ಮಂಗಳೂರು: ಮಹಿಳೆ ಚುಡಾಯಿಸಿದ ವ್ಯಕ್ತಿಗೆ ಯುವಕರಿಂದ ಥಳಿತ
ಮಂಗಳೂರು, ಡಿಸೆಂಬರ್, 01: ಮಹಿಳೆಯೋರ್ವಳನ್ನು ಪದೇ ಪದೇ ಚುಡಾಯಿಸುತ್ತಿದ್ದ ವ್ಯಕ್ತಿಯೊಬ್ಬನ ಮೇಲೆ ಯುವಕರು ಹಲ್ಲೆ ನಡೆಸಿರುವ ಘಟನೆ ಮಡಿಪು ಬಾಳೆಪುಣಿ ಗ್ರಾಮದ ಮುದುಂಗರ ಕಟ್ಟೆಯಲ್ಲಿ ಸೋಮವಾರ ನಡೆದಿದೆ.
ಮುನೀರ್ ಅಹಮದ್ ಸಖಾಫಿ ಹಲ್ಲೆಗೊಳಗಾದ ವ್ಯಕ್ತಿ. ಸ್ಥಳೀಯ ಮಹಿಳಾ ಜನಪ್ರತಿನಿಧಿಯು ಮುದುಂಗರ ಕಟ್ಟೆಯ ಉಸ್ತಾದ ಚುಡಾಯಿಸುತ್ತಾನೆ ಎಂದು ಮನೆಯವರಿಗೆ ತಿಳಿಸಿದ ಹಿನ್ನೆಲೆಯಲ್ಲಿ ಈ ಘಟನೆ ನಡೆದಿದೆ.[ಟ್ವೀಟ್ ಮಾಡಿ ಕಾಮುಕನಿಂದ ಮುಕ್ತಿ ಪಡೆದ ಯುವತಿ]
ಮುನೀರ್ ಅಹಮದ್ ಕೆ.ಸಿ ರೋಡ್ ಮಸೀದಿಯಲ್ಲಿ ಕಳೆದ ಒಂದೂವರೆ ವರ್ಷದಿಂದ ಮೊಹಿಲಾರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಸೋಮವಾರ ಬೆಳಗ್ಗೆ ಸಾಲೆತ್ತೂರು ಕೊಲ್ನಾಡುದಲ್ಲಿರುವ ತಮ್ಮ ಮನೆಗೆ ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ಎರಡು ಬೈಕುಗಳಲ್ಲಿ ಬಂದ ಐವರು ಯುವಕರು ಮುನೀರ್ ಗೆ ಹೊಡೆದಿದ್ದಾರೆ.
ಹಲ್ಲೆ ನಡೆಸಿದವರನ್ನು ಕಣ್ಣಾರೆ ಕಂಡ ಸ್ಥಳೀಯರು ಕೊಣಾಜೆ ಪೊಲೀಸ್ ಠಾಣೆಯಲ್ಲಿ ದೂರು ನೀಡಲು ತೆರಳಿದ್ದಾರೆ. ಆಗ ಹಲ್ಲೆ ನಡೆಸಿದ ಆರೋಪಿಗಳು ಪೊಲೀಸ್ ಠಾಣೆ ಎದುರು ಜಮಾಯಿಸಿದಾಗ ಪರಿಸ್ಥಿತಿ ಉದ್ವಿಗ್ನಗೊಂಡಿದ್ದು, ಪ್ರಶಾಂತ್ ನನ್ನು ಪೊಲೀಸರು ಬಂಧಿಸಿದ್ದಾರೆ.[ಮಹಿಳೆ ಮನೆಗೆ 'ಡ್ಯೂಟಿ' ಮಾಡಲು ಹೋಗಿ ಪ್ಯಾದೆ ಸಿಕ್ಕಿಬಿದ್ದ!]
ಹಲ್ಲೆಗೊಳಗಾದ ಮುನೀರ್ ಆರು ಜನರ ವಿರುದ್ಧ ದೂರು ನೀಡಿದ್ದರೆ, ಇತ್ತ ಮುದುಂಗರಕಟ್ಟೆಯ ಮಹಿಳೆ ಮುನೀರ್ ಸಖಾಫಿಯೇ ತನಗೆ ಲೈಂಗಿಕ ಕಿರುಕುಳ ನೀಡುತ್ತಿರುವುದಾಗಿ ದೂರು ನೀಡಿದ್ದು, ಕೊಣಾಜೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
ಬಳಿಕ ಸ್ಥಳೀಯ ಜಿಲ್ಲಾ ಪಂಚಾಯತ್ ಸದಸ್ಯ ಸಂತೋಷ್ ಕುಮಾರ್ ರೈ ಬೋಳಿಯಾರ್ ಮತ್ತು ಮುಡಿಪುವಿನ ಸಮಾಜ ಸೇವಕ ಎಸ್. ಕೆ. ಹಾಝರ್ ಅವರ ಮುಂದಾಳತ್ವದಲ್ಲಿ ಇಬ್ಬರು ತಂಡಗಳ ನಡುವೆ ರಾಜಿ ಸಂಧಾನ ನಡೆದು ಪ್ರಕರಣ ಸುಖಾಂತ್ಯ ಕಂಡಿದೆ.