿಕ್ಷಣ ಸಂಸ್ಥೆ ಶೈಕ್ಷಣಿಕ , ಸಾಂಸ್ಕೃತಿಕ, ಸಾಹಿತ್ಯಿಕ ಹಾಗೂ ಕ್ರೀಡಾಕ್ಷೇತ್ರದಲ್ಲಿ ಅದ್ವಿತೀಯ ಸಾಧನೆ ಮಾಡಿದೆ. ಈ ಕಾರಣದಿಂದ ವೈಯಕ್ತಿಕವಾಗಿ ಹಾಗೂ ಸಂಸ್ಥೆಯ ಕುರಿತು ಒಂದು ವರ್ಗ ಷಡ್ಯಂತ್ರ ನಡೆಸುತ್ತಿರುವ ನಾಗರಿಕ ಸಮಾಜವನ್ನು ಆತಂಕಕ್ಕೆ ಈಡು ಮಾಡಿದೆ," ಎಂದು ಹೇಳಿದ ಕಾರ್ಣಿಕ್ ಕಾವ್ಯ ಕುಟುಂಬಕ್ಕೆ ಸರಕಾರದಿಂದಲೂ ಪರಿಹಾರ ನೀಡಬೇಕು ಎಂದು ಆಗ್ರಹಿಸಲಾಗುವುದು ಎಂದರು.
ಉಗ್ರಪ್ಪ ರಾಜ್ಯಕ್ಕೊಬ್ಬರೇ ಸಂವಿಧಾನ ತಜ್ಞ!
ಮಹಿಳಾ ಮತ್ತು ಮಕ್ಕಳ ದೌರ್ಜನ್ಯ ತಡೆ ಸಮಿತಿ ಅಧ್ಯಕ್ಷ ವಿ.ಎಸ್ ಉಗ್ರಪ್ಪ ಅವರು 'ರಾಜ್ಯಕೊಬ್ಬರೇ ಸಂವಿಧಾನ ತಜ್ಞರು' ಎಂದು ಕಾರ್ಣಿಕ್ ಇದೇ ಸಂದರ್ಭದಲ್ಲಿ ಲೇವಡಿ ಮಾಡಿದರು.
"ಉಗ್ರಪ್ಪ ಅವರು ಕಳೆದ ಕೆಲವು ಸಮಯದಿಂದ ಮಹಿಳಾ ಮತ್ತು ಮಕ್ಕಳ ದೌರ್ಜನ್ಯ ಸಮಿತಿಯ ವರದಿ ನೀಡಿಲ್ಲ . ಮೊದಲು ಈ ಕುರಿತು ವರದಿ ನೀಡಲಿ," ಎಂದು ಟೀಕಿಸಿದರು.
ಶಿಕ್ಷಣ ಸಂಸ್ಥೆಗೆ ಮಾನ್ಯತೆ ನೀಡುವಾಗ ಅದಕ್ಕೊಂದು ಇಲಾಖೆಯ ಮಾನದಂಡ ಇರುತ್ತದೆ . ಇದರ ಆಧಾರದಲ್ಲಿಯೇ ಮಾನ್ಯತೆ ನೀಡಲಾಗುತ್ತದೆ. ಉಗ್ರಪ್ಪ ಅವರು ಸಲಹೆ ಸೂಚನೆಗಳನ್ನು ಮಾತ್ರ ನೀಡಬಹುದು. ಆದರೆ ಅದನ್ನು ಪಾಲಿಸುವ ಕೆಲಸ ನಡೆಯುವುದಿಲ್ಲ . ಮುಖ್ಯವಾಗಿ ಸದನದಲ್ಲಿ ತೀರ್ಮಾನವಾದ ಬಳಿಕವಷ್ಟೇ ವರದಿಗೆ ಬೆಲೆ ಬರುತ್ತದೆ ಎಂದು ಕಾರ್ಣಿಕ್ ತಿಳಿಸಿದರು.