ರೋಹಿಂಗ್ಯಾ ಮುಸ್ಲಿಮರಿಗೆ ಆಶ್ರಯ ನೀಡಬೇಕೆಂದು ಮಂಗಳೂರಲ್ಲಿ ಪ್ರತಿಭಟನೆ
ಮಂಗಳೂರು, ಸೆಪ್ಟೆಂಬರ್ 16 : ಭಾರತದಲ್ಲಿ ರೋಹಿಂಗ್ಯಾ ಮುಸ್ಲಿಮರಿಗೆ ಆಶ್ರಯ ನೀಡಬೇಕು ಎಂದು ಒತ್ತಾಯಿಸಿ ಮಂಗಳೂರಿನಲ್ಲಿ ಎಸ್ ಕೆ ಎಸ್ಎಸ್ಎಫ್ ಸಂಘಟನೆ ಪ್ರತಿಭಟನೆ ನಡೆಸಿದೆ .
ಎಲ್ಲಿಂದಲೋ ಬಂದವರು, ಎಲ್ಲೂ ಇಲ್ಲವಾದ ರೋಹಿಂಗ್ಯಾ ಮುಸ್ಲಿಮರ ಸುತ್ತಮುತ್ತ
ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿ ಎದುರು ಸಭೆ ನಡೆಸಿದ ಎಸ್ ಕೆ ಎಸ್ ಎಸ್ ಎಫ್ ಮುಖಂಡರು ಕೇಂದ್ರ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಮ್ಯಾನ್ಮಾರ್ ನಲ್ಲಿ ಹತ್ಯೆಯಾಗುತ್ತಿರುವ ರೋಹಿಂಗ್ಯಾ ಮುಸ್ಲಿಮರನ್ನು ಭಾರತ ಓಡಿಸುತ್ತಿದ್ದು, ಅಮಾನವೀಯವಾಗಿ ವರ್ತಿಸುತ್ತಿದೆ ಎಂದು ಕಿಡಿ ಕಾರಿದರು.
ಆಶ್ರಯ ಅರಸಿ ಬಂದ ರೋಹಿಂಗ್ಯಾ ಮುಸ್ಲಿಮರನ್ನು ಹೊರ ಹಾಕುತ್ತಿರುವ ಕ್ರಮ ಸರಿಯಲ್ಲ್ ಎಂದು ಆರೋಪಿಸಿದರು. ರೋಹಿಂಗ್ಯಾ ಮುಸ್ಲಿಮರ ಹತ್ಯೆ ಎಗ್ಗಿಲ್ಲದೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ಮಾನವೀಯತೆ ನೆಲೆಯಲ್ಲಿ ಹಿಂಸೆಯನ್ನು ಖಂಡಿಸುವುದರ ಬದಲು ಆಶ್ರಯ ಅರಸಿ ಬಂದವರನ್ನು ಕೇಂದ್ರ ಸರಕಾರ ಇಲ್ಲಿಂದ ಓಡಿಸುತ್ತಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೋಹಿಂಗ್ಯಾ ಮುಸ್ಲಿಮರ ಗಡೀಪಾರಿಗೆ ಕೇಂದ್ರದ ಚಿಂತನೆ
ದೇಶಾದ್ಯಂತ ಮುಸ್ಲಿಂ ಸಮುದಾಯ ಹಾಗೂ ಜಾತ್ಯತೀತವಾದಿಗಳ ವಿರುದ್ಧ ನಡೆಯುತ್ತಿರುವ ಗುಂಪು ದಾಳಿಗಳು ಮುಂದುವರೆಯುತ್ತಿದೆ. ಭಾರತೀಯ ಮುಸ್ಲಿಮರ ಸ್ವಾತಂತ್ರ್ಯವನ್ನು ಕಸಿದುಕೊಳ್ಳಲಾಗುತ್ತಿದೆ ಎಂದು ಆರೋಪಿಸಿದರು.
ತ್ರಿವಳಿ ತಲಾಕ್ ಕುರಿತು ಕಾನೂನು ರಚಿಸುವ ಸಂದರ್ಭದಲ್ಲಿ ಮುಸ್ಲಿಂ ಪಂಡಿತರನ್ನು ಸೇರಿಸಿಕೊಳ್ಳಬೇಕು ಹಾಗೂ ಆಶ್ರಯ ಅರಸಿಕೊಂಡು ಬಂದ ರೋಹಿಂಗ್ಯಾ ಮುಸ್ಲಿಮರಿಗೆ ಆಶ್ರಯ ನೀಡಬೇಕು, ಮ್ಯಾನ್ಮಾರ್ ನಲ್ಲಿ ನಡೆಯುತ್ತಿರುವ ಹತ್ಯೆಯನ್ನು ಭಾರತ ಖಂಡಿಸಬೇಕು ಎಂದು ಪ್ರತಿಭಟನಾನಿರತರು ಒತ್ತಾಯಿಸಿದರು.