'ಕುಮಾರಸ್ವಾಮಿಯನ್ನು ಇಳಿಸುವ ತನಕ ಸಿದ್ದರಾಮಯ್ಯಗೆ ಸಮಾಧಾನವಿಲ್ಲ'
Recommended Video
ಮಂಗಳೂರು, ಆಗಸ್ಟ್ 28 : ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಜೆಡಿಎಸ್ ಮತ್ತು ಕಾಂಗ್ರೆಸ್ ಸಮ್ಮಿಶ್ರ ಸರಕಾರ ಇನ್ನೊಂದು ತಿಂಗಳಲ್ಲಿ ಪತನವಾಗುವುದು ನಿಶ್ಚಿತ ಎಂದು ಕೇಂದ್ರ ಸಚಿವ ಡಿ .ವಿ ಸದಾನಂದ ಗೌಡ ಭವಿಷ್ಯ ನುಡಿದಿದ್ದಾರೆ.
ಮಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೂಂದಿಗೆ ಮಾತನಾಡಿದ ಅವರು, ಸಮ್ಮಿಶ್ರ ಸರಕಾರದ ಬಗ್ಗೆ ಕಾಂಗ್ರೆಸ್ ಶಾಸಕರೇ ಅಪಸ್ವರ ಎತ್ತಿದ್ದಾರೆ. ಇದು ಗಂಭೀರವಾದ ವಿಚಾರ ಎಂದು ಅವರು ಅಭಿಪ್ರಾಯಪಟ್ಟರು.
ಮತ್ತೆ ಸಿಎಂ ಆಗ್ತೀನಿ: ಸಿದ್ದು ಮಾತಿಗೆ ಕುಮಾರಸ್ವಾಮಿ ಏನಂದ್ರು?
ಎಚ್.ಡಿ.ಕುಮಾರಸ್ವಾಮಿ ಅವರನ್ನುಮುಖ್ಯಮಂತ್ರಿ ಕುರ್ಚಿಯಿಂದ ಇಳಿಸುವುದೇ ಸಿದ್ದರಾಮಯ್ಯ ಅವರ ಗುರಿ. ತಾನೊಬ್ಬ ಅನಾಥ ಶಿಶು ಅನ್ನುವುದನ್ನು ಕುಮಾರಸ್ವಾಮಿಯೇ ಹೇಳುತ್ತಿದ್ದಾರೆ. ಇಕ್ಕಟ್ಟಿನಲ್ಲಿ ಸಿಲುಕಿ ಅಧಿಕಾರ ನಡೆಸುತ್ತಿರುವುದಾಗಿ ಈ ಹಿಂದೆಯೇ ಮಾಧ್ಯಮದ ಮುಂದೆ ಹೇಳಿಕೊಂಡಿದ್ದಾರೆ ಎಂದರು.
ಸಿದ್ದರಾಮಯ್ಯ ಅವರ ದ್ವೇಷ ಶಮನ ಆಗಲು ಸಾಧ್ಯವೇ ಇಲ್ಲ. ಹಾಗೊಂದು ವೇಳೆ ಆಗಬೇಕಿದ್ದರೆ ಕುಮಾರಸ್ವಾಮಿ ಅಧಿಕಾರದಿಂದ ಇಳಿಯಬೇಕು ಎಂದು ವ್ಯಂಗ್ಯವಾಡಿದ ಡಿ.ವಿ.ಸದಾನಂದ ಗೌಡ, ಈ ಸರಕಾರ ಹೆಚ್ಚು ದಿನ ಉಳಿಯಲ್ಲ ಅನ್ನೋದು ನೂರಕ್ಕೆ ನೂರು ಸತ್ಯ ಎಂದು ಭವಿಷ್ಯ ನುಡಿದರು.
ಮತ್ತೆ ಮುಖ್ಯಮಂತ್ರಿಯಾಗ್ತೀನಿ : ಸಿದ್ದರಾಮಯ್ಯ ಮಾತಿನ ಒಳಾರ್ಥವೇನು?
ಸ್ವಯಂಕೃತ ಅಪರಾಧದಿಂದಲೇ ಅವರು ಅಧಿಕಾರದಿಂದ ಕೆಳಗಿಳಿಯುತ್ತಾರೆ. ಬಿಜೆಪಿ ಯಾವುದೇ ಹಂತದಲ್ಲಿ ಸರಕಾರ ಬೀಳಿಸಲು ಹೋಗಲ್ಲ. ನಮಗೆ ಬೇರೆಯವರು ಬೆಂಬಲ ಕೊಡಲು ಬಂದಾಗ ಸರಕಾರ ರಚನೆ ಬಗ್ಗೆ ಯೋಚನೆ ಮಾಡುತ್ತೇವೆ. ಸೆಪ್ಟೆಂಬರ್ ತಿಂಗಳ ಒಳಗೆ ಈ ಸರಕಾರ ಪತನವಾಗುವುದು ಖಚಿತ ಎಂದರು.
ಈ ಸಂದರ್ಭದಲ್ಲಿ ಕೊಡಗಿನ ದುರಂತಕ್ಕೆ ಕೇಂದ್ರ ಅನುದಾನ ವಿಚಾರವಾಗಿ ಮಾತನಾಡಿದ ಅವರು, ಎನ್ ಡಿಆರ್ ಎಫ್ ಪರಿಹಾರ ಕೊಡವುದಕ್ಕೆ ಕೆಲವು ನಿಯಮಗಳಿವೆ. ರಾಜ್ಯದಿಂದ ನಷ್ಟ ಆಗಿರುವ ಬಗ್ಗೆ ಮಾಹಿತಿ ಹಾಗೂ ಬೇಡಿಕೆ ಹೋಗಬೇಕು. ಎಷ್ಟು ಬೇಗ ಈ ಬೇಡಿಕೆ ಪಟ್ಟಿ ಹೋಗುತ್ತದೋ ಅಷ್ಟು ಬೇಗ ಪರಿಹಾರ ಧನ ಬಿಡುಗಡೆ ಆಗತ್ತದೆ. ಕೊಡಗಿಗೆ ದೊಡ್ಡ ಮೊತ್ತದ ಪರಿಹಾರ ನೀಡಲು ಕೇಂದ್ರ ಬದ್ಧವಾಗಿದೆ ಎಂದು ಸದಾನಂದ ಗೌಡ ಹೇಳಿದರು.