ಕೊಡಗು, ಕೇರಳ ಜನರ ನೆರವಿಗೆ ನಿಂತ ದ.ಕ.ಧಾರ್ಮಿಕ, ಸಾಮಾಜಿಕ ಸಂಸ್ಥೆಗಳು
ಮಂಗಳೂರು, ಆಗಸ್ಟ್ 19: ಅತಿವೃಷ್ಟಿ ಹಾಗು ಭಾರೀ ಭೂ ಕುಸಿತದಿಂದ ನಲುಗಿರುವ ಕೊಡಗು ಜಿಲ್ಲೆ ಮತ್ತು ಕೇರಳ ರಾಜ್ಯದ ಜನರ ನೆರವಿಗೆ ದಕ್ಷಿಣ ಕನ್ನಡದ ಧಾರ್ಮಿಕ ಹಾಗು ಸಾಮಾಜಿಕ ಸಂಘ ಸಂಸ್ಥೆಗಳು ಮುಂದಾಗಿವೆ.
ಭಾರೀ ಮಳೆ, ನೆರೆ ಹಾಗೂ ಭೂಕುಸಿತಕ್ಕೆ ರಸ್ತೆ ಸಂಪರ್ಕ, ಮನೆ, ಮಠ ಕಳೆದುಕೊಂಡ ಸಂತ್ರಸ್ತರಿಗೆ ದಕ್ಷಿಣ ಕನ್ನಡ ಜಿಲ್ಲೆಯ ಜನರು ಸಕರಾತ್ಮಕವಾಗಿ ಸ್ಪಂದಿಸುತ್ತಿದ್ದಾರೆ.
ಕೊಡಗು ಪ್ರವಾಹ ಸಂತ್ರಸ್ತರಿಗಾಗಿ ಅತ್ಯಗತ್ಯ ಸಹಾಯವಾಣಿ
ದಕ್ಷಿಣ ಕನ್ನಡ ಜಿಲ್ಲಾಡಳಿತ ಅವಶ್ಯ ವಸ್ತುಗಳ ಸಂಗ್ರಹ ಕೇಂದ್ರ ಸ್ಥಾಪಿಸಿ ಅಧಿಕಾರಿಗಳನ್ನು ನೇಮಕ ಮಾಡಿದೆ. ನಗರದ ಕೆಪಿಟಿ ಕಾಲೇಜಿನಲ್ಲಿ ಈ ಕೇಂದ್ರ ಸ್ಥಾಪಿಸಲಾಗಿದ್ದು, ಮುಂಜಾನೆ ಒಂಭತ್ತು ಗಂಟೆಯಿಂದ ಸಂಜೆ ಆರು ಗಂಟೆಯವರೆಗೆ ಈ ಕೇಂದ್ರ ಅವಶ್ಯ ವಸ್ತುಗಳನ್ನು ಸಂಗ್ರಹಿಸಲಿದೆ.
ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ಮಂದಿರ, ಮಸೀದಿ, ಚರ್ಚ್ ಗಳಲ್ಲಿ ಕೇರಳ ಹಾಗೂ ಕೊಡಗಿನ ಸಂತ್ರಸ್ತರಿಗಾಗಿ ಅಗತ್ಯ ವಸ್ತುಗಳು ಹಾಗು ಹಣ ಸಂಗ್ರಹಿಸಲಾಗುತ್ತಿದೆ. ಕೇರಳ ಸಂತ್ರಸ್ತರಿಗಾಗಿ ಭಾರತೀಯ ತಟರಕ್ಷಣಾ ಪಡೆಯ ಮಂಗಳೂರು ಯುನಿಟ್ ಅಗತ್ಯ ವಸ್ತುಗಳನ್ನು ಸಂಗ್ರಹಿಸುವ ಅಭಿಯಾನ ಆರಂಭಿಸಿದೆ.
ಸಂಘ ಸಂಸ್ಥೆ ಗಳು ತಂದು ಕೊಡುವ ವಸ್ತುಗಳನ್ನು ಹೊತ್ತು ಕೊಸ್ಟ್ ಗಾರ್ಡ್ ಹಡಗೊಂದು ಇಂದು ನವ ಮಂಗಳೂರು ಬಂದರಿನಿಂದ ಕೇರಳಕ್ಕೆ ಹೋಗಲಿದೆ.
ಕೊಡಗು, ಕೇರಳಕ್ಕೆ ಪರಿಹಾರ ಘೋಷಣೆ ಮಾಡಿದ ಕೊಲ್ಲೂರು ದೇವಾಲಯ
ಕೇರಳ ಹಾಗೂ ಕೊಡಗಿನ ಪ್ರಕೃತಿ ವಿಕೋಪದ ಪ್ರವಾಹ ಪೀಡಿತ ಪ್ರದೇಶಗಳ ನೆರೆ ಸಂತ್ರಸ್ತರಿಗೆ ಹಾಲನ್ನು ನೇರವಾಗಿ ಕಾಯಿಸದೆ ಕುಡಿಯಲು ಅನುವಾಗುವಂತೆ 17 ಸಾವಿರ ಲೀಟರ್ ತೃಪ್ತಿ ಹಾಲನ್ನು ಕಳುಹಿಸಲು ದಕ್ಷಿಣ ಕನ್ನಡ ಸಹಕಾರಿ ಹಾಲು ಒಕ್ಕೂಟ ತೀರ್ಮಾನಿಸಿದೆ. ಈ ಹಿನ್ನೆಲೆಯಲ್ಲಿ ತೃಪ್ತಿ ಹಾಲನ್ನು ತೆಗೆದುಕೊಂಡು 2 ವಾಹನಗಳು ಇಂದು ಹೊರಡಲಿವೆ.
ನೆರೆ ಪೀಡಿತ ಕೊಡಗು ಮತ್ತು ಕೇರಳ ನಿರಾಶ್ರಿತರಿಗೆ ಕ್ಯಾಂಪ್ಕೋ ನೆರವು ನೀಡಲು ಮುಂದಾಗಿದೆ. ಕ್ಯಾಂಪ್ಕೋ ಸಂಸ್ಥೆಯ ಸಿಬ್ಬಂದಿಗಳ ಒಂದು ದಿನದ ಸಂಬಳವನ್ನು ಸಂತ್ರಸ್ತರಿಗೆ ನೀಡಲು ನಿರ್ಧರಿಸಿದ್ದಾರೆ. ಕ್ಯಾಂಪ್ಕೋ ದಲ್ಲಿ ಸುಮಾರು 2,500 ಸಾವಿರ ಸಿಬ್ಬಂದಿ ಇದ್ದು, ಅವರ ಒಂದು ದಿನದ ಸಂಬಳ ಸುಮಾರು 15 ಲಕ್ಷ ರೂಪಾಯಿ ಆಗಲಿದೆ.
ಈ ನಡುವೆ ನಾಡಿನ ಸುಭಿಕ್ಷೆಗೆ ಕುಕ್ಕೆ ದೇವಳದಲ್ಲಿ ಇಂದು ಭಾನುವಾರ ವಿಶೇಷ ಪ್ರಾರ್ಥನೆ ನಡೆಯಲಿದೆ. ಜನಜೀವನ, ಪ್ರಾಣಿ ಸಂಕುಲ ಶಾಂತಿಯುತವಾಗಿ ಸುಖ-ನೆಮ್ಮದಿಯಿಂದ ಜೀವನ ನಡೆಸಲು ಕೃಪೆ ತೋರುವಂತೆ ಪ್ರಾರ್ಥನೆ ನಡೆಯಲಿದೆ. ಕುಕ್ಕೆ ಸುಬ್ರಹ್ಮಣ್ಯ ದೇವಳದಲ್ಲಿ ಮಧ್ಯಾಹ್ನದ ಮಹಾಪೂಜೆ ಬಳಿಕ ಈ ವಿಶೇಷ ಪ್ರಾರ್ಥನೆ ನಡೆಯಲಿದೆ.