ಮಂಗಳೂರು : ಮತ್ತೆ ಗುಂಡಿನ ಸದ್ದು, ಉದ್ಯಮಿ ಮನೆ ಮೇಲೆ ದಾಳಿ
ಮಂಗಳೂರು, ಡಿಸೆಂಬರ್ 24 : ಮಂಗಳೂರು ಮತ್ತೆ ಬೆಚ್ಚಿ ಬಿದ್ದಿದೆ. ಮಂಗಳೂರು ಹೊರವಲಯದಲ್ಲಿ ಮತ್ತೆ ಗುಂಡಿನ ಸದ್ದು ಕೇಳಿಬಂದಿದೆ. ನಗರದ ಹೊರವಲಯದ ಮುಲ್ಕಿಯಲ್ಲಿ ಉದ್ಯಮಿಯೊಬ್ಬರ ಮನೆಯ ಮೇಲೆ ಕಳೆದ ರಾತ್ರಿ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ.
ಮುಲ್ಕಿ ಬಸ್ ನಿಲ್ದಾಣದ ಮುಂಭಾಗದಲ್ಲಿರುವ ಉದ್ಯಮಿ ನಾಗರಾಜ್ ಎಂಬುವವರ ಮನೆಯ ಮೇಲೆ ಬೈಕಿನಲ್ಲಿ ಬಂದ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಶನಿವಾರ ರಾತ್ರಿ ಸುಮಾರು 9.30 ಕ್ಕೆ ಈ ಘಟನೆ ನಡೆದಿದೆ.
ಮಂಗಳೂರು ಶೂಟೌಟ್ ಹಿಂದೆ ಭೂಗತ ಪಾತಕಿ ರವಿ ಪೂಜಾರಿ?
ನಾಗರಾಜ್ ಅವರ ಮನೆಯ ಗೇಟಿನ ಬಳಿ ಓರ್ವ ದುಷ್ಕರ್ಮಿ ಹೆಲ್ಮೆಟ್ ಹಾಕಿಕೊಂಡು ಬಂದು ಕಾಲಿಂಗ್ ಬೆಲ್ ಒತ್ತಿದ್ದಾನೆ. ಮನೆಯವರು ಸಂಶಯದಿಂದ ಬಾಗಿಲು ತೆರೆದಿಲ್ಲ. ಆಗ ಕಿಟಿಕಿ ಮೂಲಕ ಎರಡು ಸುತ್ತು ಗುಂಡು ಹಾರಿಸಿದ್ದಾನೆ.
ಗುಂಡಿನ ದಾಳಿಯಿಂದಾಗಿ ಮನೆಯ ಒಳಗಿದ್ದ ಕನ್ನಡಿ ಒಡೆದಿದೆ. ಅದಲ್ಲದೆ ಇನ್ನೊಂದು ಗುಂಡು ಮನೆಯ ದೇವರ ಕೋಣೆಗೆ ನುಗ್ಗಿದೆ. ಬಳಿಕ ನಾಗರಾಜ್ ಅವರ ಮನೆಯ ಎದುರು ಪಾರ್ಕ್ ಮಾಡಿದ್ದ ಆಡಿ ಕಾರಿಗೆ ಗುಂಡು ಹಾರಿಸಿದ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.
ಮಂಗಳೂರಿನ ಕಾರ್ ಸ್ಟ್ರೀಟ್ ನ ಬಟ್ಟೆಯಂಗಡಿಯಲ್ಲಿ ಶೂಟೌಟ್
ನಾಗರಾಜ ಮುಲ್ಕಿಯಲ್ಲಿ ಉದ್ಯಮಿಯಾಗಿದ್ದು ಕೋಲ್ನಾಡಿನಲ್ಲಿ ಸ್ಪನ್ಪೈಪು ಫ್ಯಾಕ್ಟರಿ ಹೊಂದಿದ್ದಾರೆ. ಅದಲ್ಲದೆ ಮುಲ್ಕಿ ನಗರ ಪಂಚಾಯತ್ ಗುತ್ತಿಗೆದಾರರು ಆಗಿದ್ದಾರೆ. ಕಳೆದ ಕೆಲ ವರ್ಷಗಳ ಹಿಂದೆ ನಾಗರಾಜ್ ಅವರಿಗೆ ಬೆದರಿಕೆ ಬರುತ್ತಿದ್ದು, ಹಫ್ತಾಕ್ಕಾಗಿ ಪೀಡಿಸುತ್ತಿದ್ದರು ಎಂದು ತಿಳಿದುಬಂದಿದೆ.
ದಾಖಲೆಗಳಿಲ್ಲದೆ ಸಾಗಿಸುತ್ತಿದ್ದ 1 ಕೋಟಿ ರುಪಾಯಿ ನಗದು ವಶಕ್ಕೆ
ಕಳೆದ ಕೆಲ ತಿಂಗಳಿನಿಂದ ನಾಗರಾಜ್ರವರಿಗೆ ಭೂಗತ ಪಾತಕಿಗಳಿಂದ ಕರೆಗಳು ಬರುತ್ತಿದ್ದರೂ ನಾಗರಾಜ್ ಪೊಲೀಸರಿಗೆ ಮಾಹಿತಿ ನೀಡಿರಲಿಲ್ಲ. ನಾಗರಾಜ್ ಅವರ ಮನೆಗೆ ಮಂಗಳೂರು ಪೋಲೀಸ್ ಆಯುಕ್ತರು, ಸಿಸಿಬಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಡಿ.8ರಂದು ರಾತ್ರಿ ಮಂಗಳೂರು ನಗರದ ರಥಬೀದಿಯ ಸಂಜೀವ ಶೆಟ್ಟಿ ಬಟ್ಟೆ ಮಳಿಗೆ ಮೇಲೆ ಗುಂಡಿನ ದಾಳಿ ನಡೆದಿತ್ತು. ಇದೀಗ ಅದೇ ಮಾದರಿಯಲ್ಲಿ ಗುತ್ತಿಗೆದಾರನೊಬ್ಬನ ಮನೆಗೆ ದಾಳಿ ನಡೆದಿದ್ದು ದುಷ್ಕರ್ಮಿಗಳಿಗೆ ಪೊಲೀಸರ ಭಯ ಇಲ್ಲದಂತಾಗಿದೆ.