ಕರಾವಳಿಯಲ್ಲಿ ಧೋ ಎಂದು ಸುರಿಯುತ್ತಿರೋ ಮಳೆ: ಭಯ ಹುಟ್ಟಿಸಿದ ಸುಂಟರಗಾಳಿ
Recommended Video
ಮಂಗಳೂರು, ಜೂನ್.20: ರಾಜ್ಯದಾದ್ಯಂತ ಮುಂಗಾರು ಚುರುಕುಗೊಂಡಿದೆ. ಕರಾವಳಿಯಲ್ಲಿ ಭಾರೀ ಮಳೆ ಹಿನ್ನೆಲೆಯಲ್ಲಿ ಅಗತ್ಯ ಬಿದ್ದರೆ ಶಾಲೆ, ಕಾಲೇಜಿಗೆ ರಜೆ ನೀಡಲು ಆಯಾ ಶಿಕ್ಷಣ ಸಂಸ್ಥೆಗಳು ನಿರ್ಧರಿಸಬೇಕು ಎಂದು ದ.ಕ. ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಸಲಹೆ ನೀಡಿದ್ದಾರೆ.
ಗ್ರಾಮೀಣ ಪ್ರದೇಶಗಳಲ್ಲಿ ಮಳೆಯ ಪರಿಸ್ಥಿತಿ ಅವಲೋಕಿಸಿ ರಜೆ ಘೋಷಿಸಲು ಸೂಚಿಸಲಾಗಿದೆ. ಶಾಲಾಡಳಿತ ಮಂಡಳಿಗೆ ಜಿಲ್ಲಾಡಳಿತ ಸೂಚಿಸಿದೆ. ನಿನ್ನೆ ರಾತ್ರಿಯಿಂದ ಧೋ ಎಂದು ಮಳೆ ಬಿಡದೆ ಸುರಿಯುತ್ತಿದೆ.
ಹವಾಮಾನ ವರದಿ: ಕರಾವಳಿಯಲ್ಲಿ ಮುಂದುವರೆಯಲಿದೆ ಮಳೆ
ಸೋಮವಾರ ಸಂಜೆ ಭಾರೀ ಸುಂಟರಗಾಳಿ: ಅಮೇರಿಕಾದ ಸಮುದ್ರದಲ್ಲಿ ಬೃಹತ್ ಸುಳಿಗಾಳಿ ಅಥವಾ ಸುಂಟರಗಾಳಿ ಸರ್ವೆ ಸಾಮಾನ್ಯ. ಯುರೋಪ್ ನ ಸಮುದ್ರ ಕಿನಾರೆಗಳು ಇದಕ್ಕೆ ಹೊರತಾಗಿಲ್ಲ. ಪ್ರತಿವರ್ಷ ಈ ಟರ್ನಾಡೊ ಅಥವಾ ಸುಂಟರಗಳಿಗೆ ನೂರಾರು ಜನರು ಬಲಿಯಾಯಾಗುತ್ತಾರೆ. ಈ ಬೃಹತ್ ಸುಂಟರಗಾಳಿಯ ಸುಳಿಯಲ್ಲಿ ಸಿಲುಕುವ ಎಲ್ಲವೂ ಸರ್ವನಾಶ .
ಈ ಸುಂಟರಗಾಳಿ ಬಗ್ಗೆ ಕೆಲವು ವರ್ಷಗಳ ಹಿಂದೆ ಹಾಲಿವುಡ್ ನಲ್ಲಿ ಟ್ವಿಸ್ಟರ್ ಹೆಸರಿನ ಸಿನಿಮಾ ಕೂಡ ನಿರ್ಮಾಣವಾಗಿತ್ತು. ವಿಶ್ವದಾದ್ಯಂತ ಈ ಚಿತ್ರ ದಾಖಲೆಯ ಗಳಿಕೆ ಮಾಡಿತ್ತು. ಇದೇ ಟ್ವಿಸ್ಟರ್ ಚಿತ್ರವನ್ನು ನೆನಪಿಸುವ ಘಟನೆ ಮಂಗಳೂರು ಕಡಲ ಕಿನಾರೆಯಲ್ಲಿ ನಡೆದಿದೆ. ಮಂಗಳೂರಿನ ಪ್ರಸಿದ್ದ ಪಣಂಬೂರು ಬೀಚ್ ನಲ್ಲಿ ಸೋಮವಾರ ಸಂಜೆ ಭಾರೀ ಸುಂಟರಗಾಳಿ ಕಾಣಿಸಿಕೊಂಡಿತ್ತು.
ಆಕಾಶದಲ್ಲಿ ಕಾರ್ಮುಗಿಲ ನಡುವಿನಿಂದ ಸುಳಿ ಸುತ್ತುತ್ತಾ ಸಮುದ್ರಕ್ಕೆ ಇಳಿದ ಸುಂಟರಗಾಳಿ ಬಳಿಕ ದಡದತ್ತ ಸಾಗಿ ತನ್ನ ವೇಗ ಕಳೆದುಕೊಂಡಿತು. ಈ ಸನ್ನಿವೇಶ ಕಡಲ ಕಿನಾರೆಯಲ್ಲಿ ಸೇರಿದವರಿಗೆ ಈ ಹಿಂದೆ ನೋಡಿದ ಟ್ವಿಸ್ಟರ್ ಚಿತ್ರ ನೆನಪಿಸಿ ಎದೆಯಲ್ಲಿ ನಡುಕ ಹುಟ್ಟಿಸಿತು.
ದಡದತ್ತ ಪ್ರವೇಶಿಸುತ್ತಿದ್ದಂತೆ ವೇಗ ಕಳೆದುಕೊಂಡಿದ್ದರಿಂದ ಅದೃಷ್ಟವಶಾತ್ ಯಾವುದೇ ಆಸ್ತಿಪಾಸ್ತಿಗಳಿಗೆ ಹಾನಿಯಾಗಿಲ್ಲ.
ಪಣಂಬೂರು ಕಡಲ ಕಿನಾರೆಯಲ್ಲಿ ಬೋರ್ಗರೆಯುವ ಸಮುದ್ರದ ವಿಹಂಗಮ ನೋಟದೊಂದಿಗೆ ತಂಗಾಳಿಯನ್ನು ಅನುಭವಿಸುತ್ತಿದ್ದವರಿಗೆ ಏಕಾಏಕಿ ಕಡಲಲ್ಲಿ ಸೃಷ್ಟಿಯಾದ ಸುಂಟರಗಾಳಿ ಆತಂಕಕ್ಕಿಡು ಮಾಡಿತು.
ತಕ್ಷಣ ಎಚ್ಚೆತ್ತುಕೊಂಡ ಬೀಚ್ ರಕ್ಷಣಾ ದಳದ ಸಿಬ್ಬಂದಿ ಅಪಾಯ ಮುನ್ಸೂಚನೆಯ ಸೈರನ್ ಮೊಳಗಿಸಿ ಜನರನ್ನು ಕಡಲ ಕಿನಾರೆಯಿಂದ ದೂರ ಸರಿಯುವಂತೆ ಮಾಡಿದರು.
ಸಾಮಾನ್ಯವಾಗಿ ಮೋಡ ಹಾಗೂ ಭೂಮಿಯ ಸಂಪರ್ಕದೊಂದಿಗೆ ಮುನ್ನುಗ್ಗುವ ಸುಂಟರಗಾಳಿಗಳು ಅದರಲ್ಲೂ ಸಮುದ್ರದಲ್ಲಿ ಏಳುವ ಸುಂಟರಗಾಳಿ ಅಪಾಯಕಾರಿ ಎಂದೇ ಪರಿಗಣಿಸಲಾಗುತ್ತವೆ. ಇಂತಹ ಕಡಲ ಮದ್ಯೆ ಏಳುವ ಸುಂಟರಗಾಳಿಗಳು ಭಾರತದ ಕಡಲತೀರದಲ್ಲಿ ಅಪರೂಪ.
ಪಣಂಬೂರು ಬೀಚ್ ನಲ್ಲಿ ಸೋಮವಾರ ನಡೆದ ಈ ಘಟನೆಯ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.